ಕಾಲೇಜು ದಿನಗಳಲ್ಲೂ ಕಲೆಯನ್ನು ಮುಂದುವರಿಸಿ, ರವಿ ಸುಬ್ರಮಣ್ಯ
ಮಕ್ಕಳು ಎಸ್ಎಸ್ಎಲ್ಸಿ ಮುಗಿಸಿ, ಕಾಲೇಜು ಪ್ರವೇಶಿಸಿದ ನಂತರವೂ ಭರತನಾಟ್ಯ ಸೇರಿದಂತೆ ಕಲಾಪ್ರದರ್ಶನವನ್ನು ಮುಂದುವರಿಸಬೇಕೆಂದು ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಮನವಿ ಮಾಡಿದ್ದಾರೆ.
ಬೆಂಗಳೂರು, ಆ 12: ಕೆಲವೊಂದು ಪೋಷಕರು ಮಕ್ಕಳು ಎಸ್ಎಸ್ಎಲ್ಸಿ ಮುಗಿಸಿ, ಕಾಲೇಜು ಪ್ರವೇಶಿಸಿದ ನಂತರ ಭರತನಾಟ್ಯ ಸೇರಿದಂತೆ ಕಲಾಪ್ರದರ್ಶನವನ್ನು ಮುಂದುವರಿಸದೇ ಇರುವ ತೀರ್ಮಾನಕ್ಕೆ ಬರುವುದನ್ನು ಕಂಡಿದ್ದೇನೆ, ಅದು ಹಾಗಾಗಬಾರದು ಎಂದು ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಹೇಳಿದ್ದಾರೆ.
ನಗರದ ಶ್ರೀನಿವಾಸ ನಗರದಲ್ಲಿರುವ ಪ್ರಣವಾಂಜಲಿ ಅಕಾಡೆಮಿ ಫಾರ್ ಫರ್ಪಾರ್ಮೆನ್ಸ್ ಸಂಸ್ಥೆಯ ಆರನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ರವಿ ಸುಬ್ರಮಣ್ಯ, ಭರತನಾಟ್ಯ ನಮ್ಮ ದೇಶದ ಅಪ್ರತಿಮ ಕಲೆ, ಮಕ್ಕಳು ಆ ಕಲೆಯ ಮೇಲೆ ಇನ್ನೂ ಹೆಚ್ಚಿನ ಒಲವು ತೋರಿ ಭರತನಾಟ್ಯವನ್ನು ಇನ್ನಷ್ಟು ಜನಪ್ರಿಯಗೊಳಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಸಹಾಯಕ ಉಪನ್ಯಾಸಕಿ ಡಾ. ಸುಶೀಲಾ ನರಸಿಂಹಮೂರ್ತಿ ಮಾತನಾಡುತ್ತಾ, ಮಕ್ಕಳ ನೃತ್ಯವನ್ನು ನೋಡಿ ಮಂತ್ರಮುಗ್ದನಾಗಿದ್ದೇನೆ. ಹೊಸ ಪೀಳಿಗೆಯಿಂದ ಕಲೆಯನ್ನು ಆರಾಧಿಸುವ ಕೆಲಸ ಮುಂದುವರಿಯಲಿ ಎಂದು ಆಶಿಸಿದರು.
ಇಷ್ಟೊಂದು ಮಕ್ಕಳನ್ನು ಒಂದು ವೇದಿಕೆಯಲ್ಲಿ ಸೇರಿ ಅತ್ಯುತ್ತಮ ಪ್ರದರ್ಶನ ಹೊರತೆಗೆಯುವುದು ಸುಲಭದ ಮಾತಲ್ಲ. ಆ ಕೆಲಸವನ್ನು ಅತ್ಯಂತ ಶಿಸ್ತುಬದ್ದವಾಗಿ ಪ್ರಣವಾಂಜಲಿ ಸಂಸ್ಥೆಯ ಸಹಾಯಕ ನಿರ್ದೇಶಕಿ ಪವಿತ್ರ ಮಂಜುನಾಥ್ ಮತ್ತು ಕಲಾ ನಿರ್ದೇಶಕಿ ಗಾಯತ್ರಿ ಮಯ್ಯ ಮಕ್ಕಳಿಂದ ಹೊರತೆಗೆದಿದ್ದಾರೆಂದು ಕಿರುತೆರೆ ಕಲಾವಿದ ರೇಣುಕ್ ಮಾತಡ್ ಹೇಳಿದ್ದಾರೆ.
ಪ್ರಣವಾಂಜಲಿ ಸಂಸ್ಥೆಯ ಆರನೇ ವಾರ್ಷಿಕೋತ್ಸವ ನಗರದ ಜಯನಗರ ಏಳನೇ ಬ್ಲಾಕಿನಲ್ಲಿನ ಜೆಎಸ್ಎಸ್ ಸಭಾಂಗಣದಲ್ಲಿ ಶನಿವಾರ (ಆ 12) ನಡೆಯಿತು. ಪುಟಾಣಿ ಮಕ್ಕಳು ಸೇರಿದಂತೆ ಸುಮಾರು ಎಂಬತ್ತಕ್ಕೂ ಹೆಚ್ಚು ಯುವ ಪ್ರತಿಭೆಗಳು ಭರತನಾಟ್ಯದ ವಿವಿಧ ಆಯಾಮಗಳ ನೃತ್ಯ ಪ್ರದರ್ಶನ ನಡೆಸಿದರು.