ಬೆಂಗಳೂರು: ಕತ್ತು ಹಿಸುಕಿ ಒಂಟಿ ಮಹಿಳೆ ಕೊಲೆ
ಬೆಂಗಳೂರು: ನ, 28 : ವಿದ್ಯಾರಣ್ಯಪುರದ ಎಚ್ ಎಂಟಿ ಲೇಔಟ್ ಒಂದನೇ ಬ್ಲಾಕ್ ನಲ್ಲಿ ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಒಬ್ಬರ ಪತ್ನಿಯನ್ನು ಹಾಡೇ ಹಗಲೆ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ.
ಪಿಡಬ್ಲ್ಯೂಡಿ ಇಂಜಿನಿಯರ್ ನರಸಿಂಹಯ್ಯ ಅವರ ಪತ್ನಿ ವಿಜಯಲಕ್ಷ್ಮೀ (38) ಹತ್ಯೆಯಾದವರು. ಶಾಲೆಗೆ ತೆರಳಿದ್ದ ವಿಜಯಲಕ್ಷ್ಮೀ ಅವರ ಮಗ ಮಧ್ಯಾಹ್ನ ಮನೆಗೆ ಬಂದಾಗ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.[ಚಿತ್ರದುರ್ಗ : ಮಲಗಿದ್ದ ಮಕ್ಕಳನ್ನು ಕೊಂದ ದುಷ್ಕರ್ಮಿಗಳು]
ಬೆಡ್ ರೂಂ ಹಾಸಿಗೆಯ ಮೇಲೆ ತಾಯಿ ಮಲಗಿದ್ದಾಳೆ ಎಂದು ಭಾವಿಸಿದ ಪುತ್ರ ಯಶವಂತ್ ತಾಯಿಯನ್ನು ಎಬ್ಬಿಸುವ ಪ್ರಯತ್ನ ಮಾಡಿದ್ದಾನೆ. ಆಕೆ ಎಚ್ಚರಗೊಳ್ಳದಿದ್ದಾಗ ಕೂಗಿಕೊಂಡು ಪಕ್ಕದ ಮನೆಯವರನ್ನು ಕರೆದಿದ್ದಾನೆ. ಬಂದು ನೋಡಿದಾಗ ವಿಜಯಲಕ್ಷ್ಮೀ ಅರೆಪ್ರಜ್ಞಾವಸ್ಥೆಯಲ್ಲಿದ್ದದ್ದು ಗೊತ್ತಾಗಿದೆ. ತಕ್ಷಣ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಲಾಯಿತಾದರೂ ಮಾರ್ಗ ಮಧ್ಯೆ ವಿಜಯಲಕ್ಷ್ಮೀ ಮೃತಪಟ್ಟಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಬಲವಂತವಾಗಿ ಮನೆಯೊಳಗೆ ದುಷ್ಕರ್ಮಿಗಳು ಪ್ರವೇಶಿಸಿರುವ ಕುರುಹುಗಳಿಲ್ಲ. ಯಾರೋ ಪರಿಚಯಸ್ಥರೇ ಕೃತ್ಯ ಎಸಗಿದ್ದಾರೆ. ಮನೆಗೆ ಬಂದವರಿಗೆಂದು ನೀಡಲು ಕಾಯಿಸಿದ್ದ ಕಾಫಿ ಸ್ಟೌ ಮೇಲೆ ಹಾಗೆ ಇದೆ. ಮನೆಯಲ್ಲಿದ್ದ ಆಭರಣಗಳು ಕಳುವಾಗಿಲ್ಲ, ಅನುಮಾನ ಬರಬಾರದೆಂದು ವಿಜಯಲಕ್ಷ್ಮೀ ಮೈಮೇಲಿದ್ದ ಚಿನ್ನದ ಸರವೊಂದನ್ನು ಅಪಹರಿಸಲಾಗಿದೆ ಎಂದು ತಿಳಿಸಿದ್ದಾರೆ.