ಓಲಾ ಊಬರ್ ವಿರುದ್ಧ ತಿರುಗಿಬಿದ್ದ ಖಾಸಗಿ ವಾಹನ ಚಾಲಕರು
ಬೆಂಗಳೂರು, ಮೇ 28 : ಓಲಾ ಮತ್ತು ಊಬರ್ ಚಾಲಕರನ್ನು ಬೀದಿಗೆ ಬೀಳುವಂತೆ ಮಾಡಿದ ನಿರ್ಧಾರದ ವಿರುದ್ಧ ನಗರದ ಮೌರ್ಯ ಹೋಟೆಲ್ ಮುಂದಿರುವ ಗಾಂಧಿ ಪ್ರತಿಮೆ ಬಳಿ ಖಾಸಗಿ ವಾಹನ ಚಾಲಕರು ಮತ್ತು ಮಾಲೀಕರು ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದಲ್ಲಿ 100ಕ್ಕೂ ಹೆಚ್ಚು ನಕಲಿ ಟ್ಯಾಕ್ಸಿ ಸಂಸ್ಥೆಗಳು ಹುಟ್ಟಿಕೊಂಡಿವೆ. ನಕಲಿ ಸಂಸ್ಥೆಗಳಲ್ಲಿ ಸುಮಾರು 50,000 ವಾಹನಗಳ ಮಾಲೀಕರು ನೋಂದಣಿ ಮಾಡಿಸಿಕೊಂಡಿದ್ದಾರೆ. ಓಲಾ, ಊಬರ್ ಕ್ಯಾಬ್ ಸಂಸ್ಥೆಯವರು ಸರಕಾರದ ಅನುಮತಿ ಪಡೆಯದೇ ಸಂಸ್ಥೆ ನಡೆಸುತ್ತಿದ್ದಾರೆ. ಆದರೆ, ದಂಡ ಚಾಲಕರಿಗೆ ವಿಧಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಅದರ ಪರಿಣಾಮ ವಾಹನ ಚಾಲಕರಿಗೆ ದುಬಾರಿ ದಂಡ ವಿಧಿಸುವುದು, ವಾಹನಗಳನ್ನು ನಡುರಸ್ತೆಯಲ್ಲೇ ಜಪ್ತಿ ಮಾಡುತ್ತಿರುವುದು ನಡೆಯುತ್ತಿದೆ. ಈಗಾಗಲೇ ಸರಕಾರ ನೊಟೀಸ್ ಜಾರಿ ಮಾಡಿದ್ದರೂ ಬೇಜವಾಬ್ದಾರಿತನದಿಂದ ಸಂಸ್ಥೆ ನಡೆಸುತ್ತಿವೆ ಎಂದು ಅವರು ಆರ್ಟಿಓ ಅಧಿಕಾರಿಗಳ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು. [ಬೆಂಗಳೂರಲ್ಲಿ ಮೊಟ್ಟ ಮೊದಲ ಬಾರಿಗೆ ಓಲಾ ಜೋನ್]
ಸಾಮಾಜಿಕ ಜಾಲತಾಣಗಳು ಮತ್ತು ಜಾಹೀರಾತುಗಳ ಮುಖಾಂತರ ಲಕ್ಷ ಲಕ್ಷ ಹಣ ದುಡಿಯಬಹುದು ಎಂಬ ಆಮಿಷವನ್ನೊಡ್ಡಿ ವಾಹನಗಳನ್ನು ನೋಂದಾಯಿಸಿಕೊಂಡು ಚಾಲಕರಿಗೆ ಮತ್ತು ಮಾಲೀಕರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಓಲಾ ಮತ್ತು ಊಬರ್ ಸಂಸ್ಥೆಗಳ ಮೇಲೆ ಕೆಂಡ ಕಾರಿದರು.
ಖಾಸಗಿ ವಾಹನ ಚಾಲಕರ ಮತ್ತು ಮಾಲೀಕರ ಹೊಟ್ಟೆ ಮೇಲೆ ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯ ವಾಹನ ಚಾಲಕರ ಸಂಘಕ್ಕೆ ಈಗಾಗಲೆ ಸಾವಿರಾರು ದೂರುಗಳು ಬಂದಿದ್ದು, ನಾವು ಒಲಾ ಮತ್ತು ಊಬರ್ ನಂತಹ ಸಂಸ್ಥೆಗಳಿಗೆ ಹೋಗಿ ವಿಚಾರಣೆ ಮಾಡಿದಾಗ ಸರಕಾರದ ಅಧಿಕಾರಿಗಳೇ ನಮ್ಮಿಂದ ಪುಕ್ಕಟೆ ವಾಹನ ಪಡೆಯುತ್ತಿದ್ದಾರೆ ಎಂದು ಹೇಳುತ್ತಾರೆ ಎಂದು ದೂರಿದರು.
