ರಾಜಾ ಕಾಲುವೆ ಒತ್ತುವರಿ ತೆರವು ಸಮರ್ಥಿಸಿಕೊಂಡ ಸಿದ್ದರಾಮಯ್ಯ
ಬೆಂಗಳೂರು, ಆಗಸ್ಟ್ 08 : 'ರಾಜಾ ಕಾಲುವೆ, ಕೆರೆ ತೆರವು ಮಾಡದಿದ್ದರೆ ಮುಂದೊಂದು ದಿನ ಚೆನ್ನೈ ನಗರದ ಪರಿಸ್ಥಿತಿ ನಮಗೂ ಬರಬಹುದು, ಒತ್ತುವರಿ ತೆರವಿನಿಂದ ಕೆಲವರಿಗೆ ತೊಂದರೆ ಆಗಿರಬಹುದು. ಹಲವರಿಗೆ ಅನುಕೂಲವೇ ಆಗಲಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸೋಮವಾರ ವಿಧಾನಸೌಧದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಬೆಂಗಳೂರಿನಲ್ಲಿ ನಡೆಯುತ್ತಿರುವ ಕೆರೆ ಮತ್ತು ರಾಜಾ ಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡರು. 'ರಾಜಾ ಕಾಲುವೆ ಒತ್ತುವರಿ ಮಾಡಿಕೊಂಡವರು ಎಷ್ಟು ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು' ಎಂದು ಎಚ್ಚರಿಸಿದರು.[ಭಾನುವಾರವೂ ಬೆಂಗಳೂರಲ್ಲಿ ಜೆಸಿಬಿ ಘರ್ಜನೆ]
'ರಾಜಕಾಲುವೆ, ಕೆರೆ ತೆರವು ಮಾಡದಿದ್ದರೆ ಮುಂದೊಂದು ದಿನ ಚೆನ್ನೈ ನಗರದ ಪರಿಸ್ಥಿತಿ ನಮಗೂ ಬರಬಹುದು. ಒತ್ತುವರಿ ತೆರವಿನಿಂದ ಕೆಲವರಿಗೆ ತೊಂದರೆ ಆಗಿರಬಹುದು. ಹಲವರಿಗೆ ಅನುಕೂಲವೇ ಆಗಲಿದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು' ಎಂದು ತಿಳಿಸಿದರು.['ಈಗಷ್ಟೇ ಮನೆ ಕಟ್ಟಿದ್ದೇನೆ, ಗೃಹ ಪ್ರವೇಶ ಆಗಿಲ್ಲ ಬಿಟ್ಟು ಬಿಡಿ']
ಶನಿವಾರದಿಂದ ಒತ್ತುವರಿ ತೆರವು : ಜುಲೈ ತಿಂಗಳ ಅಂತ್ಯದಲ್ಲಿ ಬೆಂಗಳೂರಿನಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಲಾಗದೆ ಟೀಕೆಗೆ ಗುರಿಯಾಗಿದ್ದ ಬಿಬಿಎಂಪಿ, ಶನಿವಾರಿಂದ ರಾಜಾ ಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಆರಂಭಿಸಿದೆ.[ರಾಜಾ ಕಾಲುವೆ ಒತ್ತುವರಿ ತೆರವಿಗೆ ಸಿದ್ದರಾಮಯ್ಯ ಆದೇಶ]
ರಾಜಾ ಕಾಲುವೆ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾವರಣೆ ನಡೆಸುತ್ತಿದೆ. ಬೊಮ್ಮನಹಳ್ಳಿ ವಲಯದ ಅವನಿ ಶೃಂಗೇರಿನಗರ, ಮಹದೇವಪುರ ವಲಯದ ಕಸವನಹಳ್ಳಿ ಹಾಗೂ ಯಲಹಂಕ ವಲಯದ ಶಿವನಹಳ್ಳಿಯಲ್ಲಿ ಶನಿವಾರಿಂದ ಕಾರ್ಯಾಚರಣೆ ನಡೆಯುತ್ತಿದೆ.