ಕರ್ನಾಟಕದಲ್ಲಿ ಇತ್ತೀಚೆಗೆ ನಡೆದಿರುವ ಅತ್ಯಾಚಾರಗಳ ಪಟ್ಟಿ
ಬೆಂಗಳೂರು, ನವೆಂಬರ್ 13 : ಅಪ್ರತಿಮ ದೇಶಭಕ್ತ, ಜಾತ್ಯತೀತ ರಾಜ ಎಂಬ ಹಣಪಟ್ಟಿ ಕಟ್ಟಿ ಟಿಪ್ಪು ಸುಲ್ತಾನ್ ಹುಟ್ಟುಹಬ್ಬದ ಆಚರಣೆಗಿಳಿದ ರಾಜ್ಯ ಸರಕಾರದ ನಡೆ, ರಾಜ್ಯದಲ್ಲಿ ಕೋಮು ಸೌಹಾರ್ದತೆ ಕದಡುವಂಥ ಪರಿಸ್ಥಿತಿ ನಿರ್ಮಾಣ ಮಾಡಿದೆ. ಮತ್ತೊಂದೆಡೆ ಗಿರೀಶ್ ಕಾರ್ನಾಡ್ ಅವರ ಅಪ್ರಬುದ್ಧ ಹೇಳಿಕೆ ಉರಿಯುತ್ತಿರುವ ಜ್ವಾಲೆಗೆ ತುಪ್ಪ ಸುರಿದಿದೆ.
ಸಿದ್ದರಾಮಯ್ಯ ಸರಕಾರ ಈ ಸಂಗತಿಗಿಂತ ಬೃಹದಾಕಾರದ ಸಮಸ್ಯೆಯನ್ನು ಬಗಲಲ್ಲೇ ಇಟ್ಟುಕೊಂಡಿದ್ದರೂ, ಟಿಪ್ಪು ಸುಲ್ತಾನ್ನಂಥ ವಿವಾದಾತ್ಮಕ ಬಾಂಬಿಗೆ ಕಿಡಿ ಹಚ್ಚಲು ಹೊರಟಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯೇ ಸರಿ. ಈ ಆಚರಣೆಯಿಂದ ಶಾಂತಿ ಕದಡಿದ್ದು ಮಾತ್ರವಲ್ಲದೆ, ಅಭಿವೃದ್ಧಿಗೆ ಕಲ್ಲೇಟು ಬಿದ್ದಂತಾಗಿದೆ. ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿಯನ್ನೂ ತೋಡುತ್ತಿಲ್ಲ ಸರಕಾರ!
ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ಲೆಕ್ಕಹಾಕಿ, ವಿವಾದಾತ್ಮಕ ಘಟನಾವಳಿಗಳ ಜೊತೆಗೆ ತಕ್ಕಡಿಯಲ್ಲಿ ತೂಗಿ ನೋಡಿ, ಯಾವುದು ಹೆಚ್ಚು ತೂಗುತ್ತದೆಂದು. ಕಳೆದ ಎರಡು ವರ್ಷದಲ್ಲಿ ಒಂದಲ್ಲ, ಎರಡಲ್ಲ ಎಂಟ್ಹತ್ತು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಆದರೂ, ಸರಕಾರ ಎಚ್ಚೆತ್ತುಕೊಂಡಿಲ್ಲ. [ಅತ್ಯಾಚಾರಿಗಳು ಟೆನ್ನಿಸ್ ಸ್ಟೇಡಿಯಂನ ಸಿಬ್ಬಂದಿಗಳಲ್ಲ]
ಇತ್ತೀಚೆಗೆ ಕರ್ನಾಟಕದಲ್ಲಿ ನಡೆದಿರುವ ಅತ್ಯಾಚಾರಗಳು
1) ಕಬ್ಬನ್ ಪಾರ್ಕ್ನಲ್ಲಿರುವ ಟೆನ್ನಿಸ್ ಕ್ಲಬ್ನಲ್ಲಿ ನವೆಂಬರ್ 11ರ ರಾತ್ರಿ 10 ಗಂಟೆ ಸುಮಾರಿಗೆ 30 ವರ್ಷದ ತುಮಕೂರಿನ ಯುವತಿಯ ಮೇಲೆ ಸೆಕ್ಯೂರಿಟಿ ಗಾರ್ಡ್ ಗಳಿಂದ ಸಾಮೂಹಿಕ ಅತ್ಯಾಚಾರ ನಡೆದಿದೆ. ಇಬ್ಬರೂ ಬಂಧಿತರಾಗಿದ್ದಾರೆ. ಆದರೆ ಇದೂ ಕೂಡ ಹತ್ತರಲ್ಲಿ ಹನ್ನೊಂದನೇಯದಾಗುವುದಾ?
