ದರೋಡೆ ಮಾಡಿದ ಹಣ ಭಯೋತ್ಪಾದನಾ ಕೃತ್ಯಕ್ಕೆ ಪೂರೈಕೆ
ಬೆಂಗಳೂರು, ಆಗಸ್ಟ್ 23: ಚಿನ್ನದ ದರೋಡೆ ಪ್ರಕರಣದಲ್ಲಿ ಅಬ್ದುಲ್ ಹಲೀಂನನ್ನು ಬಂಧಿಸಿರುವ ಕೇರಳ ಪೊಲೀಸರಿಗೆ ಹಲವು ಸುಳಿವುಗಳು ದೊರೆತಿವೆ. ಅ ಪೈಕಿ ಅತಿ ಮುಖ್ಯವಾದದ್ದು ಭಯೋತ್ಪಾದನಾ ಸಂಘಟನೆಗಳೊಂದಿಗಿನ ಹಲೀಂ ನಂಟು. ಎರಡನೆಯದು ಹಲೀಂ ಹಾಗೂ ಆತನ ಸಹಚರರು ತಾವು ಜಾಗೃತ ದಳದ ಅಧಿಕಾರಿಗಳು ಎಂದು ಹೇಳಿಕೊಂಡು ಪೆರುವಂಬೂರು, ಎರ್ನಾಕುಲಂನ ವ್ಯಾಪಾರಿಗಳ ಮನೆಗಳ ಮೇಲೆ ದಾಳಿ ಮಾಡಿರುವ ಮಾಹಿತಿ.
ಆಗಸ್ಟ್ 19ರಂದು ಸಹ ವ್ಯಾಪಾರಿಯೊಬ್ಬರ ಮನೆ ಮೇಲೆ ದಾಳಿ ಮಾಡಿದ ತಂಡ, ಹದಿಮೂರು ಲಕ್ಷ ಮೌಲ್ಯದ ಚಿನ್ನ ವಶಪಡಿಸಿಕೊಂಡಿತ್ತು. ಆ ವ್ಯಾಪಾರಿಗೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದ. ಆಗ ಇವರು ಜಾಗೃತ ದಳದ ಅಧಿಕಾರಿಗಳಲ್ಲ, ಕಳ್ಳರ ಗುಂಪು ಎಂದು ಗೊತ್ತಾಗಿತ್ತು. ಇದೇ ತಂತ್ರ ಬಳಸಿ ಈ ಹಿಂದೆ ಸಹ ವ್ಯಾಪಾರಿಗಳನ್ನು ಗುರಿ ಮಾಡಿಕೊಂಡು ಈ ತಂಡ ವಂಚನೆ ಎಸಗಿದ್ದಾರೆ. ಆ ಮೂಲಕ ಬಂದ ಹಣವನ್ನು ಕೇರಳದಲ್ಲಿ ಭಯೋತ್ಪಾದನಾ ಚಟುವಟಿಕೆಗಾಗಿ ಹಾಗೂ ಜೈಲಿನಲ್ಲಿದ್ದ ತಂಡದ ಇತರ ಸದಸ್ಯರನ್ನು ಹೊರಗೆ ತರಲು ಬಳಕೆ ಮಾಡಿದ್ದಾರೆ ಎಂದು ಪೊಲೀಸರಿಗೆ ತಿಳಿದುಬಂದಿದೆ.[ಕರ್ನಾಟಕ- ಕೇರಳ ಗಡಿಯಲ್ಲಿ ಚಳಿ ಕಾಯಿಸುತ್ತಿರುವ ಐಎಸ್ಐಎಸ್]
ವಿಚಾರಣೆ ವೇಳೆ ಟಿ.ನಾಸಿರ್ ಗೆ ತಾನು ಬಹಳ ಹತ್ತಿರದವನು ಅಂತ ಹಲೀಂ ಬಾಯಿ ಬಿಟ್ಟಿದ್ದಾನೆ. ಈ ನಾಸಿರ್ ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣದ ಆರೋಪಿ, 2009ರಲ್ಲಿ ಈತನನ್ನು ಬಂಧಿಸಲಾಗಿತ್ತು. ಇನ್ನು ಹಲೀಂನ ಸಹ ಅನ್ನಾಸ್ 2005ರಲ್ಲಿ ಕೊಚ್ಚಿಯಲ್ಲಿ ಬಸ್ ಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಭಾಗಿಯಾಗಿದ್ದವನು. ಈ ಎಲ್ಲ ಅಂಶಗಳಿಂದ ಈ ತಂಡ ದರೋಡೆ-ಕಳ್ಳತನ ಮಾತ್ರ ಮಾಡುತ್ತಿರುವ ಸಾಮಾನ್ಯ ತಂಡ ಅಲ್ಲ ಎಂಬ ಅನುಮಾನ ಪೊಲೀಸರಿಗೆ ಬಂದಿದೆ.[ಸಕ್ಕರೆ ನಾಡಲ್ಲಿ ಹೈಅಲರ್ಟ್, ಕೆಆರ್ ಎಸ್ ಗೆ ಬಿಗಿಭದ್ರತೆ]
ಈ ಪ್ರಕರಣದಲ್ಲಿ ನಮ್ಮ ಕೈಗೆ ಸಿಕ್ಕಿಬಿದ್ದಿರುವ ಪ್ರಮುಖ ಆರೋಪಿಗಳ ವಿಚಾರಣೆ ನಡೆಸುತ್ತಿದ್ದೇವೆ. ಇನ್ನೂ ಹೆಚ್ಚಿನ ಮಾಹಿತಿ ಸಿಗುವ ವಿಶ್ವಾಸ ಇದೆ. ಉಗ್ರ ನಾಸಿರ್ ನ ವಿಚಾರಣೆಗಾಗಿ ಮನವಿ ಸಲ್ಲಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.