ಕಿಸ್ ಆಫ್ ಲವ್ನಿಂದ ಹಿಂದೆ ಸರಿದ ರಚಿತಾ ತನೇಜಾ
ಬೆಂಗಳೂರು, ನ. 24: ಕಿಸ್ ಆಫ್ ಲವ್ಗೆ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆಂದೋಲನದಿಂದ ಆಯೋಜಕಿ, ಸಮಾಜ ಸೇವಕಿ ರಚಿತಾ ತನೇಜಾ ಅವರು ಹಿಂದೆ ಸರಿದಿದ್ದಾರೆ.
ಕಾರಣಾಂತರಗಳಿಂದ ಕಿಸ್ ಆಫ್ ಲವ್ ಆಯೋಜನೆಯಿಂದ ಹಿಂದೆ ಸರಿದಿದ್ದೇನೆ ಎಂದಷ್ಟೇ ರಚಿತಾ ತನೇಜಾ ಸ್ಪಷ್ಟನೆ ನೀಡಿದ್ದಾರೆ. ಆದರೆ, ಅವರಿಗೆ ಈ ಕುರಿತು ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಹಿಂಜರಿದಿದ್ದಾರೆಂದು ತಿಳಿದುಬಂದಿದೆ. [ಕಿಸ್ ಆಫ್ ಲವ್ ವಿರುದ್ಧ ಒನಕೆ ಚಳವಳಿ]
ಆದರೆ, ರಚಿತಾ ತನೇಜಾ ದಿಢೀರ್ ನಿರ್ಧಾರದಿಂದ ಉತ್ಸಾಹಗುಂದದ ಕಾರ್ಯಕರ್ತರು ತಾವೇ ಕಿಸ್ ಆಫ್ ಲವ್ ಆಂದೋಲನ ಆಯೋಜನೆಗೆ ಮುಂದಾಗಿದ್ದಾರೆ. ಮೊದಲು ನಿಗದಿಪಡಿಸಿರುವಂತೆ ನ. 30ರಂದು ಮಧ್ಯಾಹ್ನ 4 ಗಂಟೆಗೆ ಟೌನ್ ಹಾಲ್ನಲ್ಲಿ ಆಂದೋಲನ ನಡೆಸಿಯೇ ಸಿದ್ಧ ಎಂದು ಕಿಸ್ ಆಫ್ ಲವ್ ಕಾರ್ಯಕರ್ತರು ಹೇಳಿಕೊಂಡಿದ್ದಾರೆ. ಅಲ್ಲದೆ, ಫೇಸ್ ಬುಕ್ನಲ್ಲಿ ಕೂಡ ಕಿಸ್ ಆಫ್ ಲವ್ ಕಮ್ಯುನಿಟಿ ಹೆಸರಿನ ಪುಟ ಹಾಗೆಯೇ ಇದೆ. [ಕಿಸ್ ಆಫ್ ಲವ್ ಆಯೋಜನೆ ಗೊಂದಲ]
ದಸಂಸ ವಿರೋಧ: ಕಿಸ್ ಆಫ್ ಲವ್ ಆಂದೋಲನಕ್ಕೆ ದಲಿತ ಸಂಘರ್ಷ ಸಮಿತಿ ಕೂಡ ತೀವ್ರ ವಿರೋಧ ವ್ಯಕ್ತಪಡಿಸಿದೆ. ಆಂದೋಲನ ವಿರೋಧಿಸಿ ಸೋಮವಾರ ಪೊಲೀಸ್ ಠಾಣೆಗೆ ನುಗ್ಗಿದ ಸದಸ್ಯರು, ಇದಕ್ಕೆ ಅನುಮತಿ ನೀಡಬಾರದೆಂದು ಆಗ್ರಹಿಸಿದ್ದಾರೆ.
ಈ ಆಂದೋಲನ ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿದ್ದು, ಅತ್ಯಂತ ಅಸಹ್ಯಕರವಾಗಿದೆ. ಇಂತಹ ಆಂದೋಲನದಿಂದ ಯಾವ ಪ್ರಯೋಜನವೂ ಇಲ್ಲ ಎಂದು ದಸಂಸ ಟೀಕಿಸಿದೆ. [ಪ್ರಣವಾನಂದ ಶ್ರೀ ಎಚ್ಚರಿಕೆ]
ರಾಜ್ಯಾದ್ಯಂತ ತೀವ್ರ ವಿರೋಧ: ನೈತಿಕ ಪೊಲೀಸ್ಗಿರಿ ವಿರುದ್ಧ ಕಿಸ್ ಆಫ್ ಲವ್ ಆಂದೋಲನ ಆಯೋಜಿಸುತ್ತಿರುವುದಾಗಿ ಕಮ್ಯುನಿಟಿ ಕಾರ್ಯಕರ್ತರು ಹೇಳಿಕೊಂಡಿದ್ದರು. ಈ ಕುರಿತು ಫೇಸ್ ಬುಕ್ನಲ್ಲಿ 'ಕಿಸ್ ಆಫ್ ಲವ್ ಕಮ್ಯುನಿಟಿ' ಹೆಸರಿನಲ್ಲಿ ಪುಟವೂ ಇತ್ತು. ಆದರೆ, ಆಂದೋಲನಕ್ಕೆ ರಾಜ್ಯದಲ್ಲಿ ಯಾರ ಬೆಂಬಲವೂ ಸಿಕ್ಕಿರಲಿಲ್ಲ.
ಸಾಮಾನ್ಯವಾಗಿ ನೈತಿಕ ಪೊಲೀಸ್ಗಿರಿ ವಿರುದ್ಧದ ಪ್ರತಿಭಟನೆಗೆ ಎಲ್ಲ ರೀತಿಯ ಬೆಂಬಲ ನೀಡುವ ಎಡಪಂಥೀಯರಿಂದಲೂ ವಿರೋಧ ವ್ಯಕ್ತವಾಗಿದೆ. ಕಿಸ್ ಆಫ್ ಲವ್ಗೆ ಅನುಮತಿ ನೀಡಲು ಸರ್ಕಾರ ಹಿಂಜರಿಯುತ್ತಿದ್ದರೆ, ಅನುಮತಿ ನೀಡಬಾರದೆಂದು ಆಗ್ರಹಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಸರ್ಕಾರಕ್ಕೆ ಪತ್ರ ಬರೆದಿದ್ದರು.
ಪ್ರಮೋದ್ ಮುತಾಲಿಕ್ ಹಾಗೂ ಪ್ರಣವಾನಂದ ಸ್ವಾಮೀಜಿ ಅವರಂತಹ ಹಿಂದೂಪರ ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅನೇಕರು ಕಿಸ್ ಆಫ್ ಲವ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.