2) ನವೆಂಬರ್ 6ರಂದು ಶುಕ್ರವಾರ ಹೊಸಕೋಟೆಯ ಬಳಿ, ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿಯ ಅತ್ಯಾಚಾರ ಚಲಿಸುತ್ತಿರುವ ಬಸ್ಸಿನಲ್ಲಿ ನಡೆದಿತ್ತು. ಬಸ್ ಡ್ರೈವರ್ ಮತ್ತು ಕ್ಲೀನರ್ ಬಂಧಿತರಾಗಿದ್ದಾರೆ.
3) ಅಕ್ಟೋಬರ್ 31ರ ರಾತ್ರಿ ಬೆಣ್ಣೆ ದೋಸೆ ಖ್ಯಾತಿಯ ದಾವಣಗೆರೆಯಲ್ಲಿ 64 ವರ್ಷದ ವೃದ್ಧೆಯ ಮೇಲೆ ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. [ವಿಡಿಯೋ ವಿಡಂಬನೆ : ಅತ್ಯಾಚಾರಕ್ಕೆ ಕಾರಣ ಯಾರು?]
4) ಮೈಸೂರು ನಗರದ ಮೇಟಗಳ್ಳಿ ಸಮೀಪ 2 ವರ್ಷದ ಹಸುಳೆಯ ಮೇಲೆ ಸಂಬಂಧಿಕನೊಬ್ಬ ಅತ್ಯಾಚಾರವೆಸಗಿ ಭೀಕರವಾಗಿ ಹತ್ಯೆ ಮಾಡಿದ್ದ. ಈ ಘಟನೆ ಇಡೀ ಮೈಸೂರನ್ನು ತಲ್ಲಣಗೊಳ್ಳಿಸಿತ್ತು.
5) ಅಕ್ಟೋಬರ್ 3ರಂದು ಶನಿವಾರ 22 ವರ್ಷದ ಬಿಪಿಓ ಉದ್ಯೋಗಿಯ ಮೇಲೆ ಚಲಿಸುತ್ತಿದ್ದ ವ್ಯಾನಿನಲ್ಲಿ, ಹಾಡಹಗಲೇ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಇದು ಮಡಿವಾಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜರುಗಿತ್ತು.
6) 5 ಮಂದಿ ದುಷ್ಕರ್ಮಿಗಳ ತಂಡ ತುಮಕೂರಿನ ಟೌಲ್ ಹಾಲ್ ಬಳಿ ಬೆಂಗಳೂರಿಗೆ ಬರಲು ಬಸ್ಸಿಗಾಗಿ ಕಾಯುತ್ತಿದ್ದ 28 ವರ್ಷದ ಮಹಿಳೆಯನ್ನು ಟಾಟಾ ಸುಮೋ ವಾಹನದಲ್ಲಿ ಅಪಹರಿಸಿ, ಸಾಮೂಹಿಕ ಅತ್ಯಾಚಾರ ನಡೆಸಿತ್ತು. ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯ ಹಳೆ ನಿಜಗಲ್ ಸಮೀಪ ಆಕೆಯನ್ನು ಬಿಟ್ಟು ಪರಾರಿಯಾಗಿತ್ತು.
7) ಕುಂದಾಪುರದ ಗೋಳಿಯಂಗಡಿ ಬಳಿಯ ಕಾರಿಕೊಡ್ಲುವಿನಲ್ಲಿ 19 ವರ್ಷದ ಸುಚಿತ್ರಾ ಎಂಬ ಯುವತಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿತ್ತು. ಆಕೆಯ ಶವವನ್ನು ಕಾರಿಕೊಡ್ಲುವಿನಲ್ಲಿ ಪೊದೆಯಲ್ಲಿ ಬಿಸಾಕಿ ಹೋಗಲಾಗಿತ್ತು.
