ಕಬ್ಬನ್ ಪಾರ್ಕಿನಲ್ಲಿ 'ಸಂಡೇ ಸಂಚಾರ' ಬಂದ್, ಸಿಹಿ ಹಂಚಿಕೆ
ಬೆಂಗಳೂರು, ಮೇ.24: ಸದಾ ವಾಹನ ಸಂಚಾರ ದಟ್ಟಣೆಯಿಂದ ಬಳಲುತ್ತಿದ್ದ ಕಬ್ಬನ್ ಪಾರ್ಕಿನಲ್ಲಿ ಭಾನುವಾರ ಅಘೋಷಿತ ಬಂದ್ ವಾತಾವರಣ ಕಂಡು ಬಂದಿದೆ. 'ಸಂಡೇ ಸಂಚಾರ' ಬಂದ್ ಗಾಗಿ ವಾಯುವಿಹಾರಿಗಳ ಸಂಘ ನೀಡಿದ ಮನವಿಗೆ ಓಗೊಟ್ಟು ತೋಟಗಾರಿಕಾ ಇಲಾಖೆ ತೆಗೆದುಕೊಂಡ ನಿರ್ಣಯಕ್ಕೆ ವ್ಯಾಪಕ ಸಂತಸ ವ್ಯಕ್ತವಾಗಿದೆ. ವಾಯುವಿಹಾರಿಗಳು ಸಿಹಿ ಹಂಚಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
ಕಳೆದ ದಶಕದಲ್ಲೇ ಇದೇ ಮೊದಲ ಬಾರಿಗೆ ಕಬ್ಬನ್ ಪಾರ್ಕಿನಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಈ ಮೂಲಕ ಪಾರ್ಕಿನಲ್ಲಿ ಸಂಚರಿಸುವ ವಾಯುವಿಹಾರಿಗಳು, ಗಿಡ ಮರಗಳು, ಪಾರಿವಾಳ ಸೇರಿದಂತೆ ಇನ್ನಿತರ ಹಕ್ಕಿಗಳಿಗೆ ಒಂದು ದಿನದ ಮಟ್ಟಿಗಾದರೂ ನೆಮ್ಮದಿಯ ಸ್ವಚ್ಛಗಾಳಿ ಲಭಿಸುವಂತಾಗಿದೆ.
ಪ್ರಾಯೋಗಿಕ ವ್ಯವಸ್ಥೆಗೆ ಮೆಚ್ಚುಗೆ: ಮೇ.24ರಿಂದ ಮೊದಲುಗೊಂಡು ಮುಂದಿನ ಮುರ್ನಾಲ್ಕು ವಾರಗಳ ಭಾನುವಾರದಂದು ಕಬ್ಬನ್ ಪಾರ್ಕಿನಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಕಬ್ಬನ್ ಪಾರ್ಕಿನ ಎಲ್ಲಾ ಏಳು ಬಾಗಿಲುಗಳ ಮೇಲೆ ಆದೇಶವಿರುವ ಫಲಕ ಹಾಕಲಾಗಿದೆ ಎಂದು ತೋಟಗಾರಿಕಾ ಇಲಾಖೆ(ಕಬ್ಬನ್ ಪಾರ್ಕ್) ಉಪ ನಿರ್ದೇಶಕ ಮಹಂತೇಶ್ ಮುರ್ಗೋಡ್ ಹೇಳಿದ್ದಾರೆ.
ಪಾರ್ಕಿಂಗ್ ಸಮಸ್ಯೆ: ವಾಹನ ಸಂಚಾರಿಗಳಿಗೆ ಮಾರ್ಗದರ್ಶನದ ಕೊರತೆ ಜೊತೆಗೆ ಕೆಲ ಕಾಲ ಪಾರ್ಕಿಂಗ್ ಸಮಸ್ಯೆ ಉಂಟಾಗಿತ್ತು. ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳನ್ನು ಕಿಂಗ್ಸ್ ರಸ್ತೆಯಲ್ಲಿ, ಬಾಲಭವನ ರಸ್ತೆ ಜಂಕ್ಷನ್ನಿಂದ ಕಿಂಗ್ ಎಡ್ವರ್ಡ್ ಪ್ರತಿಮೆವರೆಗಿನ ರಸ್ತೆಯ ಪೂರ್ವದ ಕಡೆಗೆ ನಿಲುಗಡೆ ಮಾಡಬಹುದು.
ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಬರುವ ಬಸ್ಸು, ಟೆಂಪೊ ಟ್ರಾವೆಲ್ಲರ್ಸ್, ನಾಲ್ಕು ಚಕ್ರ ಮತ್ತು ದ್ವಿಚಕ್ರ ವಾಹನಗಳನ್ನು ಕಸ್ತೂರಬಾ ರಸ್ತೆಯ ಕಡೆಯಿಂದ ಸರ್ ಎಂ. ವಿಶ್ವೇಶ್ವರಯ್ಯ ಮ್ಯೂಸಿಯಂ ಪ್ರವೇಶ ದ್ವಾರದ ಮುಖೇನ ಒಳ ಸಾಗಿ, ಮ್ಯೂಸಿಯಂನ ಹಿಂಭಾಗದ ಪ್ರವೇಶದಲ್ಲಿ ವಾಹನ ನಿಲುಗಡೆ ಪ್ರದೇಶದಲ್ಲಿ ವಾಹನಗಳನ್ನು ನಿಲ್ಲಿಸಬೇಕಾಗುತ್ತದೆ.
ವಾಯುವಿಹಾರಿಗಳ ಸಂತಸ:ಐಪಿಎಲ್ ಪಂದ್ಯವಾಳಿಗಳಿಂದ ಪಾರ್ಕಿಂಗ್ ಸಮಸ್ಯೆ ಉಲ್ಬಣವಾಗಿದೆ ಎಂದು ವಾಯುವಿಹಾರಿಗಳ ಸಂಘದ ಉಮೇಶ್ ಆರೋಪಿಸಿದ್ದಾರೆ.ಶಬ್ದ ಹಾಗೂ ವಾಯುಮಾಲಿನ್ಯ ನಿಯಂತ್ರಣಕ್ಕೆ ಈ ವ್ಯವಸ್ಥೆ ಜಾರಿಗೊಳಿಸುವುದು ಅನಿವಾರ್ಯವಾಗಿತ್ತು. ಉಳಿದಂತೆ ಕಬ್ಬನ್ ಪಾರ್ಕಿನಲ್ಲಿ ಬೆಳಗ್ಗೆ 8 ರಿಂದ ರಾತ್ರಿ 10 ಗಂಟೆ ತನಕ ಸಂಚಾರಕ್ಕೆ ಮುಕ್ತವಾಗಿರುತ್ತದೆ.
ಇಲ್ಲಿರುವ ಅಪರೂಪದ ಸಸ್ಯ ಸಂಪತ್ತು, ಪ್ರಾಣಿ ಪಕ್ಷಿಗಳ ಸಂರಕ್ಷಣೆ, ನಾಗರಿಕರ ಆರೋಗ್ಯದ ದೃಷ್ಟಿಯಿಂದ ಈ ರೀತಿ ವ್ಯವಸ್ಥೆಗಾಗಿ ಆಗ್ರಹಿಸುತ್ತಿದ್ದೆವು. ಕೊನೆಗೆ ಈ ವ್ಯವಸ್ಥೆ ಜಾರಿಗೆ ಬಂದಿದೆ. 1947ರ ನಂತರ ಇಂದು ಸ್ವಾತಂತ್ರ್ಯ ಸಿಕ್ಕಿದ್ದಂತೆ ಆಗಿದೆ ಎಂದಿದ್ದಾರೆ. (ಒನ್ ಇಂಡಿಯಾ ಸುದ್ದಿ)