ಲೋಕಾಯುಕ್ತರಾಗಿ ಶೆಟ್ಟಿ ನೇಮಕ ವಿರೋಧಿಸಿ ಜ.27ಕ್ಕೆ ಪ್ರತಿಭಟನೆ
ಬೆಂಗಳೂರು, ಜನವರಿ 27: ಲೋಕಾಯುಕ್ತ ನೇಮಕಾತಿ ವಿಚಾರ ರಾಜ್ಯ ಸರಕಾರಕ್ಕೆ ಸವಾಲಿನದಾಗಿದೆ. ಈ ಸಂಬಂಧ ರಾಜ್ಯಪಾಲರಿಗೆ ಕಳುಹಿಸಿದ್ದ ಕಡತ ಸಹ ಒಮ್ಮೆ ಅವರು ಹಿಂತಿರುಗಿಸಿದ್ದರು. ಇದೀಗ ಲೋಕಾಯುಕ್ತರಾಗಿ ನ್ಯಾ.ವಿಶ್ವನಾಥ ಶೆಟ್ಟಿ ಅವರ ನೇಮಕ ವಿರೋಧಿಸಿ ಜನವರಿ 27ರಂದು ಸಂಜೆ 4ಕ್ಕೆ ಬೆಂಗಳೂರಿನ ಮೌರ್ಯ ವೃತ್ತದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಹೈಕೋರ್ಟಿನ ನ್ಯಾಯಮೂರ್ತಿಯಾಗಿ ನಿವೃತ್ತರಾದ ನಂತರ ರಾಜ್ಯದ ಹಲವು ಭ್ರಷ್ಟ ಮತ್ತು ಕಳಂಕಿತ ರಾಜಕಾರಣಿಗಳ ವಕೀಲರಾಗಿದ್ದ, ನ್ಯಾಯಾಂಗ ನೌಕರರ ಬಡಾವಣೆಯ ಸೈಟಿನ ವಿಚಾರದಲ್ಲಿ ಅಕ್ರಮ ಫಲಾನುಭವಿ ಎಂಬ ಆರೋಪಕ್ಕೆ ಗುರಿಯಾಗಿರುವ ಜಸ್ಟಿಸ್ ಪಿ. ವಿಶ್ವನಾಥ್ ಶೆಟ್ಟರನ್ನು ಲೋಕಾಯುಕ್ತರನ್ನಾಗಿ ನೇಮಿಸಿರುವುದರ ಔಚಿತ್ಯ ಮತ್ತು ಅನೈತಿಕತೆಯನ್ನು ವಿರೋಧಿಸಿ 'ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ' ಪ್ರತಿಭಟನೆ ನಡೆಸಲಿದೆ.[ವಿಶ್ವನಾಥ್ ಶೆಟ್ಟಿ ನೇಮಕದ ವಿರುದ್ಧ ಸುಪ್ರಿಂಗೆ ಹೋಗಲೂ ಸಿದ್ದ-ಹಿರೇಮಠ್]
ವಿಶ್ವನಾಥ ಶೆಟ್ಟಿ ಅವರ ನೇಮಕಾತಿಯಿಂದ ಲೋಕಾಯುಕ್ತದ ಘನತೆ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆಯೇ ಹೊರತು ಬೇರೇನಿಲ್ಲ. ಈ ಹಿನ್ನೆಲೆಯಲ್ಲಿ ನೇಮಕಾತಿ ಸರಿಯಲ್ಲ ಎನ್ನುವ ಅಭಿಪ್ರಾಯ ಇರುವ ಎಲ್ಲ ಪ್ರಜ್ಞಾವಂತ ಜನತೆ ಇಂದಿನ ಪ್ರತಿಭಟನೆಯಲ್ಲಿ ಭಾಗವಹಿಸಲು ಮನವಿ ಮಾಡುತ್ತೇವೆ ಎಂದು ಸಂಘಟನೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.