ಲಂಚ, ಡ್ರಗ್ಸ್, ಲೈಂಗಿಕತೆ : ಏನಿದು ಪರಪ್ಪನ ಅಗ್ರಹಾರ ಜೈಲಿನ ಕಥೆ?
ಬೆಂಗಳೂರು, ಜುಲೈ 13 : ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಅಪರಾಧಿಯಾಗಿ ಜೈಲು ಸೇರಿರುವ ಶಶಿಕಲಾ ನಟರಾಜನ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ 'ರಾಜಾತಿಥ್ಯ' ಪಡೆಯಲು ಜೈಲಧಿಕಾರಿಗಳಿಗೆ 2 ಕೋಟಿ ರುಪಾಯಿ ಲಂಚ ನೀಡಿದ್ದಾರೆಂಬ ಸ್ಫೋಟಕ ಸಂಗತಿ ಬಯಲಾಗಿದೆ.
ಕಾರಾಗೃಹ ಇಲಾಖೆಯ ಡಿಐಜಿಯಾಗಿರುವ ಖಡಕ್ ಐಪಿಎಸ್ ಆಫೀಸರ್ ರೂಪಾ ಡಿ ಮೌದ್ಗೀಲ್ ಅವರು ಕಾರಾಗೃಹದ ಡಿಐಜಿಗೆ ಬರೆದಿರುವ ಪತ್ರದಲ್ಲಿ, ಶಶಿಕಲಾ ನಟರಾಜನ್ ಅವರು ಏನೆಲ್ಲಾ ಸವಲತ್ತುಗಳನ್ನು ಪಡೆದುಕೊಳ್ಳಲು ಯಾರ್ಯಾರಿಗೆ ಲಂಚ ನೀಡಿದ್ದಾರೆ ಎಂದು ವಿವರಿಸಿ, ಪರಪ್ಪನ ಅಗ್ರಹಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಾರೆ.
ಶಶಿಕಲಾರಿಂದ ಕೋಟಿ ಕೋಟಿ ರು. ಆಫರ್: ಪನ್ನೀರ್ ಆಪ್ತನ ಆರೋಪ
ಆ ಪತ್ರ ಒನ್ಇಂಡಿಯಾದ ಬಳಿಯಿದ್ದು, ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ 4 ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ಶಶಿಕಲಾ ನಟರಾಜನ್ ಅವರಿಗಾಗಿಯೇ ವಿಶೇಷ ಅಡುಗೆಮನೆಯನ್ನು ನಿಯಮಬಾಹಿರವಾಗಿ ರೂಪಿಸಲಾಗಿದೆ. ಇದೆಲ್ಲಾ ನಿಮ್ಮ ಮೂಗಿನ ಅಡಿಯಲ್ಲಿಯೇ ನಡೆಯುತ್ತಿದ್ದರೂ ಸುಮ್ಮನಿದ್ದೀರಿ. ಇದಕ್ಕಾಗಿ 2 ಕೋಟಿ ರುಪಾಯಿ ಲಂಚ ನಿಮಗೆ ನೀಡಲಾಗಿದೆ ಎಂಬ ಆರೋಪವಿದೆ ಎಂದು ಡಿಐಜಿ ಎಚ್ಎನ್ ಸತ್ಯನಾರಾಯಣ ರಾವ್ ಅವರಿಗೆ ಬರೆದಿರುವ ಪತ್ರದಲ್ಲಿ ರೂಪಾ ಅವರು ಆರೋಪಿಸಿದ್ದಾರೆ.
ಈ ಪತ್ರ ಬಹಿರಂಗವಾಗುವುದರೊಂದಿಗೆ ಜೈಲಧಿಕಾರಿಗಳ ನಡುವಿನ ಆಂತರಿಕ ಕಚ್ಚಾಟಗಳು ಕೂಡ ಬಹಿರಂಗವಾಗಿವೆ. ಪರಪ್ಪನ ಅಗ್ರಹಾರದಲ್ಲಿ ಕರೀಂ ಲಾಲ್ ತೆಲಗಿಗೆ ವಿಶೇಷ ಸವಲತ್ತುಗಳನ್ನು ನೀಡಿದ್ದು ಕೂಡ ರಹಸ್ಯವಾಗಿ ಉಳಿದಿಲ್ಲ. ಕೈದಿಗಳು ರಹಸ್ಯವಾಗಿ ಮೊಬೈಲ್, ಡ್ರಗ್ ಬಳಸುತ್ತಿರುವುದು ಕೂಡ ತಿಳಿದ ಸಂಗತಿಯೆ. ಈಗ ಈ ಪತ್ರದಿಂದಾಗಿ ಎಲ್ಲ ಹುಳುಕುಗಳು ಹೊರಬಿದ್ದಂತಾಗಿವೆ.
