ಯುವತಿಯರೇ ನೀವೇ ಎಚ್ಚರದಿಂದಿರಿ ಎಂದಿದ್ದು ಸರಿಯಾ?
ಬೆಂಗಳೂರು, ಜನವರಿ 04 : ಎರಡು ದಿನಗಳ ಅಂತರದಲ್ಲಿ ಬೆಂಗಳೂರಿನಲ್ಲಿ ನಡೆದಿರುವ ಎರಡು ಲೈಂಗಿಕ ದೌರ್ಜನ್ಯದ ಘಟನೆಗಳು ಬೆಂಗಳೂರಿನ ಜನತೆಯ ನಿದ್ದೆಯನ್ನು ಕಂಗೆಡಿಸಿರುವುದು ಮಾತ್ರವಲ್ಲ, ಭಾರೀ ಚರ್ಚೆಗೆ, ಟೀಕೆಗೆ ಗುರಿಯಾಗಿವೆ.
ಟಿವಿಗಳಲ್ಲಿ ಇಡೀದಿನ ಪುಂಖಾನುಪುಂಖವಾಗಿ ಚರ್ಚೆಗಳು ನಡೆಯುತ್ತಿವೆ. ಇಂಥ ನಾಚಿಕೆಗೇಡಿನ ಘಟನೆಗೆ ಯಾರು ಹೊಣೆಗಾರರು, ಕಾಮುಕರಿಗೆ ಶಿಕ್ಷೆ ಯಾವ ರೀತಿ ಇರಬೇಕು ಎಂಬಿತ್ಯಾದಿಯಾಗಿ ಪ್ಯಾನಲ್ ಡಿಸ್ಕಶನ್ ಗಳು ನಡೆಯುತ್ತಿವೆ.[ಕಮ್ಮನಹಳ್ಳಿ ದೌರ್ಜನ್ಯ : ಆರು ಶಂಕಿತ ಕಾಮುಕರ ವಿಚಾರಣೆ]
ಈ ನಡುವೆ, ರಾಜ್ಯ ಬಿಜೆಪಿ ಕಾರ್ಯಕರ್ತರು ಬಾಣಸವಾಡಿ ಪೊಲೀಸ್ ಠಾಣೆಯ ಎದಿರು ಪ್ರತಿಭಟನೆ ನಡೆಸಿ, ಈ ಘಟನೆಯಲ್ಲಿ ಭಾಗಿಯಾಗಿರುವ ಕಿಡಿಗೇಡಿಗಳನ್ನು ಕೂಡಲೆ ಬಂಧಿಸಬೇಕು ಎಂದು ಒತ್ತಡ ಹೇರಿದರು ಮತ್ತು ಕಾಂಗ್ರೆಸ್ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು.[ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ]
ಇಂಥ ಘಟನೆಗಳು ನಡೆಯುವುದು ಸಹಜ ಎಂದು ಹೇಳಿ ಕರ್ನಾಟಕದ ಗೃಹ ಸಚಿವರಾದ ಜಿ ಪರಮೇಶ್ವರ್ ಅವರು ತೀವ್ರ ಟೀಕೆಗೆ ಗುರಿಯಾಗಿದ್ದರೆ, ಅದೇ ಪಕ್ಷದ ನಾಯಕಿ ಮೋಟಮ್ಮ ಅವರು ಮತ್ತೊಂದು ಬಗೆಯ ಹೇಳಿಕೆ ನೀಡಿ ವಿವಾದವನ್ನು ಮೈಮೇಲೆಳೆದುಕೊಂಡಿದ್ದಾರೆ.[ಬೆಂಗಳೂರು ಲೈಂಗಿಕ ದೌರ್ಜನ್ಯ : ತಪ್ಪಿತಸ್ಥರ ವಿರುದ್ಧ ಎಫ್ಐಆರ್]
ಯುವತಿರಿಗೆ ಮೋಟಮ್ಮನ ಬುದ್ಧಿವಾದ
ಈ ಕೃತ್ಯವೆಸಗಿದ ಕಾಮುಕರನ್ನು ಖಂಡಿಸುವ ಬದಲು, ತಾವೇ ಒಬ್ಬ ಮಹಿಳೆಯಾಗಿ, ಯುವತಿಯರೇ ಮುನ್ನಚ್ಚರಿಕೆ ವಹಿಸಬೇಕು. ಪುರುಷರು ಕುಡಿದ ಮತ್ತಿನಲ್ಲಿ ಏನು ಮಾಡುತ್ತಾರೋ ಗೊತ್ತಾಗುವುದಿಲ್ಲ. ಮಹಿಳೆಯರು ಒಬ್ಬಂಟಿಯಾಗಿ ಓಡಾಡಬಾರದು ಎಂದು ಬುದ್ಧಿವಾದ ಹೇಳಿದ್ದಾರೆ. ಇವರು ಹೇಳಿದ್ದು ಸರಿಯಾ?
