ಸರ್ಕಾರ ಆದೇಶಕ್ಕೂ ಮೊದಲೇ ಗೂಟದ ಕಾರು ತ್ಯಜಿಸಿದ್ದವರು ಇವರು!
ಮೇ 1 ರಿಂದ ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಸರ್ಕಾರಿ ಅಧಿಕಾರಿಗಳು, ಸಚಿವರು, ಮುಖ್ಯಮಂತ್ರಿಗಳು ಕೆಂಪು ದೀಪಗಳುಳ್ಳ ಕಾರುಗಳನ್ನು ಬಳಸಕೂಡಕೂಡದೆಂದು ಕೇಂದ್ರ ಸಚಿವ ಸಂಪುಟ ನಿರ್ಧಾರ ಕೈಗೊಂಡಿದ್ದಕ್ಕೆ ಸಂತಸ.
ಬೆಂಗಳೂರು, ಏಪ್ರಿಲ್ 19: ದೇಶದಲ್ಲಿ ವಿಐಪಿ ಸಂಸ್ಕೃತಿ ಕಡಿವಾಣ ಹಾಕಲು ಕೇಂದ್ರ, ರಾಜ್ಯ ಸರ್ಕಾರಗಳ ಸಚಿವರು, ಅಧಿಕಾರಿಗಳ ಕಾರುಗಳ ಮೇಲೆ ಕೆಂಪು ದೀಪವನ್ನು ನಿಷೇಧಿಸಿ ಏಪ್ರಿಲ್ 19ರಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಆದರೆ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸಚಿವರಲ್ಲಿ ಅನೇಕರು ವರ್ಷಗಳ ಹಿಂದೆಯೇ ಕೆಂಪು ದೀಪ ಹಾಗೂ ಗೂಟದ ಕಾರಿನ ಸಂಸ್ಕೃತಿಯಿಂದ ಹಿಂದೆ ಸರಿದಿದ್ದಾರೆ. ಇದನ್ನು ಕಾಂಗ್ರೆಸ್ ಬೆಂಬಲಿಗರೊಬ್ಪರು ತಮ್ಮ ಟ್ವೀಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಅದು ಸತ್ಯವೂ ಆಗಿದೆ.
@OneindiaKannada @KtakaCongress @KPCCofficial @CMofKarnataka There are many Minister in Govt who doest use the red beacon from day 1 they didn't wait for notification to remove. pic.twitter.com/ybFxMTukYB
— Kashyap Nandan (@kashyapnandan_) April 20, 2017
ಗೂಟದ ಕಾರು ನಿಷೇಧದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ''ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹವಾದದು. ನಾನಂತೂ ಹಲವಾರು ವರ್ಷಗಳಿಂದಲೇ ಕೆಂಪು ದೀಪದ ಕಾರುಗಳನ್ನು ಬಳಸುತ್ತಿಲ್ಲ. 1992ರಲ್ಲಿ ನಾನು ಸಚಿವನಾದಾಗಲೇ ನಾನು ಆ ಸಂಸ್ಕೃತಿಗೆ ತಿಲಾಂಜಲಿ ನೀಡಿದ್ದೇನೆ'' ಎಂದು ತಿಳಿಸಿದ್ದಾರೆ.[ಗೂಟದ ಕಾರುಗಳಿಗೆ, ವಿಐಪಿ ಸಂಸ್ಕೃತಿಗೆ ಗುಡ್ ಬೈ!]
ಇನ್ನು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ''ಕೆಂಪು ದೀಪದ ಕಾರುಗಳು ನಮಗ್ಯಾರಿಗೂ ಶಾಶ್ವತವಲ್ಲ. ಈ ಸತ್ಯವನ್ನು ಅರ್ಥಮಾಡಿಕೊಂಡವರಿಗೆ ಆ ಕಾರುಗಳ ಬಗ್ಗೆ ವ್ಯಾಮೋಹ ಇರುವುದಿಲ್ಲ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ'' ಎಂದು ತಿಳಿಸಿದ್ದಾರೆ.
ಇನ್ನು, ಕೃಷಿ ಸಚಿವ ಭೈರೇಗೌಡರು ತಾವು ಗೂಟದ ಕಾರನ್ನು ಉಪಯೋಗಿಸುತ್ತಿಲ್ಲವೆಂದು ಈ ಹಿಂದೆಯೇ ತಿರುಗೇಟು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಹಿಂದೊಮ್ಮೆ, ಬಿಜೆಪಿ ನಾಯಕ ಈಶ್ವರಪ್ಪ ಅವರು, ಬರಪೀಡಿತ ಪ್ರದೇಶಗಳಿಗೆ ಕೃಷಿ ಸಚಿವರಾದ ಕೃಷ್ಣ ಭೈರೇಗೌಡ ಗೂಟದ ಕಾರಿನಲ್ಲಿ ಹೋಗಿ ಬರುತ್ತಿದ್ದಾರೆ. ಹೀಗೆ, ಗೂಟದ ಕಾರಿನಲ್ಲಿ ಭೇಟಿ ನೀಡಿ ಬಂದರೆ ನೈಜ ಸ್ಥಿತಿ ಅವರಿಗೆ ಅರ್ಥವಾಗುತ್ತದೆಯೇ ಎಂಬರ್ಥದಲ್ಲಿ ಟೀಕಿಸಿದ್ದರು.
ಇದಕ್ಕೆ ಉತ್ತರಿಸಿದ್ದ ಕೃಷ್ಣ ಭೈರೇಗೌಡ, ತಾವು ಸಚಿವರ ಮೊದಲ ದಿನದಿಂದಲೇ ಗೂಟದ ಕಾರು ಸಂಸ್ಕೃತಿಯಿಂದ ದೂರ ಉಳಿದಿರುವುದಾಗಿ ತಿರುಗೇಟು ನೀಡಿದ್ದರು.
ಕರ್ನಾಟಕದಲ್ಲಿ ಪ್ರಜ್ಞಾವಂತ ಗಣ್ಯರಿದ್ದಾರೆಂಬುದೇ ಖುಷಿಯ ವಿಚಾರ.