ಡಿಕೆಶಿ ವಿರುದ್ಧ ಐಟಿ ಅಸ್ತ್ರ: ಮಧ್ಯರಾತ್ರಿಯಾದರೂ ಸಾಗಿದೆ ತನಿಖೆ
ಇಂಧನ ಸಚಿವ ಡಿಕೆ ಶಿವಕುಮಾರ್ ನಿವಾಸಗಳ ಮೇಲೆ ಐಟಿ ದಾಳಿ. ಬೆಳಗಿನ ಜಾವ ನಡೆದಿದ್ದ ದಾಳಿ ಸಂಜೆ ಹಾಗೂ ಮಧ್ಯರಾತ್ರಿಯೂ ಮುಂದುವರಿಕೆ.
ಬೆಂಗಳೂರು, ಆಗಸ್ಟ್ 2: ಕರ್ನಾಟಕದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಮನೆಯ ಮೇಲೆ ಬುಧವಾರ (ಜುಲೈ 2) ಬೆಳಗಿನ ಜಾವವೇ ನಡೆದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ, ದಿನವಿಡೀ ಭಾರೀ ಸಂಚಲನ ಸೃಷ್ಟಿಸಿತು.
ಡಿಕೆ ಶಿವಕುಮಾರ್ ಅವರ ನಿವಾಸಗಳು ಮಾತ್ರವಲ್ಲ, ಅವರ ಸಹೋದರ ಹಾಗೂ ಸಂಸದ ಡಿ.ಕೆ. ಸುರೇಶ್, ಡಿಕೆಶಿ ಆಪ್ತರಾದ ಜ್ಯೋತಿಷಿ ದ್ವಾರಕಾನಾಥ್ ಗುರೂಜಿ, ಡಿಕೆಶಿ ಆಪ್ತ ಕಂಪನಿಗಳಾದ ಶೋಭಾ ಡೆವಲೆಪರ್ಸ್, ಧವನಂ ಜ್ಯೂವೆಲರ್ಸ್ ಸಂಸ್ಥೆಗಳು ಹೀಗೆ ಹಲವಾರು ಕಡೆ ದಾಳಿ ನಡೆಸಿದ ಅಧಿಕಾರಿಗಳು ಡಿಕೆಶಿ ಸಂಬಂಧಿಕರು, ಕಾರು ಚಾಲಕರು, ಆಪ್ತ ಸಹಾಯಕರನ್ನೂ ವಿಚಾರಣೆಗೊಳಪಡಿಸಿದರು.
ಕಾಂಗ್ರೆಸ್ ಪ್ರಭಾವಿ ನಾಯಕ ಹಾಗೂ ದೇಶದ ಅತಿ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರೆನಿಸಿರುವ ಡಿಕೆ ಶಿವಕುಮಾರ್ ಅವರ ಮೇಲೆ ನಡೆದ ಈ ಐಟಿ ದಾಳಿ ರಾಷ್ಟ್ರಮಟ್ಟದಲ್ಲಿಯೂ ಸುದ್ದಿಯಾಯಿತು. ಪ್ರಕರಣದ ರಾಜಕೀಯ ರಂಗು ಪಡೆದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸದನಕ್ಕೆ ಸ್ಪಷ್ಟನೆ ನೀಡಬೇಕಾಯಿತು.
ಡಿಕೆಶಿ ಬಂಧನ ಸಾಧ್ಯತೆ; ಲಾಕರ್ ನಲ್ಲಿ 10 ಕೋಟಿ ನಗದು, ಚಿನ್ನ ಪತ್ತೆ
ಇದೇ ಪ್ರಕರಣದಲ್ಲಿ ಮತ್ತಷ್ಟು ಬೆಳವಣಿಗೆಗಳು ಜರುಗಿದವು. ಸಂಜೆಯ ವೇಳೆಕೆ ಡಿಕೆಶಿ ಅವರನ್ನು ಅವರ ನಿವಾಸಕ್ಕೆ ಕರೆತಂದ ಐಟಿ ಅಧಿಕಾರಿಗಳು, ಅಲ್ಲಿ ಬೆಳಗಿನ ರೈಡ್ ವೇಳೆ ಸಿಕ್ಕಿದ್ದ ಲಾಕರ್ ಅನ್ನು ತೆಗೆಸಿದರು. ಅದರಲ್ಲಿ 10 ಕೋಟಿ ರು. ನಗದು, 10 ಕೆಜಿ ಚಿನ್ನ ಪತ್ತೆಯಾಯಿತು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದವು.