ಜೊತೆಗೆ ಅಧಿಕಾರಿಗಳು ಹಾಗೂ ಸರಕಾರ ನಮ್ಮ ಕೈಯಲ್ಲಿದೆ ಎಂಬ ಉಡಾಫೆ ಉತ್ತರ ನೀಡುತ್ತಾರೆ. ಸರಕಾರ ನಮಗೆ ದಂಡ ವಿಧಿಸಲಿ, ನಾವು ಎಷ್ಟು ದಂಡ ಬೇಕಾದರೂ ಕಟ್ಟಲು ಸಿದ್ಧ. ಆದರೆ, ಓಲಾ ಮತ್ತು ಊಬರ್ ನಂತಹ ಸಂಸ್ಥೆಯಲ್ಲಿ ಸುಮಾರು 40 ಸಾವಿರಕ್ಕಿಂತ ಹೆಚ್ಚು ಚಾಲಕರು ಕಾರ್ಯ ನಿರ್ವಹಿಸುತಿದ್ದು ಚಾಲಕರಿಗೆ ಅನ್ಯಾಯವಾಗದಂತೆ ಸರಕಾರ ಮದ್ಯ ಪ್ರವೇಶಿಸಬೇಕು ಎಂದು ಕೋರಿದರು. [ಹುಬ್ಬಳ್ಳಿ: ಓಲಾ, ಊಬರ್ ವಿರುದ್ಧ ಬೀದಿಗಿಳಿದ ಟ್ಯಾಕ್ಸಿ ಚಾಲಕರು]
ಸರಕಾರ ಈ ಬಗ್ಗೆ ಇದುವರೆಗೂ ಯಾವುದೇ ಕಠಿಣ ಕ್ರಮವನ್ನು ಕೈಗೊಳ್ಳದೇ ಇರುವುದು ಅಧಿಕಾರಿಗಳ ಕೈವಾಡವಿದೆ ಎಂಬುದಕ್ಕೆ ಸಾಕ್ಷಿಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸದ ಅವರು, ಚಾಲಕರಿಂದ ಅಧಿಕ ದಂಡ ವಸೂಲಿ ಮಾಡುವುದರ ಜೊತೆಗೆ, ವಾಹನ ಜಪ್ತಿ ಮಾಡಿ 6 ತಿಂಗಳ ಜೈಲು ಶಿಕ್ಷೆಗೆ ಗುರಿಪಡಿಸುತ್ತಿರುವುದನ್ನು ಖಂಡಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಕೂಡಲೇ ಸಾರಿಗೆ ಸಚಿವರು ನಮ್ಮ ಈ ಸಂಕಷ್ಟಕ್ಕೆ ಶೀಘ್ರವಾಗಿ ಪರಿಹಾರ ಒದಗಿಸುವುದರ ಜೊತೆಗೆ, ಪರವಾನಿಗೆ ಪಡೆಯದೇ ನಡೆಸುತ್ತಿರುವ ಓಲಾ ಮತ್ತು ಊಬರ್ ಸಂಸ್ಥೆಯಂತಹ ನಕಲಿ ಸಂಸ್ಥೆಗೆ ರಾಜ್ಯದಿಂದ ಕೂಡಲೇ ತೊಲಗಿಸಬೇಕೆಂದು ಜಿ.ನಾರಾಯಣಸ್ವಾಮಿ, ಗುರುಮೂರ್ತಿ, ಶಿವಕುಮಾರ್.ಎಸ್, ಶಿವಕುಮಾರ್, ಭೋಜರಾಜ್ ಒತ್ತಾಯಿಸಿದರು. [ಮಹಿಳೆಯರಿಂದ ಮಹಿಳೆಯರಿಗಾಗಿ 'ಓಲಾ'ಲಾ 'ಓಲಾ'ಲಾ!]