ದೊಡ್ಡ ನೋಟಿಲ್ಲದ ದಿನಗಳಲ್ಲಿ ಸಾಮಾನ್ಯರ ಬದುಕಿನ ಚಿತ್ರಗಳು...
ಮಂಗಳವಾರದ ಆಚೆಗೆ ಜನರ ಜೀವನ ಶೈಲಿಯೇ ಬದಲಾಗಿ ಹೋಗಿದೆ. ನೂರು, ಐವತ್ತು ರುಪಾಯಿ ಅಂದರೆ ಒಂಥರಾ ನೋಡುತ್ತಿದ್ದವರ ಕಣ್ಣಲ್ಲೂ ಈಗ ಗೌರವ ಭಾವ ಮೂಡಿದೆ.
ಬೆಂಗಳೂರು, ನವೆಂಬರ್ 12: ಮಂಗಳವಾರದ ಆಚೆಗೆ ಜನರ ಜೀವನ ಶೈಲಿಯೇ ಬದಲಾಗಿ ಹೋಗಿದೆ. ನೂರು, ಐವತ್ತು ರುಪಾಯಿ ಅಂದರೆ ಒಂಥರಾ ನೋಡುತ್ತಿದ್ದವರ ಕಣ್ಣಲ್ಲೂ ಈಗ ಗೌರವ ಭಾವ ಮೂಡಿದೆ. ಶುಕ್ರವಾರ ಸಂಜೆ ಡಿವಿಜಿ ರಸ್ತೆಯಲ್ಲಿ ಒಂದು ಸುತ್ತು ಹಾಕಿದಾಗ ಕಂಡ ದೃಶ್ಯಗಳು, ಕೇಳಿದ ಮಾತುಗಳನ್ನು ಯಥಾವತ್ ನಿಮಗೆ ತಲುಪಿಸ್ತಿದೀವಿ.
ಮೊದಲಿಗೆ ಹೋಗಿದ್ದು ಲಕ್ಷ್ಮಿ ಗೋಲ್ಡ್ ಪ್ಯಾಲೆಸ್ ಗೆ. ಅಲ್ಲಿನ ಗಾಜಿನ ಬಾಗಿಲಿನ ಮೇಲೆ 500, 1000 ರುಪಾಯಿಯ ನೋಟು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟವಾಗಿ ಹಾಕಲಾಗಿತ್ತು. ಮಳಿಗೆ ಒಳಗೆ ಹೋದರೆ ಈ ವರದಿಗಾರನೂ ಸೇರಿ ಗ್ರಾಹಕರ ಲೆಕ್ಕಕ್ಕೆ ಮೂರೇ ಜನ. ಅದರೆ ಮಳಿಗೆ ನೌಕರರು ಹತ್ತಕ್ಕೂ ಹೆಚ್ಚು ಮಂದಿ ಇದ್ದರು.
ಆ ನಂತರ ಮಾತಿಗೆ ಸಿಕ್ಕವರು ಮತ್ತೊಂದು ಮಳಿಗೆಯ ಸೆಕ್ಯೂರಿಟಿ ಗಾರ್ಡ್. ನಮಗೆ ಇಷ್ಟೊತ್ತಿಗಾಗಲೇ ಸಂಬಳ ಆಗಬೇಕಿತ್ತು. ಆದರೆ ಹೊಸದು-ಹಳೇ ನೋಟು ಅನ್ನೋ ಗೊಂದಲದಲ್ಲಿ ಈ ವರೆಗೆ ಸಂಬಳ ಆಗಿಲ್ಲ. ನಮ್ಮ ಅಂಗಡಿ ಹತ್ತಿರ ಜನರ ಸುಳಿದಾಟ ಕೂಡ ಇಲ್ಲ. ನನ್ನ ಸ್ನೇಹಿತನೊಬ್ಬ ಮೂರು ಲಕ್ಷ ರುಪಾಯಿ ಚೀಟಿ ಎತ್ತಿದ್ದಾನೆ. ಅವನಿಗೆ ಹಳೇ ನೋಟು ಕೊಟ್ಟಿದ್ದಾರೆ. ಅವನ ಮುಖ ನೋಡೋಕೆ ಆಗ್ತಿಲ್ಲ ಎಂದರು.[ಚಿಕ್ಕಮಗಳೂರಿನಲ್ಲಿ 2 ಸಾವಿರ ರು ಖೋಟಾನೋಟು ಪತ್ತೆ]
ನಮ್ಮಂಥ ದೊಡ್ಡ ಅಂಗಡಿ ಬಿಡಿ, ಜೋಳ, ಸೀಬೆಕಾಯಿ ಮಾರೋರ ಸ್ಥಿತಿಯೂ ಕಷ್ಟವಾಗಿದೆ. ಎರಡು ಸಾವಿರ ರುಪಾಯಿ ನೋಟು ತಗೊಂಡು ಏನು ಮಾಡೋಣ ಸ್ವಾಮಿ. ನಾಲ್ಕು ಸೀಬೆಕಾಯಿ ತಗೊಂಡು ಎರಡು ಸಾವಿರ ರುಪಾಯಿ ಕೊಟ್ಟರೆ ಏನು ಮಾಡ್ತಾರೆ ಸ್ವಾಮಿ? ಎಂಬುದು ಅವರ ಪ್ರಶ್ನೆ.
