ಒಣಮೆಣಸಿನಕಾಯಿ ಹಂಚಿ 'ಆಕ್ರೋಶ್' ವ್ಯಕ್ತಪಡಿಸಿದ ವಾಟಾಳ್
ಬೆಂಗಳೂರು,ನವೆಂಬರ್ 28: ಕೇಂದ್ರದ ಅವ್ಯವಸ್ಥಿತ ಅಪನಗದೀಕರಣ ವಿರೋಧಿಸಿ ನವೆಂಬರ್ 28ರಂದು ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಒಣಮೆಣಸಿನಕಾಯಿ ಹಂಚಿದರು.[ಕಪ್ಪುಹಣ ಇರುವವರಿಗೆ ಮಾತ್ರವಲ್ಲ, ತೆರಿಗೆ ಅಧಿಕಾರಿಗಳಿಗೂ ನಿದ್ದೆಯಿಲ್ಲ!]
ಮೆಜೆಸ್ಟಿಕ್ ನಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ವಾಟಾಳ್, ಕೇಂದ್ರ ಸರ್ಕಾರ ಅಪನಗದೀಕರಣ ಮಾಡಿರುವುದೇನೋ ಒಳ್ಳೆಯದು ಅದರೆ ಅಪನಗದೀಕರಣಕ್ಕೆ ತೆಗೆದುಕೊಂಡ ನಿಲುವುಗಳು ವ್ಯವಸ್ಥಿತವಾಗಿಲ್ಲ. ಹೀಗಾಗಿ ದೇಶದ ಕೋಟಿ ಕೋಟಿ ಜನರಿಗೆ ತೊಂದರೆಯಾಗಿದೆ. ಅರಾಜಕತೆ ತಾಂಡವವಾಡುತ್ತಿದೆ. ನವೆಂಬರ್ 8 ರಿಂದ ಬ್ಯಾಂಕ್, ಪೋಸ್ಟ್ ಆಫೀಸಿನ ಮುಂದೆ ಜನರು ಕುಳಿತು ಆನ್ನಾಹಾರ ವಿಲ್ಲದೆ ಶೌಚಾಲಯದ ವ್ಯವಸ್ಥೆಯಿಲ್ಲದೆ ಗಂಭೀರ ಪರಿಸ್ಥಿತಿ ಅನುಭವಿಸಿದ್ದಾರೆ. ಜನರು ತಮ್ಮ ಹಣವನ್ನು ತಾವೇ ತೆಗೆಯಲಾರದ ಸ್ಥಿತಿಯನ್ನು ತಲುಪಿದ್ದಾರೆ. ಎಷ್ಟೋ ಜನ ಮೃತರಾಗಿದ್ದಾರೆ ಎಂದರು.
ಕೇಂದ್ರ ಸರ್ಕಾರದ ಅಪನಗದೀಕರಣದಿಂದ ಸರ್ಕಾರಿ ಮತ್ತು ಖಾಸಗೀ ಬ್ಯಾಂಕುಗಳು ಹೆಚ್ಚು ಹೆಚ್ಚು ದುಡ್ಡು ಮಾಡಿಕೊಳ್ಳುತ್ತಿವೆ. ಸಾಮಾನ್ಯವರ್ಗ ಮತ್ತೆ ಬಡತನದ ಕಡೆ ಜಾರುತ್ತಿದೆ ಹೀಗಾಗಿ ಕನ್ನಡದ ವಾಟಾಳ್ ಪಕ್ಷ ಅಸಹನೀಯ ಸ್ಥಿತಿಯನ್ನು ತಲುಪಿರುವ ಜನರಿಗೆ ಒಣಮೆಣಸಿನಕಾಯಿಯನ್ನು ಹಂಚಿ ಖಾರವಾದ ಆಕ್ರೋಶ ವ್ಯಕ್ತಪಡಿಸುತ್ತಿದೆ ಎಂದು ತಿಳಿಸಿದರು.[ಕಾವೇರಿಗಾಗಿ ಜಮಖಾನೆ ಮೇಲೆ ವಾಟಾಳ್ ಉರುಳುಸೇವೆ]
ವೈವಿಧ್ಯಮಯವಾದ ಪ್ರತಿಭಟನೆಗಳನ್ನು ಮಾಡುವ ವಾಟಾಳ್ ನಾಗರಾಜ್ ಅವರು ಕೇಂದ್ರದ ಅವ್ಯವಸ್ಥಿತ ನಿರ್ಧಾರದ ವಿರುದ್ಧ ಒಣಮೆಣಸಿನಕಾಯಿ ಹಂಚಿ ಆಕ್ರೋಶ ವ್ಯಕ್ತ ಪಡಿಸಿರುವುದು ವಿಶೇಷವಾಗಿತ್ತು.