ಬಿಐಎಎಲ್ ಬಳಿ ರೈಲು ನಿಲುಗಡೆಗೆ ರಾಜೀವ್ ಗೌಡ ಬೆಂಬಲ
ಬೆಂಗಳೂರು, ಜನವರಿ 31 : ಬೆಂಗಳೂರು-ಜೋಲಾರಪೇಟ್ ರೈಲಿಗಾಗಿ ಹೂಡಿ ಬಳಿ ರೈಲು ನಿಲ್ದಾಣ ನಿರ್ಮಿಸಿದ್ದು ಜನರಿಗೆ ಭಾರೀ ಅನುಕೂಲವಾದನಂತರ, ಅಂಥದೇ ನಿಲ್ದಾಣವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದ ಬಳಿ ನಿರ್ಮಿಸಬೇಕೆಂಬ ಕೂಗು ಓಘ ಪಡೆಯುತ್ತಿದೆ.
ಬೆಂಗಳೂರು ಮತ್ತು ಚಿಕ್ಕಬಳ್ಳಾಪುರ ನಡುವಿನ ದೊಡ್ಡಜಾಲ ಮತ್ತು ದೇವನಹಳ್ಳಿ ರೈಲು ನಿಲ್ದಾಣಗಳ ಮಧ್ಯದಲ್ಲಿ, ಟ್ರಂಪೆಟ್ ಫ್ಲೈಓವರ್ ಬಳಿ ಈ ನಿಲ್ದಾಣವನ್ನು ನಿರ್ಮಿಸಬೇಕೆಂದು ಆಗ್ರಹ ಕೇಳಿಬರುತ್ತಿದೆ. ಪ್ರಸ್ತುತ ಚಿಕ್ಕಬಳ್ಳಾಪುರದವರೆಗೆ ಬೆಂಗಳೂರು ಮತ್ತು ಯಶವಂತಪುರದಿಂದ ಮೂರು ರೈಲುಗಳು ಓಡಾಡುತ್ತಿವೆ.
ಈ ಆಗ್ರಹ ಇಂದಿನದಲ್ಲ. ದಶಕದಿಂದಲೂ ಈ ನಿಲ್ದಾಣಕ್ಕಾಗಿ ಒತ್ತಾಯಿಸಲಾಗುತ್ತಿದೆ. ಆದರೆ, ಈಗಾಗಲೆ ಹಲವಾರು ಯೋಜನೆಗಳು ಕುಂಟುತ್ತ ಸಾಗುತ್ತಿರುವುದರಿಂದ ಮತ್ತು ಬಂಡವಾಳದ ಕೊರತೆಯಿಂದಾಗಿ ವಿಮಾನ ನಿಲ್ದಾಣದ ಬಳಿಯ ರೈಲು ನಿಲ್ದಾಣದ ನಿರ್ಮಾಣ ನೆನೆಗುದಿಗೆ ಬಿದ್ದಿದೆ.
ಹೂಡಿ ಬಳಿಯ ರೈಲು ನಿಲ್ದಾಣ ಯಶಸ್ಸು ಕಾಣುತ್ತಿದ್ದಂತೆ ಮತ್ತು ಸಿಟಿಜನ್ಸ್ ಫಾರ್ ಬೆಂಗಳೂರು ಆರಂಭಿಸಿರುವ ಚುಕುಬುಕು ಚಳವಳಿ ಸಾಕಷ್ಟು ಬೆಂಬಲ ಗಳಿಸುತ್ತಿದ್ದಂತೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ರೈಲು ತಂಗುದಾಣದ ಆಗ್ರಹಕ್ಕೆ ಮರುಜೀವ ಬಂದಂತಾಗಿದೆ.
ಈ ನಿಲ್ದಾಣಕ್ಕೆ ಹೆಚ್ಚಿನ ಖರ್ಚೂ ಅಗತ್ಯವಿಲ್ಲ. ಕೇವಲ 50 ಲಕ್ಷ ರು. ಬಂಡವಾಳದಿಂದ ನಿರ್ಮಿಸಬಹುದಾಗಿದೆ. ಈ ನಿಲ್ದಾಣದಲ್ಲಿ ಸದ್ಯಕ್ಕೆ ಪ್ಲಾಟ್ ಫಾರಂ, ಟಿಕೆಟ್ ಬುಕಿಂಗ್ ಕೌಂಟರ್ ನಿರ್ಮಾಣವಾದರೆ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಪ್ರಜಾ ರಾಗ್ ಸಂಸ್ಥೆಯ ಸಂಜೀವ್ ದ್ಯಾಮಣ್ಣವರ್.
ಜನರ ಆಗ್ರಹಕ್ಕೆ ಸಂಸದ, ಕಾಂಗ್ರೆಸ್ ನಾಯಕ ರಾಜೀವ್ ಗೌಡ ಕೂಡ ದನಿಗೂಡಿಸಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಅವರು, ಪ್ರಾದೇಶಿಕ ಅಭಿವೃದ್ಧಿಗಾಗಿ ಸಂಸದರಿಗೆ ನೀಡಲಾಗುವ ಹಣದಿಂದ ಈ ಯೋಜನೆಗೆ ಬಂಡವಾಳದ ಸಹಾಯ ನೀಡುವುದಾಗಿಯೂ ವಾಗ್ದಾನ ನೀಡಿದ್ದಾರೆ.
ಹೆಬ್ಬಾಳದಿಂದ ದೇವನಹಳ್ಳಿ ಮತ್ತು ಮುಂದೆ ಸಾಗುವ ಸಾವಿರಾರು ಪ್ರಯಾಣಿಕರಿಗೆ ಈ ನಿಲ್ದಾಣ ವರದಾನವಾಗಿಲಿದೆ. 20 ಸಾವಿರಕ್ಕೂ ಹೆಚ್ಚು ವಿಮಾನ ನಿಲ್ದಾಣದ ಕಾರ್ಮಿಕರು ಮಾತ್ರವಲ್ಲ ಸಾವಿರಾರು ಪ್ರಯಾಣಿಕರು ಕೂಡ ಇದರ ಲಾಭ ಪಡೆಯಬಹುದಾಗಿದೆ ಎನ್ನುವುದು ಚುಕುಬುಕುಬೇಕು ಆಂದೋಲನದ ಸಂಯೋಜಕ ಶ್ರೀನಿವಾಸ ಅಲವಳ್ಳಿ ಅವರ ಖಚಿತ ಅಭಿಪ್ರಾಯ.
ಹೆಬ್ಬಾಳದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಮೇಲ್ಸೇತುವೆಯೇನೋ ನಿರ್ಮಾಣವಾಗಿದೆ. ಆದರೆ, ಇದರಿಂದ ವಾಹನದಟ್ಟಣೆಯೂ ಅಧಿಕವಾಗಿದೆ. ಇದನ್ನು ಸರಾಗವಾಗಿಸಬೇಕಿದ್ದರೆ ಈ ರೈಲು ನಿಲುಗಡೆಯ ಅಗತ್ಯ ಮಾತ್ರವಲ್ಲ, ಇನ್ನೂ ಹೆಚ್ಚಿನ ರೈಲು ಸಂಪರ್ಕವನ್ನು ನೀಡಬೇಕಿದೆ.