ಯಾರೀತ ಡಿಕೆ ಶಿವಕುಮಾರ್ ಆಪ್ತ ದ್ವಾರಕನಾಥ್ ಗುರೂಜಿ?
ಏತನ್ಮಧ್ಯೆಯೇ, ಸಂಜೆಯಿಂದ ರಾತ್ರಿವರೆಗೆ ನಡೆದ ವಿದ್ಯಮಾನಗಳು ಹೀಗಿವೆ.
ಅಲ್ಲೇ ಊಟ, ತನಿಖೆ
ಡಿಕೆಶಿ ಮಾವನ ಮನೆಯವರನ್ನು ವಿಚಾರಣೆಗೆ ಒಳಪಡಿಸಿರುವ ಐಟಿ ಅಧಿಕಾರಿಗಳ ಮತ್ತೊಂದು ತಂಡ ಅದೇ ಮನೆಯಲ್ಲಿ ಬುಧವಾರ ರಾತ್ರಿ ಮೊಕ್ಕಾಂ ಹೂಡಿದೆ. ಹೊಟೆಲ್ ನಿಂದ ಅಲ್ಲಿಗೇ ಊಟ ತರಿಸಿಕೊಂಡ ಅಧಿಕಾರಿಗಳು ಅಲ್ಲೇ ಊಟ ಮಾಡಿ ಮತ್ತೆ ತನಿಖೆ ಮುಂದುವರಿಸಿದ್ದಾರೆಂದು ಹೇಳಲಾಗಿದೆ.
7.5 ಕೋಟಿ ರು. ಜಪ್ತಿ
ಇತ್ತ, ಡಿಕೆಶಿ ಅವರಿಗೆ ಸಂಬಂಧಪಟ್ಟ ಇತರ ಆಸ್ತಿಗಳ ತನಿಖೆ ನಡೆಸುತ್ತಿದ್ದ ತನಿಖಾ ತಂಡ, ಅವರಿಗೆ ಸಂಬಂಧಪಟ್ಟ ಎರಡು ಫ್ಲಾಟ್ ಗಳಿಂದ ಸುಮಾರು 7.5 ಕೋಟಿ ರು. ಹಣವನ್ನು ವಶಪಡಿಸಿಕೊಂಡಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ರೇಣುಕಾ ಚೌಧರಿ ಕಿಡಿ
ಡಿಕೆಶಿ ಪ್ರಕರಣದ ತನಿಖೆ ಮತ್ತಷ್ಟು ಜೋರಾಗುತ್ತಿದ್ದಂತೆಯೆ, ಇತ್ತ ಕಾಂಗ್ರೆಸ್ ನಾಯಕ ಆರೋಪಗಳೂ ತಾರಕಕ್ಕೇರಿದ್ದವು. ಕಾಂಗ್ರೆಸ್ ಹಿರಿಯ ನಾಯಕಿ ರೇಣುಕಾ ಚೌಧರಿ ಮಾತನಾಡಿ, ಬಿಜೆಪಿಗೆ ಇದು (ಐಟಿ ರೈಡ್) ಮುಂದೆ ದುಬಾರಿಯಾಗಲಿದೆ ಎಂದರು.
ಮಾಹಿತಿ ನೀಡುವಂತೆ ತಾಕೀತು
ಏತನ್ಮಧ್ಯೆ, ಕೇಂದ್ರ ಚುನಾವಣಾ ಆಯೋಗವು, ಗುಜರಾತ್ ಶಾಸಕರಿಗೆ ವಾಸ್ತವ್ಯ ಕಲ್ಪಿಸಿದ್ದ ಡಿಕೆಶಿ ಅವರ ಮನೆ ಮೇಲೆ ದಾಳಿ ನಡೆದ ನಂತರ ಸಿಕ್ಕ ದಾಖಲೆಗಳ ವಿವರಣೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.