ರಾಶಿ ಚಿನ್ನ, ನಗದು; ಜಾರಕಿಹೊಳಿ ಮನೆಯಲ್ಲಿ ಸಿಕ್ಕಿದ ಸಂಪತ್ತೆಷ್ಟು?
ಬೆಂಗಳೂರು, ಜನವರಿ 22: ಸಿದ್ಧರಾಮಯ್ಯ ಸಂಪುಟದ ಪ್ರಭಾವಿ ಸಚಿವ ರಮೇಶ್ ಜಾರಕಿಹೊಳಿ ಮನೆ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 115 ಕೋಟಿ ನಗದು ಮತ್ತು 12 ಕೆ.ಜಿ ಚಿನ್ನಾಭರಣ ಪತ್ತೆ ಮಾಡಿದ್ದಾರೆ ಎಂದು ಪಬ್ಲಿಕ್ ಟಿವಿ ವರದಿ ಮಾಡಿದೆ.
ರಮೇಶ್ ಜಾರಕಿಹೊಳಿ ಸದ್ಯ ಸಿದ್ಧರಾಮಯ್ಯ ಸಂಪುಟದಲ್ಲಿ ಸಣ್ಣ ಕೈಗಾರಿಕೆ ಸಚಿವರಾಗಿದ್ದಾರೆ. ಅವರ ಮನೆಯ ಮೇಲೆ ಜನವರಿ 19ರಂದು ಮೊದಲ ಬಾರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗೋಕಾಕ್, ಬೆಳಗಾಂ ಮತ್ತು ಬೆಂಗಳೂರಿನಲ್ಲಿ ದಾಳಿ ನಡೆಸಿದ್ದರು. ನಂತರ ಸತತ ಮೂರು ದಿನಗಳ ಕಾಲ ಜನವರಿ 22ರವರೆಗೆ ಪರಿಶೀಲನೆ ನಡೆಸಿದ್ದರು.
ಜನವರಿ 19ರಂದೇ ರಮೇಶ್ ಜಾರಕಿಹೊಳಿ ಸಹೋದರ ಲಖನೌ ಜಾರಿಕಿಹೊಳಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಮನೆ ಮೇಲೆಯೂ ದಾಳಿ ನಡೆದಿತ್ತು.
ರೈಡ್ ಮೇಲೆ ಜಾರಕಿಹೊಳಿ ಸಂಶಯ
ಈ ಕುರಿತು ಬೆಳಗಾವಿಯಲ್ಲಿ ಇಂದು ಮಾತನಾಡಿದ ರಮೇಶ್ ಜಾರಕಿಹೊಳಿ, "ಆದಾಯ ತೆರಿಗೆ ದಾಳಿಯ ಬಗ್ಗೆಯೇ ಸಂಶಯ ಇದೆ. ವೈಯಕ್ತಿಕ ದ್ವೇಷದಿಂದ ದೂರು ನೀಡಲಾಗಿದೆ. ಇವತ್ತು ನಾನು ಏನೇ ಹೇಳಿದರೂ ಹತಾಷೆಯಿಂದ ಹೇಳುತ್ತಿದ್ದಾರೆ ಎನ್ನುತ್ತಾರೆ. ಆದರೆ ಕಲವೇ ದಿನಗಳಲ್ಲಿ ದೂರು ನೀಡಿದ್ದು ಯಾರು ಎಂಬುದು ಗೊತ್ತಾಗಲಿದೆ," ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ ಹೊರತುಪಡಿಸಿ ಬೇರೆಲ್ಲ ಪಕ್ಷಗಳ ನಾಯಕರ ಮೇಲೆ ದಾಳಿ ನಡೆದಿದೆ ಹಾಗಾಗಿ ಅನುಮಾನಗಳಿವೆ ಎಂದು ಜಾರಕಿಹೊಳಿ ಹೇಳಿದ್ದು, ದಾಳಿಗೆ ಬಿಜೆಪಿ ನಾಯಕರೇ ಕಾರಣ ಅಂತ ಪರೋಕ್ಷ ಆರೋಪ ಮಾಡಿದ್ದಾರೆ.