ರಾಮನವಮಿ: ಮೈಸೂರು ರಸ್ತೆಯಲ್ಲಿ ಸಂಚಾರ ಮಾರ್ಗ ಬದಲು
ಬೆಂಗಳೂರು, ಮಾ, 28 : ಶ್ರೀ ರಾಮನವಮಿ ಪ್ರಯುಕ್ತ ಬೆಂಗಳೂರಿನ ಗಾಳಿ ಆಂಜನೇಯ ದೇವಾಲಯದಲ್ಲಿ ವಿಶೇಷ ಕಾರ್ಯಕ್ರಮಗಳು ಮಾರ್ಚ್ 28 ಮತ್ತು 29 ರಂದು ನಡೆಯಲಿದ್ದು ಸುಗಮ ಸಂಚಾರಕ್ಕಾಗಿ ಕೆಲ ಮಾರ್ಗ ಬದಲಾವಣೆ ಮಾಡಲಾಗಿದೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಲ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಬೆಂಗಳೂರು-ಮೈಸೂರು ರಸ್ತೆಯಲ್ಲಿ ಸಿರ್ಸಿ ವೃತ್ತದ ಕಡೆಯಿಂದ ಬಂದ ವಾಹನಗಳು -ಹೊಸಗುಡ್ಡದಹಳ್ಳಿ ಜಂಕ್ಷನ್ನಲ್ಲಿ ಎಡ ತಿರುವು ಪಡೆದು , ಟಿಂಬರ್ ಯಾರ್ಡ್ ಬಡಾವಣೆಯ ಮೂಲಕ ಮುನೇಶ್ವರ ಬ್ಲಾಕ್ 50 ಅಡಿ ರಸ್ತೆಯಲ್ಲಿ ಸಂಚರಿಸಿ ಹೊಸಕೆರೆಹಳ್ಳಿ ರಸ್ತೆ ಮಾರ್ಗವಾಗಿ ರಿಂಗ್ ರಸ್ತೆ ಸೇರಿ ನಂತರ ಮೈಸೂರು ರಸ್ತೆ ಕಡೆಗೆ ಸಂಚರಿಸಬೇಕಿದೆ.
ಮೈಸೂರು ಕಡೆಯಿಂದ ಬರುವ ವಾಹನಗಳು ಕಿಂಕೋ ಜಂಕ್ಷನ್ನಲ್ಲಿ ಎಡ ತಿರುವು ಪಡೆದು ಹೊಸದಾಗಿ ಸಿರ್ಮಿಸಿರುವ ಸೇತುವೆಯ ಮೇಲೆ ಸಂಚರಿಸಿ ಬಾಪೂಜಿನಗರ ಜಂಕ್ಷನ್ ಬಳಿ ಮೈಸೂರು ರಸ್ತೆಗೆ ಸೇರಿ ನಗರ ಪ್ರವೇಶಿಸಬೇಕಿದೆ.
ಜಾತ್ರಾ ಸಮಯದಲ್ಲಿ ಕಿಂಕೋ ಜಂಕ್ಷನ್ನಿಂದ ಹೊಸಗುಡ್ಡದಹಳ್ಳಿ ಜಂಕ್ಷನ್ವರೆಗೆ ವಾಹನ ನಿಷೇದಿಸಲಾಗಿರುತ್ತದೆ. ನಗರಕ್ಕೆ ಪ್ರವೇಶಿಸುವ ಬಾರಿ ವಾಹನಗಳು ಮೈಸೂರು ರಸ್ತೆ ರಿಂಗ್ ರಸ್ತೆ ಜಂಕ್ಷನ್ ಬಳಿ ಎಡ ತಿರುವು ಪಡೆದು ಸಂಚರಿಸಲು ಹಾಗೂ ಉಳಿದ ಎಲ್ಲಾ ತರಹದ ವಾಹನಗಳು ಕಿಂಕೋ ಜಂಕ್ಷನ್ ಬಳಿ ಎಡತಿರುವು ಪಡೆದು ಸಂಚರಿಸಲು ತಿಳಿಸಲಾಗಿದೆ.