ಆಚಾರ್ಯ ಇನ್ಸ್ಟಿಟ್ಯೂಟ್ನಲ್ಲಿ ಮಾಧ್ಯಮ ಸಂವಾದ
ಬೆಂಗಳೂರು, ಫೆ. 4 : 'ಮಾಧ್ಯಮದ ವಾಣಿಜ್ಯೀಕರಣ ಮತ್ತು ಸಾರ್ವಜನಿಕ ಸೇವಾ ಸಂಪರ್ಕ' ವಿಷಯಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಸೋಲದೇವನಹಳ್ಳಿಯಲ್ಲಿ ಇರುವ ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಗ್ರಾಜುಯೇಟ್ ಸ್ಟಡೀಸ್ ಜ.30 ಮತ್ತು 31ರಂದು ಆಯೋಜಿಸಿತ್ತು.
ವಿಚಾರ ಸಂಕಿರಣವನ್ನು ಹಿರಿಯ ಶಿಕ್ಷಕರಾದ ಪ್ರೊ. ಎಚ್ಎಸ್ ಈಶ್ವರ ಅವರು ಉದ್ಘಾಟಿಸಿದರು, ದೂರದರ್ಶನದ ನಿವೃತ್ತ ಹೆಚ್ಚುವರಿ ಮಹಾನಿರ್ದೇಶಕ ಎನ್ ಜಿ ಶ್ರೀನಿವಾಸ ಅವರು ಮುಖ್ಯ ಅತಿಥಿಗಳಾಗಿದ್ದರು ಮತ್ತು ಜೆಎಂಜೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿಎಂ ರೆಡ್ಡಿ ಅವರು ಅಧ್ಯಕ್ಷತೆ ವಹಿಸಿದ್ದರು.
ಆಕಾಶವಾಣಿಯ ಡಾ. ಎಚ್ಆರ್ ಕೃಷ್ಣಮೂರ್ತಿ ಅವರು ಅಧ್ಯಕ್ಷತೆ ವಹಿಸಿದ್ದ ಮೊದಲ ದಿನ ಐವರು ಶಿಕ್ಷಣತಜ್ಞರು ಮತ್ತು ಆಕಾಶವಾಣಿ ಉದ್ಯೋಗಿಗಳು ಭಾಗವಹಿಸಿದ್ದರು. ಸಾರ್ವಜನಿಕ ಸೇವಾ ಪ್ರಸಾರಣದ ಭವಿಷ್ಯ ಮಸುಕಾಗುತ್ತಿರುವ ಮತ್ತು ಮನರಂಜನಾ ಎಫ್ಎಂ ಪ್ರಜ್ವಲವಾಗುತ್ತಿರುವ ಬಗ್ಗೆ ಚರ್ಚೆ ನಡೆಯಿತು.
ಎರಡನೇ ದಿನ ದೂರದರ್ಶನದ ಬಗ್ಗೆ ಕೇಂದ್ರೀಕೃತವಾಗಿತ್ತು. ಮಾಧ್ಯಮ ಮತ್ತು ಶಿಕ್ಷಣ ಕ್ಷೇತ್ರದ ಅನುಭವಿ ಮಾತುಗಾರರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ದೂರದರ್ಶನದ ವಿವಿಧ ಆಯಾಮಗಳ ಬಗ್ಗೆ 12 ಪ್ರಬಂಧಗಳನ್ನು ಮಂಡಿಸಲಾಯಿತು. ರಿಯಾಲಿಟಿ ಶೋ ಮತ್ತು ಧಾರಾವಾಹಿಗಳು ಸೃಷ್ಟಿಸುತ್ತಿರುವ ಸಾಧ್ಯತೆ ಮತ್ತು ಬಾಧ್ಯತೆಗಳ ಕುರಿತು ಚರ್ಚಿಸಲಾಯಿತು. ಟಿಆರ್ಪಿ ಹಿಂದೆ ಬಿದ್ದು ಏನೇನು ಅವಘಡಗಳು ಸಂಭವಿಸುತ್ತವೆ ಎಂಬ ಕುರಿತು ಸಂವಾದ ನಡೆಯಿತು.
