ರಾಜಕಾರಣಿಗಳ ಅವೇ ಹಳೆ 5 ಡೈಲಾಗುಗಳು..
ಬೆಂಗಳೂರು, ಫೆಬ್ರವರಿ 13: ರಾಜಕಾರಣದಲ್ಲಿ ರಾಜಕಾರಣಿಗಳ ಬಾಯಲ್ಲಿ ಸಿಕ್ಕಿ ನರಳಿರುವ ಕೆಲವು ಮಾತುಗಳ ಅರ್ಥವೇನು ಎಂಬುದು ಬಹಳ ವರ್ಷಗಳಿಂದ ನನ್ನನ್ನು ಕಾಡುತ್ತಿರುವ ಪ್ರಶ್ನೆ. ಕೆಲವು ನಿರ್ದಿಷ್ಟ ಸಂದರ್ಭದಲ್ಲಿ ಅದೇ ಮಾತನಾಡುತ್ತಾರೆ ಅಂತ ನಿಖರವಾಗಿ ಹೇಳಿಬಿಡಬಹುದು, ಅಷ್ಟರ ಮಟ್ಟಿಗೆ ಆ ಮಾತುಗಳು ಪೂರ್ವ ನಿರ್ಧಾರಿತ.
ಯಾವುವು ಆ ಮಾತುಗಳು ಎಂಬುದು ಸೋಮವಾರ ಪದೇ ಪದೇ ನೆನಪಾಯಿತು. ಅದ್ಯಾವುದೋ ಡೈರಿಯಲ್ಲಿ ಅಂದರೆ ಸಹಾರದವರ ಡೈರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರಿತ್ತಂತೆ. ಅವರು ಭ್ರಷ್ಟಾಚಾರ ಮಾಡಿದ್ದಾರೆ. ಅವರ ಬಂಡವಾಳ ಬೀದಿಗೆ ಹಾಕ್ತೀನಿ ಎಂದು ರಾಹುಲ್ ಗಾಂಧಿ ಕೂಗಾಡಿಬಿಟ್ಟರು. ಅದ್ಯಾವುದೋ ಡೈರಿಯಲ್ಲಿ ಇದೆ ಅಂದ ಮಾತ್ರಕ್ಕೆ ಅವರು ಭ್ರಷ್ಟಾಚಾರ ಮಾಡಿದ ಹಾಗಾಯ್ತ ಎಂದರು ಬಿಜೆಪಿಯವರು.[ಹೈಕಮಾಂಡ್ ಕಪ್ಪ: ಬಿಜೆಪಿ ಮೇಲೆ 'ಸಿಡಿ' ಎಸೆದ ಕಾಂಗ್ರೆಸ್]
ಈಗ ನೋಡಿ, ಎಂಎಲ್ ಸಿ ಗೋವಿಂದರಾಜು ಅವರ ಡೈರಿಯಲ್ಲಿ ಸಿದ್ದರಾಮಯ್ಯ ಹೆಸರು ಇದೆಯಂತೆ, ಅವರು ಹೈಕಮಾಂಡ್ ಗೆ ಕಪ್ಪ ಕೊಟ್ಟಿದ್ದಾರೆ ಅಂತಿದ್ದಾರೆ ಯಡಿಯೂರಪ್ಪ. ಈಗ ಬಿಜೆಪಿ ಹಾಗೂ ಕಾಂಗ್ರೆಸ್ ನವರು ಇಬ್ಬರೂ ಉತ್ತರ ಹೇಳಲೇಬೇಕು. ಹಾಗಿದ್ದರೆ ಮೋದಿಯವರ ಹೆಸರು ಸಹಾರದವರ ಡೈರಿಯಲ್ಲಿ ಇದೆಯಂತಲ್ಲಾ ಯಡಿಯೂರಪ್ಪನವರೇ, ಈಗ ಮೋದಿ ಅವರು ಭ್ರಷ್ಟರೇ?[ಸಿದ್ದರಾಮಯ್ಯಗೆ 65 ಕೋಟಿ ಕಿಕ್ ಬ್ಯಾಕ್ : ಬಿಎಸ್ವೈ ಮತ್ತೊಂದು ಬಾಂಬ್]
ಇನ್ನು ರಾಹುಲ್ ಗಾಂಧಿ ಆರೋಪಿಸಿದ ಹಾಗೆ ಡೈರಿಯಲ್ಲಿ ಮೋದಿ ಹೆಸರು ಇದೆ ಅಂದಾಕ್ಷಣ ಭ್ರಷ್ಟರು ಅಂದರೆ, ಸ್ವಾಮಿ ಸಿದ್ದರಾಮಯ್ಯನವರೇ ನಿಮ್ಮ ಹೆಸರೂ ಈಗ ಡೈರಿಯಲ್ಲಿದೆ. ಹಾಗಿದ್ದರೆ ನೀವು ಭ್ರಷ್ಟರು ಅಂತಾಯಿತಲ್ಲವೆ? ದಯವಿಟ್ಟು ಎರಡೂ ಪಕ್ಷದವರೂ ಈ ಬಗ್ಗೆ ಉತ್ತರ ಕೊಡಬೇಕು. ಇಲ್ಲಿ ಕೆಲವು ಪದೇ ಪದೇ ಕೇಳಿಬರುವ ಆರೋಪ, ಆಕ್ಷೇಪಗಳಿವೆ. ಇದಕ್ಕೇನಂತೀರಿ?
