ರಾಜಕಾಲುವೆ ತೆರವಿನಲ್ಲಿ ಮನೆ ಕಳೆದುಕೊಂಡವರಿಗೆ ಪರಿಹಾರ?
ಬೆಂಗಳೂರು, ಆಗಸ್ಟ್ 27: ರಾಜಕಾಲುವೆ ಒತ್ತುವರಿ ತೆರವಿನ ಬಗ್ಗೆ ಶನಿವಾರ ಸಭೆ ನಡೆಸಿದ ಸಿದ್ದರಾಮಯ್ಯ ಪ್ರಭಾವಿಗಳ ಒತ್ತಡಕ್ಕೆ ಮಣಿಯಬಾರದು ಎಂಬ ಖಡಕ್ ಸೂಚನೆಯನ್ನು ಮತ್ತೆ ನೀಡಿದ್ದಾರೆ. ಆದರೆ ಸಜೀವ ರಾಜಕಾಲುವೆ ಒತ್ತುವರಿ ತೆರವಿಗೆ ಮುಂದಾಗಲು ಸೂಚನೆ ನೀಡಿದ್ದಾರೆ.
ರಾಜಕಾಲುವೆ ಮತ್ತು ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡಿರುವ ಬಡ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸುವ ಕುರಿತು ಚಿಂತನೆ ನಡೆಡೆಸಲಾಗಿದೆ ಎಂದು ತಿಳಿಸಿದ್ದಾರೆ.[ರಾಜಕಾಲುವೆ ಒತ್ತುವರಿ: ಒರಾಯನ್ ಮಾಲ್ ಹೇಳುವುದೇನು?]
ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ರಾಜ ಕಾಲುವೆ ಮತ್ತು ಕೆರೆಗಳ ಒತ್ತುವರಿ ತೆರವು ಕಾರ್ಯಚರಣೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಮನೆಗಳನ್ನು ಕಳೆದುಕೊಂಡಿರುವ ಬಡ ಕುಟುಂಬಗಳ ವಿವರ ಒದಗಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸಭೆಯಲ್ಲಿ ಅವರು ಸೂಚಿಸಿದರು.
ಕೆರೆಯಿಂದ ಕೆರೆಗೆ ಸಂಪರ್ಕ ಕಲ್ಪಿಸುವ ರಾಜ ಕಾಲವೆಗಳ ಒತ್ತುವರಿ ತೆರವಿಗೆ ಆದ್ಯತೆ ನೀಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಆದೇಶಿಸಿದ ಅವರು, ವಿಶೇಷವಾಗಿ ನೀರಿನ ಹರಿಯುವಿಕೆಗೆ ಅತಿಕ್ರಮಣದಿಂದಾಗಿ ಆಗಿರುವ ಅಡಚಣೆಯನ್ನು ತೆರವು ಮಾಡುವುದು ಬಿಬಿಎಂಪಿಯ ಆದ್ಯತೆ ಆಗಬೇಕು ಎಂದರು.[ಬಿಬಿಎಂಪಿ ತೆರವು ಕಾರ್ಯಾಚರಣೆ ಬಂದ್ ಮಾಡಿದ್ದೇಕೆ?]
ನಿರುಪಯುಕ್ತ ಹಾಗೂ ಮೂಲ ಸ್ವರೂಪ ಕಳೆದುಕೊಂಡಿರುವ ರಾಜ ಕಾಲುವೆ ಮತ್ತು ಕೆರೆಗಳ ಒತ್ತುವರಿ ತೆರವು ಸದ್ಯಕ್ಕೆ ಬೇಡ. ನೀರು ಸರಾಗವಾಗಿ ಹರಿದು ಹೋಗಲು ಅಡಚಣೆ ಆಗುವಂತೆ ಒತ್ತುವರಿ ಮಾಡಿರುವ ವ್ಯಕ್ತಿ ಅಥವಾ ಸಂಸ್ಥೆಗಳು, ಡೆವಲಪರ್ ಗಳು, ಬಿಲ್ಡರ್ ಗಳು ಸೇರಿದಂತೆ ಪ್ರಭಾವಿಗಳ ಕಟ್ಟಡಗಳನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.
ಮಳೆಗಾಲದಲ್ಲಿ ಪ್ರವಾಹದ ಸಮಸ್ಯೆ ಉಂಟಾಗಬಾರದು. ಪ್ರವಾಹ ಪರಿಸ್ಥಿತಿಯಿಂದ ಜನ ತೊಂದರೆಗೆ ಒಳಗಾಗಬಾರದು. ಪದೇ ಪದೇ ಅವರು ಸಂಕಷ್ಟಕ್ಕೆ ಗುರಿಯಾಗಬಾರದು ಎಂಬ ಹಿನ್ನೆಲೆಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿದೆ. ಸರ್ಕಾರದ ಈ ದಿಟ್ಟ ನಿರ್ಧಾರಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ.[ಮನೆ ಕಳೆದುಕೊಂಡವರಿಂದ ಬಿಬಿಎಂಪಿಗೆ ಪ್ರಶ್ನೆಗಳ ಸುರಿಮಳೆ]
ಬಡವರ ಮನೆಗಳನ್ನು ಮಾತ್ರ ಬಿಬಿಎಂಪಿ ಒಡೆಯುತ್ತಿದೆ. ಪ್ರಭಾವಿಗಳ ಕಟ್ಟಡಗಳನ್ನು ಮುಟ್ಟುತ್ತಿಲ್ಲ ಎಂಬುದು ಸುಳ್ಳು. ಐದಾರು ಕೋಟಿ ರೂ. ವೆಚ್ಚದಲ್ಲಿ ಕಟ್ಟಿರುವ ಮನೆಗಳನ್ನೂ ತೆರವು ಮಾಡಲಾಗಿದೆ. ಒತ್ತುವರಿ ಮಾಡಿಕೊಂಡಿರುವವರು ಯಾರೇ ಆಗಿದ್ದರೂ, ಮುಲಾಜಿಲ್ಲದೆ ತೆರವು ಮಾಡಲಾಗುವುದು ಎಂದು ಮುಖ್ಯಮಂತ್ರಿಯವರು ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಬೆಂಗಳೂರು ನಗರದಲ್ಲಿ ಸಂಚಾರದ ಒತ್ತಡ ಕಡಿಮೆ ಮಾಡುವುದರ ಜೊತೆಗೆ ನಗರ ಮತ್ತು ನಗರದ ಜನತೆಯ ಹಿತದೃಷ್ಟಿಯಿಂದಲೇ ಒತ್ತುವರಿ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಸಚಿವರಾದ ರಾಮಲಿಂಗಾರೆಡ್ಡಿ, ರೋಷನ್ ಬೇಗ್, ಮೇಯರ್ ಮಂಜುನಾಥ ರೆಡ್ಡಿ, ಆಯುಕ್ತ ಮಂಜುನಾಥ ಪ್ರಸಾದ್, ಶಾಸಕರಾದ ದಿನೇಶ್ ಗುಂಡೂರಾವ್, ಎಸ್.ಟಿ. ಸೋಮಶೇಖರ್, ಎನ್.ಎ. ಹ್ಯಾರೀಸ್, ವಿ.ಎಸ್. ಉಗ್ರಪ್ಪ, ಮುನಿರತ್ನ, ಆರ್.ವಿ. ದೇವರಾಜ್, ಪ್ರಿಯಾಕೃಷ್ಣ ಮತ್ತಿತರರು ಹಾಜರಿದ್ದರು.