ಇದೂ ಒಂದು ಸುದ್ದೀನಾ ಅಂತ ಮೂಗು ಮುರಿಯಬೇಡಿ
ಬೆಂಗಳೂರು, ಫೆ. 4 : "ಏನ್ರೀ ಇದು ಸುದ್ದಿ? ಇದೂ ಒಂದು ಸುದ್ದೀನಾ? ಏನು ದೊಡ್ಡು ಸುದ್ದಿಯಂತೆ ಹಾಕಿದ್ದೀರಲ್ವಾ, ಪ್ರಕಟಿಸುವ ಮುನ್ನ ವಿಚಾರ ಮಾಡಬಾರದಾ?" ಇಂಥ ಹಲವಾರು ಒಕ್ಕಣೆಗಳು ಕಾಮೆಂಟ್ ರೂಪದಲ್ಲಿ ಸುದ್ದಿಮನೆಗೆ ಬರುತ್ತಲೇ ಇರುತ್ತವೆ. ಕೆಲವರಿಗೆ ರುಚಿಸಬಹುದು, ಹಲವರಿಗೆ ಅಪಥ್ಯವಾಗಬಹುದು. ಆದರೂ, ಸುದ್ದಿಸುದ್ದಿನೆ!
ಹೀಗೆ ಸುದ್ದಿಗಳನ್ನು ಜಡ್ಜ್ ಮಾಡುವ ಪ್ರಕ್ರಿಯೆಯಲ್ಲಿ ಹಲವಾರು ಸುದ್ದಿಗಳು, ಸಣ್ಣವೇ ಆಗಿರಬಹುದು, ಅವರು ನಮ್ಮ ಕಣ್ಣಿಂದ ತಪ್ಪೇ ಹೋಗಿರುತ್ತವೆ. ಅದು ಬೇಕರಿ ತರಬೇತಿ ಶಿಬಿರವೇ ಆಗಿರಬಹುದು ಅಥವಾ ಕೋಳಿ ಸಾಕಾಣಿಕೆ ಕುರಿತ ಸುದ್ದಿಯೇ ಆಗಿರಬಹುದು. ಆದರೆ, ಓದುಗರು ಮಾತ್ರ ತಮ್ಮ ಅಭಿರುಚಿಗೆ ತಕ್ಕಂತೆಯೇ ಹೆಕ್ಕಿಹೆಕ್ಕಿ ಸುದ್ದಿಗಳನ್ನು ಓದುತ್ತಾರೆ.
ಅಂಥ ಕೆಲವೊಂದು ತುಣುಕು ಸುದ್ದಿಗಳನ್ನು ಇಲ್ಲಿ ಸಂಗ್ರಹಿಸಿ ನೀಡಲಾಗಿದೆ. ಇವುಗಳಲ್ಲಿ ಸುದ್ದಿಯ ಅಂಶ ಇದೆ ಅಂತ ನಿಮಗೆ ಮನವರಿಕೆಯಾದರೆ ನಿಮಗಿಷ್ಟವಾದದ್ದನ್ನು ಹೆಕ್ಕಿ ಓದಿರಿ.
***
ಚಾಮರಾಜಪೇಟೆಯಲ್ಲಿ ರಿಯಾಯಿತಿ ಪುಸ್ತಕ ಮಾರಾಟ
ಕನ್ನಡ ಪುಸ್ತಕ ಪ್ರಾಧಿಕಾರದಿಂದ ಚಾಮರಾಜ ನಗರದ ಪೇಟೆ ಶಾಲೆ ಮೈದಾನದಲ್ಲಿ ಫೆಬ್ರವರಿ 11 ರಿಂದ 15 ರವರೆಗೆ ಒಟ್ಟು ಐದು ದಿನಗಳ ಕಾಲ ರಿಯಾಯಿತಿ ಕನ್ನಡ ಪುಸ್ತಕ ಮಾರಾಟ ಮೇಳ-2015 ನ್ನು ಹಮ್ಮಿಕೊಳ್ಳಲಾಗಿದೆ.
ಸಾವಯವ ಕೈತೋಟ ಅಭಿವೃದ್ಧಿ ತರಬೇತಿ
ತೋಟಗಾರಿಕೆ ಇಲಾಖೆಯ ಜೈವಿಕ ಕೇಂದ್ರ ಹುಳಿಮಾವು, ಬೆಂಗಳೂರು ಇಲ್ಲಿ ಫೆಬ್ರವರಿ 13ರಂದು ಬೆಳಿಗ್ಗೆ 9-30ಕ್ಕೆ ಒಂದು ದಿನ "ಸಾವಯವ ತಾರಸಿ ಮತ್ತು ಕೈತೋಟ ಅಭಿವೃದ್ಧಿ" ಬಗ್ಗೆ ತರಬೇತಿ ಕಾರ್ಯಕ್ರಮವನ್ನು ನಗರವಾಸಿಗಳಿಗೆ/ರೈತರಿಗೆ/ಸಾರ್ವಜನಿಕರಿಗೆ/ವಿಧ್ಯಾರ್ಥಿಗಳಿಗೆ ಒಂದು ದಿವಸ ತರಬೇತಿಯನ್ನು ನೀಡಲಿದೆ.
