ಪ್ರೇಮಿಗಳೇ ಹೆದರಬೇಡಿ, ನಿಮ್ಮ ರಕ್ಷಣೆಗೆ ಪೊಲೀಸರಿದ್ದಾರೆ
ಬೆಂಗಳೂರು, ಫೆ. 13: ಪ್ರೇಮಿಗಳೇ ಹೆದರಬೇಡಿ... ನಿಮ್ಮ ರಕ್ಷಣೆಗೆ ಪೊಲೀಸ್ ಇಲಾಖೆ ಇದೆ. ಪ್ರೇಮಿಗಳ ದಿನವನ್ನು ಫೆ. 14ರಂದು ನಿರ್ಭಯವಾಗಿ ಆಚರಿಸಿ, ಯಾರಾದರೂ ತೊಂದರೆ ಕೊಟ್ಟರೆ ನಮಗೆ ತಿಳಿಸಿ.
ಹೀಗೆಂದು ಬೆಂಗಳೂರು ಪೊಲೀಸ್ ಆಯುಕ್ತರು ಸಮಸ್ತ ಪ್ರೇಮಿಗಳಿಗೆ ಭರವಸೆ ನೀಡಿದ್ದಾರೆ. ಪ್ರೇಮಿಗಳ ಸ್ವಾತಂತ್ರ್ಯಕ್ಕೆ ಯಾರಾದರೂ ಅಡ್ಡಿಪಡಿಸಿದ್ದೇ ಆದಲ್ಲಿ ಅಥವಾ ಅವರಿಗೆ ತೊಂದರೆ ನೀಡಿದ್ದೇ ಆದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. [ಪ್ರೇಮಿಗಳಿಗೆ ಮದುವೆ ಮಾಡ್ತೇವೆ]
ಹಲವು ಸಂಘಟನೆಗಳು ಪ್ರೇಮಿಗಳ ದಿನಾಚರಣೆಗೆ ವಿರೋಧ ವ್ಯಕ್ತಪಡಿಸಿವೆ. ಆದರೆ, ಪ್ರೇಮಿಗಳ ದಿನದಂದು ಅಡ್ಡಿಪಡಿಸುವ ಹೇಳಿಕೆಯನ್ನು ನೀಡಿಲ್ಲ. ಆದರೂ, ಹಿಂದಿನ ವರ್ಷಗಳಲ್ಲಿ ನಡೆದ ಕೆಲವು ಘಟನೆಗಳು ಹಾಗೂ ವಿವಿಧ ಸಂಘಟನೆಗಳ ಹೇಳಿಕೆಗಳನ್ನು ಆಧರಿಸಿಕೊಂಡು ಪೊಲೀಸ್ ಆಯುಕ್ತರು ಮುನ್ನೆಚ್ಚರಿಕೆ ಕ್ರಮವಾಗಿ ಆದೇಶ ಹೊರಡಿಸಿದ್ದಾರೆ.
ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರು ಈಗಾಗಲೇ ಹೇಳಿಕೆ ಪ್ರೇಮಿಗಳ ದಿನಾಚರಣೆಯಂದು 'ಮಾತಾ, ಪಿತೃ ದಿನ ಆಚರಿಸಿ' ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೆ, ಫೆ. 14ರಂದು ತಮಗೆ ಪ್ರೇಮಿಗಳು ಕಂಡುಬಂದರೆ ಮದುವೆ ಮಾಡಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. [ಪ್ರೇಮಿ ಮರೆತು ತಂದೆ, ತಾಯಿ ಪೂಜಿಸಿ]
ಛತ್ತೀಸ್ಗಢ್ ಸರ್ಕಾರ ಈಗಾಗಲೇ ಫೆ. 14ನ್ನು 'ಮಾತಾಪಿತೃ ದಿನ'ವಾಗಿ ಆಚರಣೆ ಮಾಡಬೇಕೆಂದು ಆದೇಶ ಹೊರಡಿಸಿದೆ. ಎಲ್ಲ ಸರ್ಕಾರಿ ಶಾಲೆಗಳಲ್ಲಿ ಈ ದಿನವನ್ನು ಆಚರಣೆ ಮಾಡಬೇಕು. ಮಕ್ಕಳು ಪಾಲಕರಿಗೆ ಪೂಜೆ ಮಾಡಬೇಕು ಎಂದು ಸರ್ಕಾರ ಸೂಚನೆ ನೀಡಿದೆ. [ಪ್ರೇಮಿಗಳ ದಿನ ಹಿಂಗೆಲ್ಲ ಮಾಡಂಗಿಲ್ಲ]
ಮತ್ತೊಂದೆಡೆ ಹಿಂದೂ ಮಹಾಸಭಾದ ರಾಷ್ಟ್ರಾಧ್ಯಕ್ಷ ಚಂದ್ರ ಪ್ರಕಾಶ್ ಕೌಶಿಕ್ ಅವರು ಪ್ರೇಮಿಗಳ ದಿನಾಚರಣೆ ಮಾಡಿದರೆ ಮದುವೆ ಮಾಡಿಸುತ್ತೇವೆ ಎಂದು ಈಗಾಗಲೇ ಘೋಷಿಸಿದ್ದಾರೆ. ಈ ಎಲ್ಲ ಕಾರಣಗಳಿಂದ ಬೆಂಗಳೂರು ಪೊಲೀಸ್ ಆಯುಕ್ತರು ಮುನ್ನೆಚ್ಚರಿಕೆ ಕ್ರಮವಾಗಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.