ಗೋವು ಸೃಷ್ಟಿಯ ಅಂಗ, ಗೋಹತ್ಯೆ ಸರ್ವನಾಶಕ್ಕೆ ಕಾರಣ
ಬೆಂಗಳೂರು, ಆಗಸ್ಟ್ 1: ಮಾನವನ ಪ್ರಾಣ ಹೊರಟು ಹೋದರೆ ಉಳಿದ ಅಂಗಾಂಗಗಳು ನಿಷ್ಕ್ರಿಯವಾಗುತ್ತವೆ. ಹಾಗೆಯೇ ಗೋವಿನ ಹತ್ಯೆ ಸರ್ವನಾಶಕ್ಕೆ ಕಾರಣವಾಗುತ್ತದೆ. ಗೋವು ಸೃಷ್ಟಿಯ ಅಂಗ, ಉತ್ತಮಾಂಗ ಮಾತ್ರವಲ್ಲ ಮುಖ್ಯಾಂಗ ಎಂದು ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.
ನಗರದಲ್ಲಿ ಸೋಮವಾರ (ಆ 1) ಗೋಚಾತುರ್ಮಾಸ್ಯದ 14ನೇ ದಿನದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಶ್ರೀಗಳು, ಮರದಲ್ಲಿ ಕುಳಿತು ಕೊಡಲಿಯಿಂದ ಬುಡವನ್ನು ಕಡಿದು ಸಂಭವಿಸಬಹುದಾದ ಅನಾಹುತದಂತೆ ಗೋ ಹತ್ಯೆ ಮೂಲಕ ಮೂರ್ಖತನವನ್ನು ಪ್ರದರ್ಶಿಸಲಾಗುತ್ತಿದೆ. (ಮಠ ಎದುರಿಸುತ್ತಿರುವ ಸಮಸ್ಯೆಯಿಂದ ದಕ್ಷರು ಸಿಕ್ಕಿದ್ದಾರೆ)
ಗೋಹತ್ಯೆ ಎಂದರೆ ಸ್ವ-ಹತ್ಯೆ. ಗೋ ಸೇವೆ ಅಂದರೆ ಒಂದರ್ಥದಲ್ಲಿ ವೇದ ಸೇವೆ. ವೇದಗಳಲ್ಲಿ ಗೋವಿನ ಮಹತ್ವದ ಬಗ್ಗೆ ಅಲ್ಲಲ್ಲಿ ಉಲ್ಲೇಖವಾಗಿದೆ. ಪ್ರಾಚೀನ ಕಾಲದಲ್ಲೇ ಗೋವಿನ ಮಹತ್ವವೇನಿತ್ತು ಎಂಬ ವಿಚಾರ ಇಂದಿಗೂ ಪ್ರಸ್ತುತವೇ ಆಗಿದೆ ಎಂದು ಶ್ರೀಗಳು ವಿವರಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಸಾಧನಾ ಮಠದ ಚಂದ್ರೇಶಾನಂದ ಜೀ, ಗೋ ಚಾತುರ್ಮಾಸ್ಯದ ಮೂಲಕ ಗೋಲೋಕವನ್ನು ಸೃಷ್ಟಿಸಿದ ರಾಘವೇಶ್ವರ ಶ್ರೀಗಳು ವಿಶಿಷ್ಟವಾದ ಸಂದೇಶವನ್ನು ನೀಡಿದ್ದಾರೆ. ಗೋವು ಮನೆಯಲ್ಲಿ ರತ್ನವಿದ್ದಂತೆ ಎಂದು ಗೋವಿನ ಮಹತ್ವನ್ನು ಚಂದ್ರೇಶಾನಂದ ಜೀ ವಿಶ್ಲೇಷಿಸಿದ್ದಾರೆ.
ಕಳೆದ ಮೂರು ದಶಕಗಳಿಂದ ಸರಕಾರ ಗೋಹತ್ಯೆ ನಿಷೇಧ ಮಾಡಬೇಕೆಂದು ಆಗ್ರಹಿಸಿದರೂ ಫಲಪ್ರದವಾಗಿಲ್ಲ. ಕಾಮದುಘಾ ಎಂಬ ಪದದಲ್ಲಿ ಪ್ರತಿಯೊಂದು ಅಕ್ಷರಕ್ಕೂ ಮಹತ್ವವಿದೆ.
ಕರ್ತವ್ಯವನ್ನು ಮನಗಾಣಬೇಕಾಗಿದೆ. ಪೂರ್ವಜರು ಕಲ್ಪಿಸಿದ ವೇದವನ್ನು ಮರೆಯುತ್ತಿರುವುದು ಸರಿಯಲ್ಲ ಎಂದು ಚಂದ್ರೇಶಾನಂದ ಜೀ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಗೋಸೇವೆಯಲ್ಲಿ ತೊಡಗಿಸಿಕೊಂಡಿರುವ ವೇ. ಮೂ. ಲಕ್ಷ್ಮೀನಾರಾಯಣ ಭಟ್ಟ ಹಾಳದಕಟ್ಟಾರಿಗೆ ಶ್ರೀಗಳು ಗೋಸೇವಾಪುರಸ್ಕಾರವನ್ನು ಅನುಗ್ರಹಿಸಿದರು.
ಸಭೆಯಲ್ಲಿ ಶ್ರೀಭಾರತೀಪ್ರಕಾಶನವು ಹೊರತಂದಿರುವ ಸಾಧನಾಪಂಚಕ ದೃಶ್ಯಮುದ್ರಿಕೆ ಹಾಗೂ ಸಾಮವೇದ ಮಂತ್ರ ಧ್ವನಿಮುದ್ರಿಕೆಯನ್ನು ರಾಘವೇಶ್ವರ ಶ್ರೀಗಳು ಲೋಕಾರ್ಪಣೆಗೊಳಿಸಿದರು.