ಭಾರತ ಗೋಮೂತ್ರ ರಫ್ತು ಮಾಡಿ ಕೀರ್ತಿಶಾಲಿಯಾಗಲಿ
ಬೆಂಗಳೂರು, ಆಗಸ್ಟ್ 2: ಪ್ರಪಂಚದಲ್ಲಿ ಶ್ರೇಷ್ಠವಾದ ಗೋವಂಶ ಭಾರತೀಯ ಗೋವಂಶ. ಗೋವು ಅಂದರೆ ಭಾರತ. ಪ್ರಪಂಚ ಗೋವಿನ ಲಾಭವನ್ನು ಪಡೆಯಬೇಕು. 'ಗಾವೋ ವಿಶ್ವಸ್ಯ ಮಾತರಃ', ಗೋವು ವಿಶ್ವಜನನಿ, ವಿಶ್ವಮಾತೆ ಎಂದು ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ವಿಶ್ಲೇಷಿಸಿದರು.
ನಗರದಲ್ಲಿ ಮಂಗಳವಾರ (ಆ 2) ಗೋಚಾತುರ್ಮಾಸ್ಯದ 15ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಶ್ರೀಗಳು, ಗೋವಿನ ಉತ್ಪನ್ನಗಳು ಪ್ರಪಂಚಕ್ಕೆ ಲಭ್ಯವಾಗಬೇಕು. ಭಾರತ ಗೋಮಾಂಸ ರಪ್ತು ಮಾಡಿ ಶ್ರೀಮಂತವಾಗಬೇಕಿಲ್ಲ, ಗೋಮೂತ್ರ ರಫ್ತು ಮಾಡಿ ಕೀರ್ತಿಶಾಲಿಯಾಗಲಿ ಎಂದು ಆಶಿಸಿದ್ದಾರೆ. (ಗೋಹತ್ಯೆ ಸರ್ವನಾಶಕ್ಕೆ ಕಾರಣ)
ರೋಗ ನೀಡುವ ಗೋಮಾಂಸಕ್ಕಿಂತ, ಕ್ಯಾನ್ಸರ್ ನಂತಹ ರೋಗಗಳನ್ನು ಗುಣಪಡಿಸುವ ಗೋಮೂತ್ರವನ್ನು ಪ್ರಪಂಚ ಬಳಸಬೇಕು. ಇಡೀ ವಿಶ್ವವೇ ಗೋಮಾತೆಯ ಕೃಪೆಗೆ ಪಾತ್ರವಾಗಲಿ ಎಂದು ರಾಘವೇಶ್ವರ ಶ್ರೀಗಳು ಆಶೀರ್ವಚನ ನೀಡಿದ್ದಾರೆ.
ಈ ಸಂದರ್ಭದಲ್ಲಿ ಬೆಂಗಳೂರಿನ ಸಂದೀಪ್ ಅವರಿಗೆ 'ಗೋ ಸೇವಾಪುರಸ್ಕಾರ' ವನ್ನು ಅನುಗ್ರಹಿಸಿದ ಶ್ರೀಗಳು, ನಗರವಾಸಿಗಳು ಗ್ರಾಮ ಜೀವನದ ಸ್ವಾದವನ್ನು ಪಡೆಯುವಂತಾಗಬೇಕು. ಗೋಸೇವೆಯಿಂದ ಮಾತ್ರ ಅದು ಸಾಧ್ಯ. ಅಂತಹ ಕೆಲಸವನ್ನು ಮಾಡಿದ ಸಂದೀಪ್ ಅಭಿನಂದನಾರ್ಹರು ಎಂದು ಶ್ರೀಗಳು ಹೇಳಿದರು.
ಉಡುಪಿಯ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಶ್ರೀಪಾದರು ಮಾತನಾಡುತ್ತಾ, ಸಂತ ಸಂದೇಶ ನೀಡಿ ಭಗವಂತನನ್ನು ಒಲಿಸಿಕೊಳ್ಳಬೇಕಾದರೆ ಗೋವನ್ನು ಆರಾಧಿಸಬೇಕು. ಸಕಲ ದೇವತೆಗಳ ಸನ್ನಿಧಾನವಿರುವ ಗೋವು ಸಂಪತ್ತಿನ ಪ್ರತೀಕ.
ಸಂಪತ್ತಿನ ಮೂಲ ಪರಿಸರ, ಆರೋಗ್ಯ, ಸದ್ಭುದ್ಧಿ ಎಲ್ಲವೂ ಗೋವಿನ ಮೂಲ. ಗೋವನ್ನು ಉಪೇಕ್ಷಿಸಿದರೆ ಯಾವುದೇ ಜಾಗತೀಕರಣವೂ, ಅಭಿವೃದ್ದಿಯೂ ಸಾಧ್ಯವಿಲ್ಲ ಪುತ್ತಿಗೆ ಶ್ರೀಗಳು ಅಭಿಪ್ರಾಯ ವ್ಯಕ್ತ ಪಡಿಸಿದರು.
ಗೋಸೇವಾ ಪುರಸ್ಕಾರ ಪಡೆದ ಬೆಂಗಳೂರಿನ ಸಂದೀಪ್ 'ಗೋ ಆಧಾರಿತ ತಾರಸಿ ಕೃಷಿ' ಎಂಬ ವಿಷಯದ ಕುರಿತು ಮಾತನಾಡಿ, ನಿಯಮಿತ ಸ್ಥಳಾವಕಾಶಗಳಿರುವ ನಗರ ಪ್ರದೇಶಗಳಲ್ಲಿ ತಾರಸಿಯ ಮೇಲೆ ಗವ್ಯಾಧಾರಿತ ಗೊಬ್ಬರಗಳನ್ನು ಉಪಯೋಗಿಸಿ ಹೇಗೆ ಕೈತೋಟ ಮಾಡಬಹುದು ಎನ್ನುವುದರ ಬಗ್ಗೆ ವಿವರಿಸಿದರು.
ಶ್ರೀಭಾರತೀ ಪ್ರಕಾಶನವು ಹೊರತಂದ ಸಾಧನಾಪಂಚಕ ಪ್ರವಚನಮಾಲಿಕೆಯ ವಿಸಿಡಿಯನ್ನು ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಗೋಕಥಾಗೀತೆ ಧ್ವನಿಮುದ್ರಿಕೆಯನ್ನು ರಾಘವೇಶ್ವರ ಶ್ರೀಗಳು ಲೋಕಾರ್ಪಣೆ ಮಾಡಿದರು.