ಈ ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ರೂ. 300/- ಪಾವತಿಸಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಸಮನ್ವಯಾಧಿಕಾರಿ) ಹುಳಿಮಾವು, ಬೆಂಗಳೂರು ಇವರ ಕಚೇರಿಯಲ್ಲಿ ತರಬೇತಿಯ ಮುಂಚಿತವಾಗಿ ನೋಂದಣಿಯನ್ನು ಮಾಡಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ 26582775, 26584904, ಇಮೇಲ್ [email protected] ಸಂಪರ್ಕಿಸಬಹುದು.
ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ನಿರ್ಮಾಣ
ರಾಜ್ಯದಲ್ಲಿ ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮದಡಿ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಗಳ ನಿರ್ಮಾಣದ ಕುರಿತಂತೆ ಸಾರ್ವಜನಿಕರ ಕುಂದುಕೊರತೆಗಳನ್ನು ನೇರವಾಗಿ ರಾಜ್ಯ ಸರ್ಕಾರದ ಗಮನಕ್ಕೆ ತರಲು ಉಚಿತ ಕರೆ ಸಂಖ್ಯೆ 1800-425-85555ಯನ್ನು ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಸ್ಥಾಪಿಸಲಾಗಿದೆ. ಇದರ ಪ್ರಯೋಜನವನ್ನು ಸಾರ್ವಜನಿಕರು ಬಳಸಿಕೊಳ್ಳುವಂತೆ ಸ್ವಚ್ಛ ಭಾರತ್ ಮಿಷನ್ ಮನವಿ ಮಾಡಿದೆ.
ಮಹಿಳಾ ಸಾಧಕಿಯರ ಕುರಿತು ಸಾಕ್ಷ್ಯಚಿತ್ರ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ 2014-15ನೇ ಸಾಲಿನಲ್ಲಿ ರಾಜ್ಯ ಮಹಿಳಾ ಸಾಧಕಿಯರ ಕುರಿತು 15 ನಿಮಿಷಗಳ 41 ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದು, ಈ ಸಾಕ್ಷ್ಯಚಿತ್ರಗಳನ್ನು ಬೆಂಗಳೂರು ದೂರದರ್ಶನ ಕೇಂದ್ರದ ಮೂಲಕ ಪ್ರತಿ ಶನಿವಾರ ಮತ್ತು ಭಾನುವಾರ ಹೊರತುಪಡಿಸಿ ಫೆಬ್ರವರಿ 2ರಿಂದ ಸಂಜೆ 6-45ರಿಂದ 7.00 ಅವಧಿಯಲ್ಲಿ ವಾರದ ಐದು ದಿನಗಳಂದು ಪ್ರಸಾರ ಮಾಡಲಾಗುವುದು. ಸಾಧ್ಯವಾದರೆ ನೋಡಿ ಸಂತೋಷಪಡಿ.
ಮೂರು ವರ್ಷದಲ್ಲಿ ರಾಜ್ಯದಲ್ಲಿ 12,142 ಲೈಂಗಿಕ ದೌರ್ಜನ್ಯ
ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ ಒಟ್ಟಾರೆ 12,142 ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ ಎಂದು ರಾಜ್ಯ ಗೃಹ ಸಚಿವ ಕೆ.ಜೆ. ಜಾರ್ಜ್ ವಿಧಾನಸಭೆಯಲ್ಲಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಶಾಸಕ ಜಗದೀಶ್ ಕುಮಾರ್ ಅವರ ಚುಕ್ಕೆ ಗುರುತ್ತಿಲ್ಲದ ಪ್ರಶ್ನೆಗೆ ಉತ್ತರಿಸಿ ತಿಳಿಸಿದ್ದಾರೆ. ['ರೇಪ್ ಮಾಡುವ ಮುನ್ನ ಈಕೆಯ ವಿಡಿಯೋ ನೋಡಿ']
ರಾಜ್ಯದಲ್ಲಿ 2012ರಲ್ಲಿ 2,978 ಲೈಂಗಿಕ ಪ್ರಕರಣಗಳು, 2013ರಲ್ಲಿ 3,913 ಲೈಂಗಿಕ ಪ್ರಕರಣಗಳು ಹಾಗೂ 2014ರಲ್ಲಿ 5,251 ಲೈಂಗಿಕ ಪ್ರಕರಣಗಳು ವರದಿಯಾಗಿವೆ. ವರದಿಯಾದ ಎಲ್ಲಾ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲುಮಾಡಿ ಕಾನೂನು ರೀತ್ಯ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಿ, ಆರೋಪಿಗಳ ವಿರುದ್ಧ ಸಂಬಂಧಿಸಿದ ನ್ಯಾಯಾಲಯಗಳಲ್ಲಿ ದೋಷಾರೋಪಣಾ ಪತ್ರ ಸಲ್ಲಿಸಲಾಗುತ್ತಿದೆಯಂತೆ. ಅಂತೂ ವರ್ಷದಿಂದ ವರ್ಷಕ್ಕೆ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಲಿವೆ ಅಂತಾಯಿತಲ್ಲ, ಬಿಜೆಪಿ ಪಕ್ಷವೇ ಅಧಿಕಾರದಲ್ಲಿರಲಿ, ಕಾಂಗ್ರೆಸ್ಸೇ ಇರಲಿ.