ರುದ್ರೇಶ್ ಹತ್ಯೆ: 7 ದಿನಗಳ ಎನ್ಐಎ ಕಸ್ಟಡಿಗೆ ನಾಲ್ವರು ಆರೋಪಿಗಳು
ಬೆಂಗಳೂರಿನ ಶಿವಾಜಿನಗರದಲ್ಲಿ ಕೊಲೆಯಾಗಿದ್ದ ಆರ್.ಎಸ್.ಎಸ್ ಕಾರ್ಯಕರ್ತ ರುದ್ರೇಶ್ ಪ್ರಕರಣದಲ್ಲಿ ಎನ್ಐಎ ವಿಶೇಷ ನ್ಯಾಯಾಲಯ ನಾಲ್ವರನ್ನು ಎನ್ಐಎ ವಶಕ್ಕೆ ನೀಡಿದೆ.
ಬೆಂಗಳೂರು, ಫೆಬ್ರವರಿ 17: ಬೆಂಗಳೂರಿನ ಶಿವಾಜಿನಗರದಲ್ಲಿ ಕೊಲೆಯಾಗಿದ್ದ ಆರ್.ಎಸ್.ಎಸ್ ಕಾರ್ಯಕರ್ತ ರುದ್ರೇಶ್ ಪ್ರಕರಣದಲ್ಲಿ ಎನ್ಐಎ ವಿಶೇಷ ನ್ಯಾಯಾಲಯ ನಾಲ್ವರನ್ನು ರಾಷ್ಟ್ರೀಯ ತನಿಖಾ ದಳದ ವಶಕ್ಕೆ ನೀಡಿದೆ.
ಜೆಸಿ ನಗರದ ಮೊಹಮ್ಮದ್ ಸಾದಿಕ್ (35 ವರ್ಷ), ಆರ್ ಟಿ ನಗರದ ಮೊಹಮ್ಮದ್ ಮುಜೀಬುಲ್ಲಾ(44) ಆಸ್ಟಿನ್ ಟೌನಿನ ವಾಸೀಂ ಅಹ್ಮದ್(30) ಹಾಗೂ ಗೋವಿಂದಪುರದ ಇರ್ಫಾನ್ ಪಾಷ(30)ರನ್ನು 7 ದಿನಗಳ ಎನ್ಐಎ ಕಸ್ಟಡಿಗೆ ಒಪ್ಪಿಸಲಾಗಿದೆ.[ರುದ್ರೇಶ್ ಹತ್ಯೆ, ಬೆಂಗಳೂರಲ್ಲಿ ನಾಲ್ವರ ಬಂಧನ]
ಅಕ್ಟೋಬರ್ 10, 2016ರಂದು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕೆ ಕಾಮರಾಜ ರಸ್ತೆಯಲ್ಲಿ ರುದ್ರೇಶ್ ಕೊಲೆ ಮಾಡಲಾಗಿತ್ತು.
ಪ್ರಕರಣ ಸಂಬಂಧ ಬಂಧಿಸಲಾಗಿದ್ದ ನಾಲ್ವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ಎನ್ಐಎ ಅಧಿಕಾರಿಗಳು ವಿಶೇಷ ನ್ಯಾಯಾಲಯ ಮುಂದೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಆದೇಶ ನೀಡಿದ ಎನ್ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಗುಲ್ಜರ್ ಲಾಲ್ ಮಹವರಕರ್ 7 ದಿನಗಳ ಕಸ್ಟಡಿಗೆ ಒಪ್ಪಿಸಿದ್ದಾರೆ.[ರುದ್ರೇಶ್ ಕೊಲೆ ಹಿಂದೆ ಕಾರ್ಪೊರೇಟರ್ ಕೈವಾಡ?]
ಈಗಾಗಲೇ ನಾಲ್ಕೂ ಜನ ಆರೋಪಿಗಳು ಪ್ರಕರಣದಲ್ಲಿ ತಮ್ಮನ್ನು ಬಂಧಿಸಿರುವ ಹಾಗೂ ಎನ್ಐಎ ಅಧಿಕಾರಿಗಳು ಸ್ವಯಂ ಒ್ರೇರಿತ ದೂರು ದಾಖಲಿಸಿಕೊಂಡಿರುವುದರ ವಿರುದ್ಧ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಫೆಬ್ರವರಿ 23ರಂದು ವಿಚಾರಣೆ ನಡೆಯಲಿದೆ.