ಊಬ್ಲೋ ವಾಚ್ ವಿವಾದ : ಡಾ.ಸುಧಾಕರ ಶೆಟ್ಟಿ ಹೇಳಿದ್ದೇನು?
ಬೆಂಗಳೂರು, ಮಾರ್ಚ್ 01 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಯಲ್ಲಿರುವ ಊಬ್ಲೋ ವಾಚ್ ಡಾ.ಸುಧಾಕರ ಶೆಟ್ಟಿ ಅವರದ್ದಲ್ಲ ಎಂಬುದು ಸಾಬೀತಾಗಿದೆ. ಪೊಲೀಸರನ್ನು ಭೇಟಿ ಮಾಡಿ ಈ ಕುರಿತು ಸುಧಾಕರ ಶೆಟ್ಟಿ ಅವರು ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಕೈಯಲ್ಲಿರುವ ವಾಚ್ ಸುಧಾಕರ ಶೆಟ್ಟಿ ಅವರದ್ದು ಎಂದು ಕುಮಾರಸ್ವಾಮಿ ಹೇಳಿದ್ದರು.
ಡಾ.ಸುಧಾಕರೆ ಶೆಟ್ಟಿ ಅವರು ಸೋಮವಾರ ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಅವರನ್ನು ಭೇಟಿ ಮಾಡಿದ್ದರು. 'ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಯಲ್ಲಿರುವ ವಾಚ್ಗೂ ಕಳುವಾಗಿರುವ ನನ್ನ ವಾಚ್ಗೂ ಸಂಬಂಧವಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ. [ಊಬ್ಲೋ ವಾಚ್ ವಿವಾದ : ವರದಿ ಕೇಳಿದ ಹೈಕಮಾಂಡ್]
ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸುಧಾಕರ ಶೆಟ್ಟಿ ಅವರು, 'ಸಿದ್ದರಾಮಯ್ಯ ಅವರ ಕಟ್ಟಿದ್ದ ವಾಚ್ ಮತ್ತು ಕಳುವಾಗಿರುವ ನನ್ನ ವಾಚ್ ಬ್ರ್ಯಾಂಡ್ ಬೇರೆ. ಈ ಬಗ್ಗೆ ಪೊಲೀಸ್ ಆಯುಕ್ತರಿಗೂ ಹೇಳಿಕೆ ನೀಡಿದ್ದೇನೆ' ಎಂದು ಹೇಳಿದರು. [ಸಖತ್ ಮಿಂಚುತ್ತಿರುವ ದುಬಾರಿ ಉಬ್ಲೋ ವಾಚುಗಳ ಕಥೆ]
ಫೆ.26ರಂದು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, 'ಸಿದ್ದರಾಮಯ್ಯ ಅವರ ಕೈಯಲ್ಲಿರುವ ವಾಚ್ ಡಾ.ಸುಧಾಕರೆ ಶೆಟ್ಟಿ ಅವರಿಗೆ ಸೇರಿದ್ದು, ವಾಚ್ ಕಳೆದು ಹೋಗಿರುವ ಬಗ್ಗೆ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ' ಎಂದು ಹೇಳಿಕೆ ನೀಡಿದ್ದರು. ಸುಧಾಕರೆ ಶೆಟ್ಟಿ ಅವರು ಹೇಳಿದ್ದೇನು? ಚಿತ್ರಗಳಲ್ಲಿ ನೋಡಿ...... [ಸಿದ್ದುಗೆ ಕಂಟಕ ತರಲಿದೆಯಾ ಉಬ್ಲೋ ಡೈಮಂಡ್ ವಾಚ್?]
ಮೇಘರಿಕ್ ಭೇಟಿ ಮಾಡಿದ ಸುಧಾಕರ ಶೆಟ್ಟಿ
ನಿವೃತ್ತ ವೈದ್ಯ ಡಾ.ಸುಧಾಕರ ಶೆಟ್ಟಿ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಅವರನ್ನು ಭೇಟಿ ಮಾಡಿ, 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಯಲ್ಲಿರುವ ವಾಚ್ ನನ್ನದಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. 'ಸಿದ್ದರಾಮಯ್ಯ ಅವರ ಕಟ್ಟಿದ್ದ ವಾಚ್ ಮತ್ತು ಕಳುವಾಗಿರುವ ನನ್ನ ವಾಚ್ ಬ್ರ್ಯಾಂಡ್ ಬೇರೆ' ಎಂದು ಹೇಳಿಕೆ ನೀಡಿದ್ದಾರೆ.