ಸಿಬಿಐ ಕೇಂದ್ರ ಸರಕಾರದ ಕೈಗೊಂಬೆ
ಕೇಂದ್ರದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ, ಆಗ ವಿಪಕ್ಷಗಳು, ಆಡಳಿತಾರೂಢ ಪಕ್ಷವು ಸಿಬಿಐನ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸುವುದು ಸರ್ವೇ ಸಾಮಾನ್ಯ. ಅಂದರೆ ದುರುಪಯೋಗ ಮಾಡಿಕೊಳ್ಳುವ ಅವಕಾಶ ಇರುವ ತನಿಖಾ ಸಂಸ್ಥೆ ಸಿಬಿಐ ಅಂತ ಒಪ್ಪಿಕೊಂಡಂತೆ ಆಯಿತಲ್ಲವಾ? ಒಂದು ಆ ಸಂಸ್ಥೆಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಶಕ್ತಿ ನೀಡಿ ಅಥವಾ ಆ ಸಂಸ್ಥೆಯನ್ನೇ ರದ್ದು ಮಾಡಿ.
ಪಕ್ಷದ ತತ್ವ-ಸಿದ್ಧಾಂತ ಒಪ್ಪಿಕೊಂಡು ಬಂದಿದ್ದೀನಿ
ಈ ಡೈಲಾಗಂತೂ ಅದೆಷ್ಟು ಸಾವಿರ ಸಲ ಕೇಳಿ ಆಗಿದೆಯೋ! ಎಲ್ಲ ಪಕ್ಷದವರೂ ತಮ್ಮ ತತ್ವ-ಸಿದ್ಧಾಂತ ಏನು ಅಂತ ಜನರಿಗೆ ತಿಳಿಸಬೇಕು. ಏಕೆಂದರೆ ಪಕ್ಷಾಂತರಗಳು ಆದಾಗ ಜನರಿಗೂ ಗೊತ್ತಾಗುತ್ತೆ. ಸುಮ್ನೆ ಯಾವಾಗಲೂ ಅದೇ ತತ್ವ-ಸಿದ್ಧಾಂತದ ಡಬ್ಬಾ ಬಡಿದರೆ ಏನು ಗೊತ್ತಾಗುತ್ತೆ?
ಶ್ವೇತಪತ್ರ ಹೊರಡಿಸಿ
ಇದೊಂದು ಸಾರ್ವಕಾಲಿಕ ಬೇಡಿಕೆ ಕಣ್ರೀ. ವಿಪಕ್ಷದಲ್ಲಿರುವಾಗ ಮಾತ್ರ ಪದೇ ಪದೇ ಕೇಳ್ತಾರೆ. ಆದರೆ ಈ ವರೆಗೆ ಯಾರಾದರೂ ಶ್ವೇತ ಪತ್ರ ಹೊರಡಿಸಿದ್ದು ನೋಡಿಲ್ಲ. ಬೇಡಿಕೆ ಮಾತ್ರ ಕೇಳಿ ಬರುತ್ತಲೇ ಇರುತ್ತೆ. ಆಡಳಿತ ಪಕ್ಷವಾದಾಗ ಮಾತ್ರ ಇದು ನೆನಪಿಗೆ ಬರೊಲ್ಲ ಯಾಕೆ?
ರಾಜಕೀಯ ನಿವೃತ್ತಿ
ನಾನು ತಪ್ಪಿತಸ್ಥ ಅಂತ ಆದರೆ ರಾಜಕೀಯ ನಿವೃತ್ತಿ ತೆಗೆದುಕೊಂಡುಬಿಡ್ತೀನಿ ಅನ್ನೋದು ಗಿಮಿಕ್ ಆಗಿಬಿಟ್ಟಿದೆ. ಯಾರಾದರೂ ರಾಜಕೀಯ ನಿವೃತ್ತಿ ತಗೊಳ್ತಾರಾ ಅಂದರೆ, ಮೊನ್ನೆ ಒಬ್ಬರು ಹಿರಿಯ ರಾಜಕಾರಣಿಗಳು ಹೇಳ್ತಿದ್ದರು, ನೋಡ್ರೀ ರಾಜಕೀಯದಲ್ಲಿ ನಿವೃತ್ತಿ ಅನ್ನೋದೇ ಇಲ್ಲ ಅಂತ.
ನನ್ನ ಪ್ರಾಣ ಹೋದರೂ...
ರಾಜ್ಯದಲ್ಲಿ ಮಂತ್ರಿಯಾದರೆ ಸುತ್ತಲೂ ಪೊಲೀಸ್ ನವರು, ಕೇಂದ್ರದಲ್ಲಿ ಸೀಟು ಗಿಟ್ಟಿಸಿದರೆ ಮಿಲಿಟರಿಯವರ ಬಿಗಿ ಕಾವಲಿರುತ್ತೆ. ಆದರೂ ಈ ಮಾತು, ನನ್ನ ಪ್ರಾಣ ಹೋದರೂ ಈ ಹೋರಾಟ ನಿಲ್ಲಿಸಲ್ಲ. ಪ್ರಾಣ ಯಾಕೆ ಸ್ವಾಮಿ ಹೋಗುತ್ತೆ? ಆದರೂ ಈ ಮಾತನ್ನು ಪತ್ರಿಕೆ, ಟಿವಿಗಳಲ್ಲಿ ಅದೆಷ್ಟು ಸಲ ನೋಡ್ತೀವಿ! ನನ್ನ ಜೀವಕ್ಕೆ ತೊಂದರೆಯಾದರೂ....ನನ್ನ ಪ್ರಾಣ ಹೋದರೂ...ಅಬ್ಬಾ!