ಮಡಿವಾಳ ಕೆರೆ ಹೂಳು ತೆಗೆಯಲು ಸಚಿವರ ಸೂಚನೆ
ಬೆಂಗಳೂರು, ಆಗಸ್ಟ್ 01 : ಮಡಿವಾಳ ಕೆರೆಯ ಹೂಳೆತ್ತುವ ಕಾಮಗಾರಿಯನ್ನು ತಕ್ಷಣ ಕೈಗೊಳ್ಳುವಂತೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸೂಚನೆ ನೀಡಿದ್ದಾರೆ. ಮಳೆಯಿಂದ ಹಾನಿಗೀಡಾದ ಬೆಂಗಳೂರು ದಕ್ಷಿಣ ಭಾಗದ ವಸತಿ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಹಬ್ಬದಂತೆ ಎಚ್ಚರಿಕೆ ವಹಿಸಲಾಗಿದೆ.[ಬೆಂಗಳೂರಿಗೆ ಮುಂದೇನು ಕಾದಿದೆಯೋ ಭಗವಂತಾ!]
ಮಡಿವಾಳ ಕೆರೆಯ ನೀರು ನುಗ್ಗಿ ಹಾನಿಗೀಡಾದ ಪ್ರದೇಶಗಳ ಪರಿಶೀಲನೆ ನಡೆಸಿದರುವ ಸಚಿವ ರಾಮಲಿಂಗಾ ರೆಡ್ಡಿ ಅವರು, 7 ಕೆರೆಗಳ ಸಂಪರ್ಕ ಹೊಂದಿರುವ ಮಡಿವಾಳ ಕೆರೆಯಲ್ಲಿ ಹೆಚ್ಚು ಹೂಳು ತುಂಬಿದ್ದೇ ಪ್ರವಾಹಕ್ಕೆ ಕಾರಣ ಎಂಬುದನ್ನು ಮನಗಂಡು, ಹೂಳೆತ್ತುವಂತೆ ಸೂಚಿಸಿದ್ದಾರೆ.[ಬೆಂಗ್ಳೂರಲ್ಲಿ ಮಳೆ, ನೀವೇನು ಮಾಡ್ಬೇಕು?]
ಮಳೆಯಿಂದ ಹಾನಿಗೀಡಾದ ಮಡಿವಾಳ, ಕೊಡಿಚಿಕ್ಕನಹಳ್ಳಿ ಹಾಗೂ ಕೈಕೊಂಡ್ರಹಳ್ಳಿಯ ಸುತ್ತಮುತ್ತ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಮಂಜುನಾಥ ರೆಡ್ಡಿ ಅವರು ರಾಜಕಾಲುವೆಗಳ ಒತ್ತುವರಿಯನ್ನು ಶೀಘ್ರವೇ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ....[ಮಳೆ ತಂದ ಸಂಕಷ್ಟ, ರಕ್ಷಣಾ ಕಾರ್ಯ ಹೇಗಿದೆ?]
ಬೆಂಗಳೂರು ನಗರದಲ್ಲಿ ಮಳೆಯಿಂದ ಆಗಿರುವ ಅನಾಹುತಗಳನ್ನು ಸರಿಪಡಿಸಲು ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿದೆ. ಇದಕ್ಕಾಗಿ ಸರ್ಕಾರ 100 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಹೇಳಿದ್ದಾರೆ....
ಒಂದೇ ಮಳೆಗೆ ಕೋಡಿ ಬಿದ್ದಿದ್ದ ಕರೆ
ಜುಲೈ 28ರ ರಾತ್ರಿಯಿಂದ ಸುರಿದ ಒಂದೇ ಮಳೆಗೆ ಮಡಿವಾಳ ಕೆರೆ ಕೋಡಿ ಬಿದ್ದಿತ್ತು. ಇದರಿಂದಾಗಿ ಬಿಟಿಎಂ ಸೇರಿದಂತೆ ವಿವಿಧ ಪ್ರದೇಶಗಳು ಜಲಾವೃತ್ತವಾಗಿತ್ತು.
ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಸಭೆ
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ನೇತೃತ್ವದಲ್ಲಿ ಶನಿವಾರ ಅಧಿಕಾರಿಗಳ ಸಭೆ ನಡೆಯಿತು. ಬಿಬಿಎಂಪಿ ಸದಸ್ಯರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಯಿತು.
ತಕ್ಷಣ ಹೂಳೆತ್ತಲು ಸೂಚನೆ
ಕೆರೆಗಳಲ್ಲಿ ಹೂಳು ತುಂಬಿದ ಕಾರಣ ಪ್ರವಾಹ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಚಿವರು ತಕ್ಷಣವೇ ಪರಿಹಾರ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೆರೆ ಹೂಳೆತ್ತುವ ಸಂಬಂಧ ಇದ್ದ ಎಲ್ಲ ಅಡೆತಡೆಗಳು ನಿವಾರಣೆಯಾಗಿವೆ. ಅರಣ್ಯ ಇಲಾಖೆ ಹೂಳೆತ್ತುವ ಕಾಮಗಾರಿಯನ್ನು ಕೈಗೊಳ್ಳಲಿದೆ.
ಚರಂಡಿ, ರಸ್ತೆಗಳು ಹಾಳು
ಕೆರೆ ನೀರು ತುಂಬಿ ಹರಿದ ಪರಿಣಾಮ ರಸ್ತೆ, ಚರಂಡಿಗಳು ಹಾಳಾಗಿವೆ. ಮಳೆ ನೀರು ಕಾಲುವೆ ನಿರ್ಮಾಣ, ಹೂಳು ತೆಗೆಸುವುದು, ಚರಂಡಿ ದುರಸ್ತಿ ಮೊದಲಾದ ಕಾಮಗಾರಿಗಳನ್ನು ತಕ್ಷಣ ಆರಂಭಿಸಬೇಕಾಗಿದೆ. ವಿವಿಧ ಕಾಮಗಾರಿಗಳಿಗಾಗಿ ಸರ್ಕಾರ 100 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಿದೆ.
ಮಡಿವಾಳ ಕೆರೆ ಹೂಳು ತೆಗೆಯಲು ಸಚಿವರ ಸೂಚನೆ
ರಾಜಧಾನಿ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಆಗಸ್ಟ್ 10ರವರೆಗೆ ಸಾಧಾರಣದಿಂದ ಮಳೆಯಾಗಲಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಂ.ಬಿ.ರಾಜೇಗೌಡ ಅವರು ಹೇಳಿದ್ದಾರೆ. ಬೆಂಗಳೂರು, ತುಮಕೂರು, ಕೋಲಾರ, ರಾಮನಗರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.