ಕುಕೃತ್ಯ ಖಂಡಿಸಿದ ಉಮಾಶ್ರೀ
ಕಿಡಿಗೇಡಿಗಳ ಕುಕೃತ್ಯವನ್ನು ತೀವ್ರವಾಗಿ ಖಂಡಿಸಿರುವ ಮಹಿಳಾ ಮತ್ತು ಕಲ್ಯಾಣ ಸಚಿವೆಯಾಗಿರುವ ಉಮಾಶ್ರೀ ಅವರು, ನ್ಯಾಯಾಲಯಗಳ ಮೂಲಕ ಈ ಘಟನೆಯಲ್ಲಿ ಭಾಗಿಯಾಗಿರುವ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಆಗ ಮಾತ್ರ ಇಂಥ ಘಟನೆಗಳು ಮರುಕಳಿಸದಿರಲು ಸಾಧ್ಯ ಎಂದಿದ್ದಾರೆ.
ಚೇತನ್ ಭಗತ್ ಚಾಟಿಯೇಟು
ಮಹಿಳೆಯರು ಮಿನಿ ದಿರಿಸನ್ನು ಧರಿಸುವುದರಿಂದಲೇ ದೌರ್ಜನ್ಯಗಳಾಗುವುದು ಎಂಬ ಮಾತಿಗೆ ಪ್ರತಿಕ್ರಿಯಿಸಿರುವ ಚೇತನ್ ಭಗತ್ ಅವರು, ಯುರೋಪ್, ಆಸ್ಟ್ರೇಲಿಯಾ, ಅಮೆರಿಕದಂಥ ರಾಷ್ಟ್ರಗಳಲ್ಲಿ ಕಡಿಮೆ ಬಟ್ಟೆ ಧರಿಸುವ ಮಹಿಳೆಯರ ಮೇಲೆ ಯಾಕೆ ಸಾಮೂಹಿಕ ಅತ್ಯಾಚಾರಗಳಾಗುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರೇನು ಸೌದಿ ಅರೇಬಿಯಾ ಅಲ್ಲ : ರಾಜೀವ್ ಚಂದ್ರಶೇಖರ್
ತನಿಖೆ ನಡೆಸಬೇಕೆಂದರೆ ಲೈಂಗಿಕ ದೌರ್ಜನ್ಯಕ್ಕೊಳದವರು ಪೊಲೀಸ್ ಠಾಣೆಗೆ ಹೋಗಿ ದೂರನ್ನು ನೀಡಬೇಕು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಹೇಳಿರುವುದು ವೃತ್ತಿಪರವಾಗಿ ಒಪ್ಪಿಕೊಳ್ಳುವಂಥದ್ದಲ್ಲ. ಹಾಗೆ ಬಟ್ಟೆ ಧರಿಸಬೇಕು, ಹೀಗೆ ಬಟ್ಟೆ ಧರಿಸಬೇಕು ಎಂದು ಹೇಳುವುದಕ್ಕೆ ಬೆಂಗಳೂರು ಸೌದಿ ಅರೇಬಿಯಾ ಅಲ್ಲ ಎಂದು ಸಂಸದ ರಾಜೀವ್ ಚಂದ್ರಶೇಖರ್ ಕಿಡಿಕಾರಿದ್ದಾರೆ.
ಪುಂಡರ ವಿರುದ್ಧ ಸಾಕ್ಷ್ಯ ಲಭ್ಯ ಎಂದ ಸೂದ್
ಅಧಿಕಾರ ಸ್ವೀಕರಿಸುತ್ತಿದ್ದಂತೆ ಕಾರ್ಯತತ್ಪರವಾಗಿರುವ ಬೆಂಗಳೂರು ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರು, ನಾವು ಎಲ್ಲ ಸಿಸಿಟಿವಿ ಪುಟೇಜ್ ನೋಡಿದ್ದು, ಕಿಡಿಗೇಡಿಗಳ ವಿರುದ್ಧ ಎಲ್ಲ ಸಾಕ್ಷ್ಯ ಲಭ್ಯವಾಗಿದೆ. ಕೂಡಲೆ ಎಲ್ಲರನ್ನೂ ಬಂಧಿಸುತ್ತೇವೆ ಎಂದು ಭಾಷೆ ನೀಡಿದ್ದಾರೆ.
