ಬೆಂಗಳೂರು: ಅಹೋರಾತ್ರಿ ಮಳೆಗೆ ಜನಜೀವನ ಅಸ್ತವ್ಯಸ್ತ
ಆಗಸ್ಟ್ 14ರ ಮಧ್ಯರಾತ್ರಿಯಿಂದ ಆಗಸ್ಟ್ 15ರ ಮುಂಜಾನೆವರೆಗೆ ಸುರಿದ ಭಾರೀ ಮಳೆ. ಈ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ. ಶಾಂತಿ ನಗರ ಮುಂತಾದೆಡೆ ನೀರು ನುಗ್ಗಿ ಅವಾಂತರ. ಸಂಚಾರವೂ ಅಸ್ತವ್ಯಸ್ತ.
ಬೆಂಗಳೂರು, ಆಗಸ್ಟ್ 15: ಆಗಸ್ಟ್ 14ರ ಮದ್ಯರಾತ್ರಿಯಿಂದ ಆಗಸ್ಟ್ 15 ಬೆಳಗ್ಗೆವರೆಗೂ ಸುರಿದ ಭಾರೀ ಮಳೆಯಿಂದಾಗಿ, ಬೆಂಗಳೂರಿನ ಜನಜೀವನ ಅಸ್ತವ್ಯಸ್ತವಾಗಿದೆ. ಸುಮಾರು 174 ಮಿಲಿ ಮೀಟರ್ ಗಳಷ್ಟು ಮಳೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಶಾಂತಿನಗರ, ವಿಲ್ಸನ್ ಗಾರ್ಡನ್, ಡೈರಿ ಸರ್ಕಲ್, ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಧಾರಕಾರ ಮಳೆ ಸುರಿಯುತ್ತಿದೆ. ಭಾರಿ ಮಳೆಯಿಂದಾಗಿ ಮಾರ್ಗ ಮದ್ಯದಲ್ಲಿಯೇ ನೂರಾರು ವಾಹನಗಳು ಕೆಟ್ಟು ನಿಂತಿವೆ. ತಗ್ಗು ಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿದ್ದರಿಂದ ಜನ ತೀವ್ರವಾಗಿ ಪರದಾಡುವಂತಾಗಿದೆ.
ಹಲವಾರು ರಸ್ತೆಗಳು ಜಲಾವೃತವಾಗಿದ್ದು, ನಗರದ ಹಲವಾರು ಭಾಗಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಅಲ್ಲದೆ,ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅಲ್ಲಿನ ಜನರ ನೆಮ್ಮದಿ ಹಾಳುಗೆಡವಿದೆ.
ಕೋರಮಂಗಲದಲ್ಲಿ ಎಸ್ ಟಿ ಬೆಡ್ ಬಡಾವಣೆಯಲ್ಲಿ ಮನೆಗಳಲ್ಲಿ ಮಾತ್ರವಲ್ಲ ಮುಖ್ಯ ರಸ್ತೆಗಳು, ಅಡ್ಡರಸ್ತೆಗಳು - ಹೀಗೆ ಎಲ್ಲೆಲ್ಲೂ ನೀರು ನಿಂತು ಭಾರೀ ತೊಂದರೆಯಾಗಿದೆ. ಎಲ್ಲೆಲ್ಲೂ ನೆರೆ ಹಾವಳಿ ಉಂಟಾದಂತೆ ಭಾಸವಾಗುತ್ತಿದೆ. ಈ ಪ್ರದೇಶದಲ್ಲಿ 5 ಅಡಿಯಷ್ಟು ನೀರು ನಿಂತಿದೆ.