ಜೂ.16 ರಂದು ಅರ್ಧ ದಿನ ಖಾಸಗಿ ಆಸ್ಪತ್ರೆ ಬಂದ್
ಬೆಂಗಳೂರು, ಜೂನ್ 16: ಇಂದು(ಜೂನ್ 16) ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಅಂದ್ರೆ ಅರ್ಧ ದಿನ ರಾಜ್ಯದ ಎಲ್ಲಾ ಖಾಸಗಿ ಆಸ್ಪತ್ರೆಗಳೂ ಬಂದ್ ಆಗಲಿವೆ. ರಾಜ್ಯ ಸರ್ಕಾರ ಮಂಡಿಸಿರುವ ಕರ್ನಾಟಕ ಖಾಸಗಿ ಆಸ್ಪತ್ರೆಗಳ ವಿಧೇಯಕ 2017 ಅನ್ನು ವಿರೋಧಿಸಿ ಖಾಸಗಿ ಆಸ್ಪತ್ರೆ ಸಂಘಟನೆಗಳ ಒಕ್ಕೂಟ ಈ ನಿರ್ಧಾರ ಕೈಗೊಂಡಿದೆ.
ರಾಜ್ಯದಲ್ಲಿ ಜೂ.16 ರಂದು ಪೆಟ್ರೋಲ್ ಬಂಕ್ ಬಂದ್?
ರೋಗಿಗಳಿಗೆ ಸಮಸ್ಯೆಯಾಗಬಾರದೆಂದು ತುರ್ತುಚಿಕಿತ್ಸೆಗೆ ವಿನಾಯಿತಿ ಇದೆ. ಈ ಬಂದ್ ಗೆ ರಾಜ್ಯದಾದ್ಯಂತ 2,000 ಕ್ಕೂ ಹೆಚ್ಚು ಆಸ್ಪತ್ರೆಗಳು, ಖಾಸಗಿ ಕ್ಲಿನಿಕ್ ಗಳು ಬೆಂಬಲ ಸೂಚಿಸಿವೆ.
ತನ್ನಿಮಿತ್ತ ಇಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೆಳಗ್ಗೆ 9 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಖಾಸಗಿ ಆಸ್ಪತ್ರೆಗಳ ಸುಮಾರು 15,000ಕ್ಕೂ ಹೆಚ್ಚು ವೈದ್ಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಕರ್ನಾಟಕ ಬಂದ್: ವಾಟಾಳ್ ಮತ್ತು ತಂಡ ಪೊಲೀಸ್ ವಶಕ್ಕೆ
ಇತ್ತೀಚೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಪದೇ ಪದೇ ಸಂಭವಿಸುತ್ತಿರುವ ಅಹಿತಕರ ಘಟನೆಗಳನ್ನು ಮನಗಂಡು ಸರ್ಕಾರ ಈ ವಿಧೇಯಕ ಮಂಡಿಸಿದೆ. ವೈದ್ಯರ ನಿರ್ಲಕ್ಷ್ಯದಿಂದ ರೋಗಿಗಳು ಸಾಯುತ್ತಿರುವುದು, ಖಾಸಗಿ ಆಸ್ಪತ್ರೆಗಳ ಅತಿಯಾದ ಶುಲ್ಕ, ಸೌಲಭ್ಯ ಒದಗಿಸದಿರುವುದು... ಇಂಥ ಹಲವು ಸಮಸ್ಯೆಗಳ ನಿವಾರಣೆಯಲ್ಲಿ ಈ ವಿಧೇಯಕ ಮಹತ್ವದ ಪಾತ್ರ ವಹಿಸಲಿದೆ. ಜನಸಾಮಾನ್ಯರ ಕೈಗೆಟುಕದಂತಿದ್ದ ವೈದ್ಯಕೀಯ ಸೇವೆಯನ್ನು ಸ್ವಲ್ಪವಾದರೂ ಅಗ್ಗಗೊಳಿಸುವ ಉದ್ದೇಶವನ್ನು ಇದು ಹೊಂದಿದೆ.