ಘಟನೆ 1 : ಎಂಜಿ ರಸ್ತೆಯಲ್ಲಿ ಲೈಂಗಿಕ ದೌರ್ಜನ್ಯ
ಹೊಸವರ್ಷದ ಮುನ್ನಾದಿನ ಮಹಾತ್ಮಾ ಗಾಂಧಿ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಯುವಕ ಯುವತಿಯರು ನೂತನ ವರ್ಷ ಸ್ವಾಗತಿಸಲೆಂದು ನೆರೆದಿದ್ದಾಗ ಪುಂಡ ಯುವಕರು ಯುವತಿಯರ ಮೇಲೆರಗಿ ಲೈಂಗಿಕವಾಗಿ ಹಿಂಸಿಸಿದ್ದರು. ಈ ಘಟನೆಗಳಿಗೆ ಪೊಲೀಸರು ಮೂಕಸಾಕ್ಷಿಯಾಗಬೇಕಾಯಿತು.
ಘಟನೆ 2 : ಕಮ್ಮನಹಳ್ಳಿಯಲ್ಲಿ ಮಹಿಳೆ ಪೀಡನೆ
ಜನವರಿ 1ರ ರಾತ್ರಿ ಆಗಿದ್ದೇನೆಂದರೆ, ಕಮ್ಮನಹಳ್ಳಿಯ ಬಡಾವಣೆಯೊಂದರಲ್ಲಿ ನಿರ್ಜನವಾದ ಪ್ರದೇಶದಲ್ಲಿ ನಡೆದುಬರುತ್ತಿದ್ದ ಯುವತಿಯನ್ನು ಹೋಂಡಾ ಆಕ್ಟೀವಾದಲ್ಲಿ ಅಡ್ಡಗಟ್ಟಿದ ಯುವಕರಿಬ್ಬರು, ಆಕೆಯನ್ನು ಬಲವಂತವಾಗಿ ತಬ್ಬಿಕೊಂಡು ಚುಂಬಿಸಿ ಲೈಂಗಿಕ ದೌರ್ಜನ್ಯವೆಸಗಿದ್ದರು.
ಬೆಂಗಳೂರು ಮಹಿಳೆಯರಿಗೆ ಅಸುರಕ್ಷಿತವೆ?
ಮಹಿಳೆಯರು, ಅವರು ಪೋಷಕರು ದಿಗಿಲಾಗುವಂತೆ ಇಂಥ ಸಾಲುಸಾಲು ಘಟನೆಗಳು ನಡೆಯುತ್ತಿರುವುದರಿಂದ ಬೆಂಗಳೂರಿನ ಜನತೆ ತಲೆತಗ್ಗಿಸುವಂತಾಗಿದೆ. ದೇಶದೆಲ್ಲೆಡೆ ಇದರ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಒಂದಾನೊಂದು ಕಾಲದಲ್ಲಿ ಮಹಿಳೆಯರಿಗೆ ಸುರಕ್ಷಿತ ನಗರವಾಗಿದ್ದ ಬೆಂಗಳೂರು ಈಗ ಅಸುರಕ್ಷಿತ ನಗರಿಯಾಗಿದೆ.
ಗೃಹ ಸಚಿವರ ವಿರುದ್ಧ ಶೋಭಾ ಕರಂದ್ಲಾಜೆ ಕಿಡಿ
ಗೃಹ ಸಚಿವರು ಬೇಜವಾಬ್ದಾರಿತನದಿಂದ ಘಟನೆ ಸಹಜವೆನ್ನುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರು ವಸ್ತ್ರ ಸಂಹಿತೆ ಬಗ್ಗೆ ಮಾತನಾಡುವುದನ್ನು ನಿಲ್ಲಿಸಲಿ ಮೊದಲು ಅವರ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಲಿ. ಪದೇ ಪದೇ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರುವುದೇ ಇದಕ್ಕೆಲ್ಲಾ ಕಾರಣ, ಅಧಿಕಾರಿಗಳ ಬದಲಾವಣೆಯಿಂದ ಅರಾಜಕತೆ ಉಂಟಾಗಿದೆ.