ಮಹದಾಯಿಗಾಗಿ ಟೌನ್ಹಾಲ್ ಮುಂದೆ ಭಾನುವಾರ ಹೋರಾಟ
ಬೆಂಗಳೂರು, ಆಗಸ್ಟ್ 06 : ಎಷ್ಟೇ ವಿದ್ಯಾವಂತರಾದರೂ, ಯಾವ ಐಟಿ-ಬಿಟಿ ಕಂಪನಿಗಳಲ್ಲಿ ದುಡಿದರೂ, ಕುಡಿಯಲು ನೀರು ಸಿಗದಿದ್ದರೆ, ತಿನ್ನಲು ಅನ್ನ ಸಿಗದಿದ್ದರೆ ಮನುಷ್ಯ ಬದುಕುವುದಾದರೂ ಹೇಗೆ?
ಇದನ್ನು ಗಮನದಲ್ಲಿಟ್ಟುಕೊಂಡು ನಮ್ಮ ರೈತರ ಕಷ್ಟದಲ್ಲಿ ನಾವೂ ಭಾಗಿಯಾಗುವುದರ ಮೂಲಕ, ಅವರಿಗೆ ಬೆಂಬಲ ನೀಡುವ ಸೂಚಕವಾಗಿ ಕಳಸಾ ಬಂಡೂರಿ ಯೋಜನೆ ಜಾರಿಗೆ ತರಲು ಮತ್ತು ಬಂಧಿತರಾಗಿರುವ ರೈತರನ್ನು ಬಿಡುಗಡೆ ಮಾಡಲು ಒತ್ತಾಯಿಸಿ ಸಾಮಾಜಿಕ ಜಾಲತಾಣದ ಕನ್ನಡಿಗರೆಲ್ಲ ಸೇರಿಕೊಂಡು ಇದೇ ಭಾನುವಾರ, ಆಗಸ್ಟ್ 7ರಂದು ಮಧ್ಯಾನ್ಹ ಟೌನ್ ಹಾಲ್ ಮುಂದೆ ಪ್ರತಿಭಟನೆ ಮಾಡಲಿದ್ದಾರೆ.
ಈ ಯೋಜನೆಗಾಗಿ ಹಲವಾರು ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ ಕೇಂದ್ರ-ರಾಜ್ಯ ಸರ್ಕಾರಗಳು ಈ ಸಮಸ್ಯೆ ಬಗೆಹರಿಸಲು ಹಾಕಿರುವ ಶ್ರಮವಂತೂ ಅಷ್ಟಕ್ಕಷ್ಟೆ. ರೈತರ ಕೂಗು, ಆರ್ತನಾದ ಯಾವ ರಾಜಕಾರಣಿಯ ಕಿವಿಗೆ ಬಿದ್ದಿಲ್ಲ, ಹೃದಯಕ್ಕೆ ತಟ್ಟಿಲ್ಲ ಅನ್ನುವುದು ನಿಜಕ್ಕೂ ವಿಷಾದನೀಯ ಸಂಗತಿ. [ಯಮನೂರು ಲಾಠಿ ಚಾರ್ಜ್, ಸಿದ್ದರಾಮಯ್ಯ ವಿಷಾದ]
ನಿರಂತರ ಒಂದು ವರ್ಷ ತುಂಬಿದ ಹೋರಾಟದಲ್ಲಿ ಭಾಗಿಯಾಗಿದ್ದ ರೈತರ ಮೇಲೆ ಅನವಶ್ಯಕವಾಗಿ ಪೋಲೀಸ್, ಅರೆ ಸೇನಾ ಪಡೆ, ಬಿಎಸ್ಎಫ್ ಪಡೆಗಳು ಲಾಠಿ ಚಾರ್ಜ್ ಮಾಡಿರುವುದಂತೂ ಕರ್ನಾಟಕಕ್ಕೆ ಸ್ವಾತಂತ್ರ್ಯ ಬಂದಿದೆಯಾ? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಇಂತಹ ಹೇಯ ಕೃತ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಲವಾಗಿ ವಿರೋಧಿಸುತ್ತಿವೆ.
ಇದಕ್ಕೂ ಮುಂಚೆ ಜುಲೈ 13ರಂದು ಸಾಮಾಜಿಕ ಜಾಲತಾಣ ಕನ್ನಡಿಗರೆಲ್ಲ ಸೇರಿಕೊಂಡು #implementkalasabanduri ಎಂದು ರಾಷ್ಟ್ರಮಟ್ಟದಲ್ಲಿ ಟ್ವಿಟ್ಟರ್ ಟ್ರೆಂಡ್ ಕೂಡ ಮಾಡಲಾಗಿದೆ. ಈಗ ಮತ್ತೊಂದು ಹೋರಾಟಕ್ಕೆ ಇಳಿದಿದ್ದೇವೆ ಎಂದು ಐಟಿ ಕನ್ನಡಿಗರು ಹೇಳಿದ್ದಾರೆ. [#ImplementKalasaBanduri ಟ್ರೆಂಡಿಂಗ್]
ಈ ಹೋರಾಟಕ್ಕೆ ನೀವೆಲ್ಲರೂ ಕೈ ಜೋಡಿಸಿ. ಭಾನುವಾರ ಮಧ್ಯಾನ್ಹ 3:30ಕ್ಕೆ ಎಲ್ಲರೂ ಟೌನ್ ಹಾಲ್ ಬಳಿ ಬಂದು ಈ ಹೋರಾಟಕ್ಕೆ ಬೆಂಬಲ ಸೂಚಿಸಿ. ಉತ್ತರ ಕರ್ನಾಟಕದ ರೈತರು ಮಾತ್ರವಲ್ಲ, ಪ್ರತಿಯೊಬ್ಬ ಕನ್ನಡಿಗನೂ ಕಳಸಾ ಬಂಡೂರಿಗಾಗಿ ಬೀದಿಗಿಳಿಯಬೇಕಾದ ಪರಿಸ್ಥಿತಿ ಬಂದಿದೆ. [ಯಮನೂರಿಗೆ ಬರುವ ರಾಜಕಾರಣಿಗೆ ಸೆಗಣಿ ಎರಚುವ ಚಳವಳಿ]