ನಿರ್ದಾಕ್ಷಿಣ್ಯ ಶಿಸ್ತುಕ್ರಮ ತೆಗೆದುಕೊಳ್ಳಬೇಕು
ಅಕ್ರಮ ಆಸ್ತಿ ಗಳಿಕೆ ಕೇಸ್ ನಲ್ಲಿ ಸಜೆ ಅನುಭವಿಸುತ್ತಿರುವ ಶಶಿಕಲಾಗೆಂದೇ ವಿಶೇಷವಾಗಿ ಅಡುಗೆ ಕೋಣೆ ಕಲ್ಪಿಸಲಾಗಿದ್ದು, ಕಾರಾಗೃಹ ಕಾಯ್ದೆ ಹಾಗು ನಿಯಮಗಳ ಉಲ್ಲಂಘನೆಯಾಗಿದೆ. ಈ ವಿಷಯ ತಮ್ಮ ಗಮನಕ್ಕೆ ಬಂದಿದ್ದರೂ ಮುಂದುವರಿಸಲಾಗಿದೆ. ಈ ಕಾರ್ಯಕ್ಕೆ 2 ಕೋಟಿ ರು. ಲಂಚ ಕೊಡಲಾಗಿದೆ ಎಂಬ ಮಾತಿದ್ದು, ಈ ಆರೋಪಗಳು ದುರಾದೃಷ್ಟಕರವಾಗಿ ತಮ್ಮ ಮೇಲೆ ಇರುವುದರಿಂದ, ತಾವು ಇದರ ಬಗ್ಗೆ ಗಮನ ಹರಿಸಿ ಕೂಡಲೆ ಜೈಲಿನ ತಪ್ಪಿತಸ್ಥ ಅಧಿಕಾರಿ/ಸಿಬ್ಬಂದಿಗಳ ವಿರುದ್ಧ ನಿರ್ದಾಕ್ಷಿಣ್ಯ ಕಠಿಣ ಶಿಸ್ತುಕ್ರಮ ತೆಗೆದುಕೊಳ್ಳಬೇಕು ಎಂದು ರೂಪಾ ಅವರು ಸತ್ಯನಾರಾಯಣ ಅವರಿಗೆ ಪತ್ರ ಬರೆದಿದ್ದಾರೆ.
ರೂಪಾ ಅವರ ಅಧಿಕಾರವನ್ನೇ ಪ್ರಶ್ನಿಸಿದ ಡಿಜಿಪಿ
ದಿನಾಂಕ ಜೂನ್ 23ರಿಂದ ಹುದ್ದೆ ಅಲಂಕರಿಸಿದಾಗಿನಿಂದಲೂ ತಾವು ಹಸ್ತಕ್ಷೇಪ ಮಾಡುತ್ತ ಬಂದಿದ್ದೀರಿ ಎಂದು ಪತ್ರದಲ್ಲಿ ರೂಪಾ ಅವರು ಆರೋಪಿಸಿದ್ದಾರೆ. ರೂಪಾ ಅವರು ಸೆಂಟ್ರಲ್ ಜೈಲಿಗೆ ಭೇಟಿ ನೀಡಿದ್ದನ್ನು ಪ್ರಶ್ನಿಸಿ, ಇದಕ್ಕೆ ವಿವರಣೆ ನೀಡಬೇಕೆಂದು ವಿಜ್ಞಾಪನಾ ಪತ್ರವನ್ನು ರೂಪಾ ಅವರಿಗೆ ಸತ್ಯನಾರಾಯಣ ಅವರು ಕಳಿಸಿದ್ದರು. ಜೈಲಿಗೆ ಭೇಟಿ ಕೊಟ್ಟು ವಿಚಾರಣೆ ನಡೆಸುವ ಅಧಿಕಾರ ನನ್ನ ಕಾರ್ಯವ್ಯಾಪ್ತಿಯಲ್ಲಿ ಬರುತ್ತದೆ ಎಂದು ರೂಪಾ ಅವರು ತಿರುಗೇಟು ನೀಡಿದ್ದಾರೆ.