ಎರಡನೇ ದಿನದ ಮೂರನೇ ಸೆಷನ್ ನಲ್ಲಿ ಪ್ರೊ. ಎಚ್ಎಸ್ ಈಶ್ವರ್, ಪ್ರಜಾವಾಣಿಯ ಸುದ್ದಿ ಸಂಪಾದಕ ಎಎಸ್ ನಾರಾಯಣ ರಾವ್ ವಿಶೇಷ ಮಾತುಗಾರರಾಗಿ ಭಾಗವಹಿಸಿದ್ದರು. ಮುದ್ರಣ ಮಾಧ್ಯಮದ ಮೇಲೆ ಜಾಗತೀಕರಣ, ತಂತ್ರಜ್ಞಾನದ ಧ್ರುವೀಕರಣ, ಮತ್ತು ದೂರದರ್ಶನದಿಂದ ಆಗುತ್ತಿರುವ ಪರಿಣಾಮಗಳ ಕುರಿತು ಚರ್ಚೆ ನಡೆಯಿತು.
ನಾಲ್ಕನೇ ಸೆಷನ್ ಸಾಕಷ್ಟು ಆಸಕ್ತಿ ಕೆರಳಿಸಿತ್ತು. ಸಿನೆಮಾ ಮತ್ತು ಹೊಸ ಮಾಧ್ಯಮ ಎಂಬ ವಿಷಯ ಕುರಿತ ಸಂವಾದಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಮಾಸ್ ಕಮ್ಯುನಿಕೇಷನ್ ನ ಚೇರ್ಮನ್ ಡಾ. ಬಿಕೆ ರವಿ ಅವರು ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಸಿನೆಮಾವನ್ನು ವಾಣಿಜ್ಯೀಕರಣ ಮಾಡುತ್ತಿರುವುದನ್ನು ಸಮರ್ಥಿಸಿಕೊಂಡರು.
ಸಿನೆಮಾ ಮಾಧ್ಯಮ ಯಾವ ರೀತಿ ಬದಲಾಗುತ್ತಿದೆ, ಪ್ರೇಕ್ಷಕರು ಏನು ಬಯಸುತ್ತಾರೆ, ಎಂಥ ಬೇಡಿಕೆ ಇಡುತ್ತಾರೆ ಎಂಬುದರ ಮೇಲೆ ನಿಂತಿರುತ್ತದೆ ಎಂದು ವಿವರಿಸಿದರ ರಾಜೇಂದ್ರ ಸಿಂಗ್ ಬಾಬು ಅವರು, ಸಿನೆಮಾ ನಿರ್ಮಾಣದಲ್ಲಿ ಬದಲಾಗುತ್ತಿರುವ ತಂತ್ರಜ್ಞಾನ ಎಂತಹ ಮಹತ್ವದ ಪಾತ್ರ ವಹಿಸುತ್ತಿದೆ ಎಂಬ ಬಗ್ಗೆ ಕೂಡ ವಿಶ್ಲೇಷಿಸಿದರು.
ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ನಿರ್ದೇಶಕ ಸುನಿ ಅವರು ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್ ಎಷ್ಟು ಮಹತ್ವದ್ದು ಎಂದು ತಮ್ಮದೇ ಯಶಸ್ವಿ ಚಿತ್ರವನ್ನು ಉದಾಹರಿಸಿ ವಿವರಣೆ ನೀಡಿದರು. ಕಡೆಯ ಸೆಷನ್ ಜನಪದ ಮತ್ತು ರಂಗಭೂಮಿ ಕುರಿತ ಚರ್ಚೆಗೆ ಮೀಸಲಿಡಲಾಗಿತ್ತು. ಜಾನಪದ ತಜ್ಞ ಡಾ. ಬಾನಂದೂರು ಕೆಂಪಯ್ಯ ಅವರು ವಿಶೇಷ ಆಹ್ವಾನಿತರಾಗಿದ್ದರು.