ಬೆಂಗಳೂರಲ್ಲಿ ಭಾರೀ ಗಾಳಿ ಸಹಿತ ಮಳೆ, ವಿದ್ಯುತ್ ವ್ಯತ್ಯಯ
ನಗರದಲ್ಲಿ ಸೋಮವಾರ ರಾತ್ರಿ ಗುಡುಗು, ಭಾರೀ ಗಾಳಿ ಸಹಿತ ಭರ್ಜರಿ ಮಳೆ ಸುರಿದಿದೆ. ಗಾಳಿಗೆ ಹಲವೆಡೆ ಮರದ ಕೊಂಬೆಗಳು ಬಿದ್ದಿದ್ದರೆ, ಇನ್ನು ಕೆಲವೆಡೆ ರಸ್ತೆ ಪೂರ್ತಿ ನೀರಿನಲ್ಲಿ ಮುಳುಗಿದೆ.ಮಳೆಯಿಂದ ಜನ ವಿದ್ಯುತ್ ವ್ಯತ್ಯಯ ಕೂಡಾ ಅನುಭವಿಸಿದರು.
ಬೆಂಗಳೂರು, ಮೇ 23: ಮುಂಗಾರು ಪೂರ್ವ ಮಳೆ ಬೆಂಗಳೂರನ್ನು ಹಿಂಡಿ ಹಿಪ್ಪೆ ಮಾಡಿ ಹಾಕುತ್ತಿದೆ. ನಗರದಲ್ಲಿ ಸೋಮವಾರ ರಾತ್ರಿ ಗುಡುಗು, ಭಾರೀ ಗಾಳಿ ಸಹಿತ ಭರ್ಜರಿ ಮಳೆ ಸುರಿದಿದೆ. ಗಾಳಿಗೆ ಹಲವೆಡೆ ಮರದ ಕೊಂಬೆಗಳು ಬಿದ್ದಿದ್ದರೆ, ಇನ್ನು ಕೆಲವೆಡೆ ರಸ್ತೆ ಪೂರ್ತಿ ನೀರಿನಲ್ಲಿ ಮುಳುಗಿದೆ.
ಮರದ ಕೊಂಬೆ ಬಿದ್ದು ಹಾಗೂ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ 2-3 ಗಂಟೆ ವಿದ್ಯುತ್ ವ್ಯತ್ಯಯವಾಗಿತ್ತು.
ಸೋಮವಾರ ಪ್ರಮುಖವಾಗಿ ರಾಜ್ಮಹಲ್ ಗುಟ್ಟಹಳ್ಳಿಯಲ್ಲಿ 1.1 ಸೆಂ.ಮೀ, ರಾಜಾಜಿನಗರದಲ್ಲಿ 86 ಮಿಮೀ, ದಯಾನಂದನಗರದಲ್ಲಿ 52ಮಿಮೀ ಹಾಗೂ ಚಿಕ್ಕನಹಳ್ಳಿಯಲ್ಲಿ 50 ಮಿಲಿಮೀಟರ್ ಮಳೆಯಾಗಿರುವುದಾಗಿ ಪ್ರಜಾವಾಣಿ ವರದಿ ಮಾಡಿದೆ.
ನಗರದ ಸರಿಸುಮಾರು ಎಲ್ಲಾ ಭಾಗಗಳಲ್ಲಿಯೂ ಸೋಮವಾರ ರಾತ್ರಿ ಮಳೆಯಾಗಿದೆ. ಕೆಲವೆಡೆ ಮಳೆಯಿಂದಾಗಿ ರಸ್ತೆಯಲ್ಲೇ ನೀರು ಹರಿದಿದೆ. ಇನ್ನು ಕೆಲವೆಡೆ ಚರಂಡಿ ಬ್ಲಾಕ್ ಆಗಿ ರಸ್ತೆ ಮೇಲೆಲ್ಲಾ ನೀರು ನಿಂತಿತ್ತು. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸಿದರು.
ಇನ್ನು ಹಲವು ಕಡೆಗಳಲ್ಲಿ ಮರದ ಕೊಂಬೆಗಳು ನೆಲಕ್ಕುರುಳಿದ್ದೂ ವರದಿಯಾಗಿದೆ. ಭಾರಿ ಗಾಳಿಯಿಂದಾಗಿ ವಾಹನಗಳ ಮೇಲೆ ಕೊಂಬೆಗಳು ಬಿದ್ದು ಒಂದಷ್ಟು ಹಾನಿ ಕೂಡಾ ಸಂಭವಿಸಿದೆ. ವೈಯಾಲಿಕಾವಲ್ ನಲ್ಲಿ ಮಿನಿಬಸ್ ಮೇಲೆ ಕೊಂಬೆ ಬಿದ್ದಿದ್ದರಿಂದ ಬಸ್ಸಿಗೆ ಹಾನಿಯಾಗಿದೆ. ವಿಜಯನಗರದಲ್ಲಿ ರಸ್ತೆ ಮೇಲೆ ಮರದ ಗೆಲ್ಲು ಬಿದ್ದು ವಾಹನ ಸಂಚಾರಕ್ಕೂ ಅಡ್ಡಿಯಾಯಿತು. ಕೆಲವು ಕೊಂಬೆಗಳನ್ನು ಬಿಬಿಎಂಪಿಯ ಸಿಬ್ಬಂದಿಗಳು ರಾತ್ರಿಯೇ ತೆರವುಗೊಳಿಸಿದರು.