ಇನ್ನು ವೃತ್ತಿಯಲ್ಲಿ ಅಡುಗೆ ಕಾಂಟ್ರಾಕ್ಟರ್ ಅದ ಅನಿಲ ಅವರದು ಮತ್ತೊಂದು ತರ್ಕ. ಎರಡು ಸಾವಿರ ರುಪಾಯಿ ಇಟ್ಟುಕೊಂಡು ಸೆಲ್ಫಿ ತಗೋಬಹುದು ಅಷ್ಟೇ. ಅದನ್ನು ಅಂಗಡಿಯವರಿಗೆ ಕೊಟ್ಟರೆ ಚಿಲ್ಲರೆ ನಿಮಗೆ ನೂರು-ನೂರು ರುಪಾಯಿ ಕೊಡ್ತಾರಾ? ಮತ್ತೆ ಅದೇ ಸಾವಿರ, ಐನೂರರ ನೋಟೇ ವಾಪಸ್ ಸಿಗತ್ತೆ. ಅದಕ್ಕೋಸ್ಕರ ಯಾಕೆ ಬ್ಯಾಂಕ್ ಗೆ ಧಾವಂತದಲ್ಲಿ ಹೋಗಬೇಕು?[ಬಡವರ ಹಣದ ಮೇಲೆ ಮೋದಿ ಸರ್ಜಿಕಲ್ ಸ್ಟ್ರೈಕ್ : ಕೇಜ್ರಿವಾಲ್]
ಈ ಅಂಗಡಿಯವರು ಯಾಕೆ ತಗೋಬಾರದು ಹೇಳಿ? ಇವರ ವ್ಯವಹಾರದ ನಿಜವಾದ ಲೆಕ್ಕ ಗೊತ್ತಾಗತ್ತಲ್ಲಾ ಅದಕ್ಕೆ ತಗೊಳ್ಳಲ್ಲ ಎಂದು ಮಧ್ಯ ನುಗ್ಗಿ ಮಾತನಾಡಿದವರೊಬ್ಬರು, ಹೆಸರು ಕೂಡ ಹೇಳದೆ ಅಲ್ಲಿಂದ ತಕ್ಷಣ ಹೊರಟುಬಿಟ್ಟರು. ಇನ್ನು ಪತ್ರಕರ್ತರಾದ ರಾಮಚಂದ್ರ ಮುಳಿಯ ಅವರು ಮಾತಿಗೆ ಸಿಕ್ಕಿ, ಮನೆಯಲ್ಲಿದ್ದ ಸಣ್ಣ-ಪುಟ್ಟ ಮೊತ್ತದ ಹಣವೇ ಒಟ್ಟು ಮಾಡಿಕೊಂಡು ದಿನ ಕಳೀತಿದೀನಿ. ಬ್ಯಾಂಕ್ ನಲ್ಲಿ ತುಂಬ ಜನ ಎಂದರು.
ಐಬಿಎಂ ನ ಉದ್ಯೋಗಿ ಮಧುಸೂದನ್ ಅವರಿಗೆ ಶುಕ್ರವಾರ ಫ್ರಾನ್ಸ್ ಹಾಲಿ ಡೇ ಸಿಕ್ಕಿತ್ತು. ಸಾಧಾರಣ ದಿನಗಳಲ್ಲಿ ಬೆಳಗ್ಗೆಯೇ ಮನೆ ಬಿಟ್ಟು ಹೊರಡುವ ಅವರು, ಸಂಜೆ ತಮ್ಮ ಪತ್ನಿ, ಶಿಕ್ಷಕಿ ನಾಗಲಕ್ಷ್ಮಿ ವಾಪಸ್ ಬರುವವರೆಗೆ ಕಾದು, ಅವರಿಂದ ಹಣ ಪಡೆದು ಚುರುಮುರಿ ತಿನ್ನಲು ಬಂದಿದ್ದರು.[ನೋಟು ನಿಷೇಧದಿಂದ ದೇಶದ ಮೇಲಾಗುವ ಪರಿಣಾಮಗಳೇನು?]
ಹೀಗೇ ಒಂದು ವಾರ ಮುಂದುವರಿಯಬೇಕು ನೋಡ್ರೀ, ಜನರಿಗೆ ತಾವು ಮಾಡ್ತಿದ್ದ ಖರ್ಚೇಷ್ಟು? ಆ ಪೈಕಿ ಉಳಿಸಬಹುದಾದ್ದು ಎಷ್ಟು? ಎಷ್ಟು ಹಣದಲ್ಲಿ ಆರಾಮವಾಗಿ ಜೀವನ ಮಾಡಬಹುದು ಅಂತ ಗೊತ್ತಾಗಿಬಿಡುತ್ತೆ. ನಾನು ಇಷ್ಟು ಆರಾಮವಾಗಿ ದಿನ ಕಳೆಯಬಹುದು ಅಂತ ಗೊತ್ತಾಗಿದ್ದೇ ಈಗ ಎಂದವರು ದಿನಸಿ ಅಂಗಡಿ ಮಾಲೀಕ ವಿಶ್ವನಾಥ್.
ಇನ್ನು ತಮ್ಮ ಗಾಡಿಯನ್ನು ರಿಪೇರಿಗೆ ಬಿಟ್ಟ ರಾಮ್ ಪ್ರಸಾದ್ ಅವರದು ಮತ್ತೊಂದು ಕತೆ. ಆ ಗ್ಯಾರೇಜ್ ನಲ್ಲಿ ಇಡೀ ದಿನಕ್ಕೆ ಎರಡು ಸಾವಿರದಷ್ಟು ವ್ಯಾಪಾರವಾದರೆ ಹೆಚ್ಚು. ಇತ್ತೀಚೆಗೆ ಅದೂ ಕಡಿಮೆಯಾಗಿದೆ. ಸರಿಯಾದ ಚಿಲ್ಲರೆ ಇದ್ದರಷ್ಟೇ ರಿಪೇರಿ ಎಂದು ಎಚ್ಚರಿಕೆ ಕೇಳುವಂತಾಗಿದೆ.