8) ನಗರದ ಎಚ್ಎಸ್ಆರ್ ಲೇಔಟಲ್ಲಿ ಮುಂಬೈ ಮೂಲದ 26 ವರ್ಷದ ಮಹಿಳೆಯ ಮೇಲೆ ನಾಲ್ವರು ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಘಟನೆ ನಡೆದಿದ್ದು ಮೇ 12ರ, 2014ರಲ್ಲಿ.
9) 2014ರ ಜುಲೈ 11ರಂದು ಬೆಂಗಳೂರಿನ ಫ್ರೇಜರ್ ಟೌನ್ ನಲ್ಲಿ ಮಣಿಪಾಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಮೇಲೆ ಐವರು ಅತ್ಯಾಚಾರ ಎಸಗಿದ್ದರು.
ಇದಕ್ಕೆಲ್ಲ ಕಾರಣ ಯಾರು?
ಹೀಗೇ ಅತ್ಯಾಚಾರಗಳ ಪಟ್ಟಿ ಮಾಡುತ್ತ ಹೋದರೆ ಅದಕ್ಕೆ ಲೆಕ್ಕವೇ ಇಲ್ಲ. ಆದರೆ, ಇದಕ್ಕೆಲ್ಲ ಜವಾಬ್ದಾರಿ ಯಾರು? ಸರಕಾರವೆ, ಪೊಲೀಸ್ ಇಲಾಖೆಯೆ ಅಥವಾ ಅತ್ಯಾಚಾರಕ್ಕೊಳಗಾದ ಮಹಿಳೆಯರೆ? ಮಹಿಳೆಯರ ಸುರಕ್ಷತೆಯ ಬಗ್ಗೆ ಪೊಲೀಸ್ ಇಲಾಖೆಗೆ ಕಾಳಜಿ ಇಲ್ಲ ಎಂದು ಹೇಳಲಾಗದು ಎಂದು ಇಲಾಖೆ ಹೇಳುತ್ತಿದೆ.
ಅಚ್ಚರಿಯ ಸಂಗತಿಯೆಂದರೆ, ಇದರಲ್ಲಿರುವ ಅನೇಕ ಘಟನೆಗಳು ಜನರಿರುವ ಪ್ರದೇಶದಲ್ಲಿಯೇ ಜರುಗಿವೆ. ಈ ಪ್ರದೇಶಗಳಲ್ಲಿ ರಾತ್ರಿ ಹೊತ್ತಿನಲ್ಲಿ ಪೊಲೀಸರು ಗಸ್ತು ತಿರುಗುತ್ತಿಲ್ಲವೆ? ಅಥವಾ ಈ ಅತ್ಯಾಚಾರಿಗಳಿಗೆ ಪೊಲೀಸರ ಹೆದರಿಕೆಯೇ ಇಲ್ಲವೆ?
ಎಲ್ಲಕ್ಕಿಂತ ಆಘಾತಕಾರಿ ಸಂಗತಿಯೆಂದರೆ, ರಾಜಕಾರಣಿಗಳು ಆಡುತ್ತಿರುವ ಮಾತುಗಳು. ಯಾರೋ ಎಳಕೊಂಡ್ಹೋಗಿ ಅತ್ಯಾಚಾರ ಮಾಡಿದರೆ ನಾನೇನು ಮಾಡೋಕಾಗತ್ತೆ ಅಂತಾರೆ ಈಶ್ವರಪ್ಪ. ಅಲ್ಲರೀ, ಇಬ್ಬರೇ ಹೇಗೆ ಸಾಮೂಹಿಕ ಅತ್ಯಾಚಾರವೆಸಗಲು ಸಾಧ್ಯ ಅಂತ ಬಾಯಿಬಿಟ್ಟಿದ್ದರು ಮಾಜಿ ಗೃಹ ಸಚಿವ ಕೆಜೆ ಜಾರ್ಜ್.