ಆರೋಪ ಅಲ್ಲಗಳೆದಿರುವ ಸತ್ಯನಾರಾಯಣ
ಜೈಲಿನ ನಿಯಮಗಳನ್ನು ಗಾಳಿಗೆ ತೂರಿ ಶಶಿಕಲಾಗೆ ವಿಶೇಷ ಅಡುಗೆ ಕೋಣೆ ನೀಡಿರುವ ಮತ್ತು ಲಂಚ ಪಡೆದಿರುವ ಆರೋಪವನ್ನು ಸತ್ಯನಾರಾಯಣ ಅವರು ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ. ಮಾಧ್ಯಮಗಳಿಗೆ ತಿಳಿದುಬಂದಿರುವ ಸಂಗತಿಯೇನೆಂದರೆ, ಸತ್ಯನಾರಾಯಣ ಅವರಿಗೆ 1 ಕೋಟಿ ಮತ್ತು 1 ಕೋಟಿಯನ್ನು ಉಳಿದ ಸಿಬ್ಬಂದಿ ವರ್ಗದವರು ಹಂಚಿಕೊಂಡಿದ್ದಾರೆ.
ಜೈಲು ವೈದ್ಯಾಧಿಕಾರಿಗೂ ಸುರಕ್ಷೆತೆಯಿಲ್ಲ
ನಾಗೇಂದ್ರ ಮೂರ್ತಿ ಎಂಬ ಕೈದಿಯು ವೈದ್ಯಾಧಿಕಾರಿಯ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರೂ ಯಾವ ಸಿಬ್ಬಂದಿಯೂ ಆಸ್ಪತ್ರೆಯಲ್ಲಿ ಇದ್ದಿದ್ದಿಲ್ಲ. ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಯಾವುದೇ ಸುರಕ್ಷತೆ ನೀಡಿರುವುದಿಲ್ಲ. ಈ ರೀತಿ ಹಲವಾರು ಬಾರಿ ಕೆಟ್ಟ ಅನುಭವಗಳಾಗುತ್ತಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದೂ ಅವರು ಪತ್ರದಲ್ಲಿ ಖಾರವಾಗಿ ನುಡಿದಿದ್ದಾರೆ.
ಕೈದಿಗಳಿಗೆ ಗಾಂಜಾ, ಕ್ಯಾನ್ನಾಬಿಸ್ ಪೂರೈಕೆ
ಕೈದಿಗಳಿಗೆ ಮಾದಕ ದ್ರವ್ಯಗಳನ್ನು ಕೂಡ ನೀಡಲಾಗುತ್ತಿದೆ ಎಂಬ ವರದಿ ಬಂದ ಮೇಲೆ, ವೈದ್ಯಾಧಿಕಾರಿಗಳೊಂದಿಗೆ ತಪಾಸಣೆ ಮಾಡಲಾಗಿ, 25 ಕೈದಿಗಳಲ್ಲಿ 18 ಕೈದಿಗಳು ಗಾಂಜಾ, ಕ್ಯಾನ್ನಾಬಿಸ್, ಮಾರ್ಫೈನ್ ಮುಂತಾದ ಡ್ರಗ್ಸ್ ಗಳನ್ನು ಸೇವಿಸಿರುವ ಆಘಾತಕಾರಿ ಸಂಗತಿ ಬಯಲಾಗಿದೆ ಎಂದು ರೂಪಾ ಅವರು ಪತ್ರದಲ್ಲಿ ಆರೋಪಿಸಿದ್ದಾರೆ.
ನರ್ಸ್ ಮೇಲೆ ಕೈದಿಯಿಂದ ಲೈಂಗಿಕ ಹಲ್ಲೆ
ಡ್ರಗ್ ಗಳನ್ನು ಪೂರೈಸುವುದು ಮಾತ್ರವಲ್ಲ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವನ್ನೂ ನಡೆಸಲಾಗುತ್ತಿದೆ ಎಂಬ ದೂರು ಬಂದಿದೆ. ಜೂನ್ ನಲ್ಲಿ ವಿರಣಾಧೀನ ಕೈದಿಯೊಬ್ಬ ನರ್ಸ್ ಮೇಲೆ ಲೈಂಗಿಕ ಹಲ್ಲೆ ನಡೆಸಿದ್ದ. ಇದನ್ನು ಜೈಲಧಿಕಾರಿಗಳಿಗೆ ತಿಳಿಸಲಾಗಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಗಂಭೀರ ಆರೋಪವನ್ನು ರೂಪಾ ಅವರು ಮಾಡಿದ್ದಾರೆ.