ಆಗಸ್ಟ್ 28ಕ್ಕೆ ರೊಟ್ಟಿ ಪಂಚಮಿ, ಎಲ್ಲರೂ ಕಲಾಗ್ರಾಮಕ್ಕೆ ಬನ್ನಿರಿ...
ಬೆಂಗಳೂರು, ಅಗಸ್ಟ್ 26: ಉತ್ತರ ಕರ್ನಾಟಕ ನಾಗರಿಕರ ಅಭಿವೃದ್ಧಿ ಸಂಘದಿಂದ ಆಗಸ್ಟ್ 28ಕ್ಕೆ 'ರೊಟ್ಟಿ ಪಂಚಮಿ' ಹಬ್ಬ ಆಯೋಜಿಸಲಾಗಿದೆ. ಮಲ್ಲತ್ತಹಳ್ಳಿಯಲ್ಲಿ ಇರುವ ಕಲಾಗ್ರಾಮದ ಸಮುಚ್ಚಯ ಬಯಲು ರಂಗಮಂದಿರದಲ್ಲಿ ಕಾರ್ಯಕ್ರಮ ಇರುತ್ತದೆ.
'ರೊಟ್ಟಿ ಪಂಚಮಿ' ಉತ್ತರ ಕರ್ನಾಟಕ ಭಾಗದ ದೊಡ್ಡ ಹಬ್ಬ. ಈ ಸಂಘವು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಅದಕ್ಕೆ ಹೊಸ ಸೇರ್ಪಡೆ ಈ ಹಬ್ಬದ ಆಚರಣೆ.[ಬೆಂಗಳೂರು ವಾಸಿ ಉತ್ತರ ಕರ್ನಾಟಕ ಮಂದಿಗೆ ಏನಾಗಿದೆ?]
ಹಬ್ಬದ ಉದ್ಘಾಟನೆಯನ್ನು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಮಾಡುತ್ತಾರೆ. ಶಾಸಕರಾದ ಬಸವರಾಜ ಬೊಮ್ಮಾಯಿ, ಎಸ್.ಟಿ.ಸೋಮಶೇಖರ, ವಿಧಾನ ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ, ಉದ್ಯಮಿ ಎಸ್.ಪಿ.ದಯಾನಂದ್, ಸಂಘದ ಅಧ್ಯಕ್ಷ ಡಾ.ಚಂದ್ರಶೇಖರ್ ಸಾಂಬ್ರಾಣಿ ಭಾಗವಹಿಸುತ್ತಿದ್ದಾರೆ.
ಈ ಸಂಭ್ರಮದ ಜೊತೆಗೆ ಉತ್ತರ ಕರ್ನಾಟಕದ ದೇಶೀ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಡೊಳ್ಳು ಕುಣಿತ, ಜನಪದ ಗೀತೆ, ಸುಗಮ ಸಂಗೀತ, ಜೋಗತಿ ನೃತ್ಯ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತವೆ. ಮಹಿಳೆಯರಿಂದ ನಾಗಪೂಜೆ, ಧಾರ್ಮಿಕ ಕಾರ್ಯಕ್ರಮಗಳಿವೆ.
ಉತ್ತರ ಕರ್ನಾಟಕದಿಂದ ದಕ್ಷಿಣ ಭಾಗಕ್ಕೆ ಮದುವೆ ಮಾಡಿಕೊಟ್ಟ ಹೆಣ್ಣುಮಕ್ಕಳಿಗೆ ಉಡಿ ತುಂಬುವ ಕಾರ್ಯಕ್ರಮವೂ ಇದೆ. ಉತ್ತರ ಕರ್ನಾಟಕ ಶೈಲಿಯ ಊಟದ ವ್ಯವಸ್ಥೆಯೂ ಇರುತ್ತದೆ. ಬೆಳಗ್ಗೆ 10ಕ್ಕೆ ಮಹಿಳೆಯರಿಂದ ನಾಗಪೂಜೆ, ಹಾಲು ಎರೆಯುವ ಕಾರ್ಯಕ್ರಮ ಇದೆ. 10.30ಕ್ಕೆ ಉತ್ತರ ಕರ್ನಾಟಕದ ದೇಶಿ ಕ್ರೀಡೆಗಳು ನಡೆಯುತ್ತವೆ. ಮಧ್ಯಾಹ್ನ 12ಕ್ಕೆ ಸಮಾರಂಭದ ಉದ್ಘಾಟನೆ, ಮಧ್ಯಾಹ್ನ 1ರಿಂದ 3ರ ವರೆಗೆ ಊಟದ ವ್ಯವಸ್ಥೆ ಇರುತ್ತದೆ.[ಫುಡ್ ವೇಸ್ಟೇಜ್ ಸೆನ್ಸ್, ಮತ್ತ ದೊಡ್ಡಸ್ತಿಕಿ ನಾನ್ ಸೆನ್ಸ್!]
ಇದರ ಜೊತೆಗೆ ಬೆಳಗಾವಿ, ರಾಮದುರ್ಗದ ಸಿದ್ದು ಮೋಟೆ ತಂಡದಿಂದ ಡೊಳ್ಳುಕುಣಿತ, ಕೊಪ್ಪಳದ ಜೀವನ್ ಸಾಬ್ ತಂಡದಿಂದ ಜನಪದ ಗೀತೆ, ಗದಗ ಕೊಣ್ಣೂರಿನ ಪ್ರಕಾಶ್ ಚಂದಣ್ಣನವರ್ ತಂಡದಿಂದ ಜೋಗತಿ ನೃತ್ಯ, ಬೆಂಗಳೂರಿನ ವಿ.ಜಿ.ರಾಘವೇಂದ್ರ ತಂಡದಿಂದ ಸುಗಮ ಸಂಗೀತವಿದೆ. ಸಂಜೆ 5ಕ್ಕೆ ಹೆಣ್ಣುಮಕ್ಕಳಿಗೆ ಉಡಿ ತುಂಬಲಾಗುವುದು. ಈ ಎಲ್ಲ ಕಾರ್ಯಕ್ರಮಗಳಿಗೆ ಕನ್ನಡ ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವ ಇದೆ.[ನ್ಯಾಯಾಧಿಕರಣದ ಮಧ್ಯಂತರ ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಮನವಿ]
ಭಾನುವಾರವೇ ಕಾರ್ಯಕ್ರಮ ಇರುವುದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಉತ್ತರ ಕರ್ನಾಟಕದ ಹಬ್ಬ, ಆಚರಣೆ, ಊಟೋಪಚಾರದ ಸವಿಯನ್ನು ಅನುಭವಿಸಬಹುದು. ಆಯೋಜಕರ ಮೊಬೈಲ್ ಸಂಖ್ಯೆ 9845392269. 7760066423.