ಸುಧಾಕರ ಶೆಟ್ಟಿ ಅವರು ಹೇಳುವುದೇನು?
'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಚ್ ಬಗ್ಗೆ ನಡೆಯುತ್ತಿರುವ ಚರ್ಚೆಗೂ ಕಳುವಾದ ನನ್ನ ವಾಚ್ಗೂ ಯಾವುದೇ ರೀತಿಯ ಸಂಬಂಧವಿಲ್ಲ. ಪೊಲೀಸ್ ಆಯುಕ್ತರಿಗೆ ಈ ಕುರಿತು ಸ್ಪಷ್ಟನೆಯನ್ನು ನೀಡಿದ್ದೇನೆ' ಎಂದು ಸುಧಾಕರ ಶೆಟ್ಟಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮೇ 7ರಂದು ದೂರು ಕೊಟ್ಟಿದ್ದರು
'2015ರ ಮೇ 7ರಂದು ಸುಧಾಕರ ಶೆಟ್ಟಿ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಅಪಾರ್ಟ್ಮೆಂಟ್ನಲ್ಲಿ ವಾಚು, ಉಂಗುರ ಕಳುವಾಗಿದೆ ಎಂದು ದೂರು ಕೊಟ್ಟಿದ್ದಾರೆ. ಕಳುವಾದ ವಾಚ್ ಕಂಪನಿಗಳನ್ನು ಅವರು ನಮೂದಿಸಿರಲಿಲ್ಲ. ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ 2 ರೋಲೆಕ್ಸ್ ಹಾಗೂ ಚೋಪಾರ್ಡ್ ವಾಚ್ ಕಳುವಾಗಿದೆ' ಎಂದು ಹೇಳಿದ್ದಾರೆ ಎಂದು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಚರಣ್ ರೆಡ್ಡಿ ತಿಳಿಸಿದ್ದಾರೆ.
ಮೇಘರಿಕ್ ಹೇಳುವುದೇನು?
'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಚ್ ಮತ್ತು ತಮ್ಮ ವಾಚ್ಗೂ ಸಂಬಂಧವಿಲ್ಲ ಎಂದು ಸುಧಾಕರ ಶೆಟ್ಟಿ ಅವರು ಹೇಳಿದ್ದಾರೆ. ಅವರ ವಾಚ್ ಕಳವು ವಿಚಾರದ ಬಗ್ಗೆ ತನಿಖೆ ನಡೆಯುತ್ತಿದೆ' ಎಂದು ಎನ್.ಎಸ್.ಮೇಘರಿಕ್ ಹೇಳಿದ್ದಾರೆ.
ಕುಮಾರಸ್ವಾಮಿ ಅವರು ಏನು ಹೇಳಿದ್ದರು?
ಫೆ.26ರಂದು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಕುಮಾರಸ್ವಾಮಿ ಅವರು, 'ಸಿದ್ದರಾಮಯ್ಯ ಅವರ ಕೈಯಲ್ಲಿರುವ ವಾಚ್ ಡಾ.ಸುಧಾಕರ ಶೆಟ್ಟಿ ಅವರದ್ದು. ವಾಚ್ ಕಳೆದು ಹೋಗಿದೆ ಎಂದು ಅವರು ಪೊಲೀಸ್ ಠಾಣೆಗೆ ಈ ಕುರಿತು ದೂರು ನೀಡಿದ್ದಾರೆ. ಆದರೆ, ಈ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಈ ಬಗ್ಗೆ ತುರ್ತಾಗಿ ತನಿಖೆಯಾದರೆ ವಾಚ್ ಯಾರಿಗೆ ಸೇರಿದ್ದು? ಎಂಬುದು ಬಹಿರಂಗವಾಗಲಿದೆ' ಎಂದು ಹೇಳಿದ್ದರು.