ತುರ್ತು ಸೇವೆ ಅಬಾಧಿತ
ತೀರಾ ಅನಾರೋಗ್ಯವಾದರೆ, ತುರ್ತು ಸೇವೆಯ ಅಗತ್ಯವಿದ್ದರೆ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ವೈದ್ಯಕೀಯ ಸೇವೆ ನೀಡಲಾಗುವುದು ಎಂದೂ ಒಕ್ಕೂಟದ ಸದಸ್ಯರು ತಿಳಿಸಿದ್ದಾರೆ. ಹೆರಿಗೆ ವಿಬಾಗ, ಅಪಘಾತ ಚಿಕಿತ್ಸಾ ವಿಭಾಗ ಸೇರಿದಂತೆ ತುರ್ತು ಸೇವೆ ಲಭ್ಯವಿರುತ್ತದೆ. ಆದ್ದರಿಂದ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ.
ಯಾವುದಕ್ಕೆ ಬಂದ್ ಬಿಸಿ?
ಖಾಸಗಿ ಆಸ್ಪತ್ರೆಗಳ ಹೊರರೋಗಿಗಳ ವಿಭಾಗ, ಸ್ಕ್ಯಾನಿಂಗ್ ಎಕ್ಸ್ ರೇ, ಬ್ಲಡ್ ಟೆಸ್ಟ್ ಯುನಿಟ್, ತುರ್ತು ಅಗತ್ಯವಿಲ್ಲದ ಆಪರೇಶನ್ ಗಳು ಇವೆಲ್ಲಕ್ಕೂ ಇಂದು ಬಂದ್ ಬಿಸಿ ತಟ್ಟಲಿವೆ.
ಏನಿದೆ ವಿಧೇಯಕದಲ್ಲಿ
ಈ ವಿಧೇಯಕ ಖಾಸಗಿ ಆಸ್ಪತ್ರೆಗಳಲ್ಲಿನ ಚಿಕಿತ್ಸೆಗೆ ಸರ್ಕಾರ ದರ ನಿಗದಿಪಡಿಸುವ ಮತ್ತು ನಿರ್ಲಕ್ಷ್ಯ ತೋರುವ ವೈದ್ಯರನ್ನು ಜೈಲಿಗಟ್ಟುವ ಉದ್ದೇಶ ಹೊಂದಿದೆ. ಇದು ಖಾಸಗೀ ಆಸ್ಪತ್ರೆಗಳ ನಿರಂಕುಶ ಪ್ರವೃತ್ತಿಯ ಮೇಲೆ ಬರೆ ಎಳೆಯಲಿದೆ. ಮಾತ್ರವಲ್ಲ, ಸರ್ಕಾರವೇ ದರವನ್ನು ನಿಗದಿಪಡಸುವುದರಿಂದ ರೋಗಿಗಳನ್ನು ಹೈರಾಣಾಗಿಸುವಂಥ ಶುಲ್ಕವೂ ಇರುವುದಿಲ್ಲ. ಇದರಿಂದ ಖಾಸಗಿ ಆಸ್ಪತ್ರೆಗಳು ಲಾಭ ಪಡೆಯುವುದು ಕಷ್ಟವಾಗುತ್ತದೆ. ಈ ಕಾರಣದಿಂದ ಖಾಸಗಿ ಆಸ್ಪತ್ರೆಗಳು ಅರ್ಧ ದಿನ ಬಂದ್ ಆಗಿ ತಮ್ಮ ವಿರೋಧವನ್ನು ವ್ಯಕ್ತಪಡಿಸಲಿವೆ.
ಒಕ್ಕೂಟದ ಮುಖ್ಯಸ್ಥರಿಂದ ಮುಖ್ಯಮಂತ್ರಿ ಭೇಟಿ
ಜೂನ್ 15 ರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಖಾಸಗಿ ಆಸ್ಪತ್ರೆ ಸಂಘಟನೆಗಳ ಮುಖ್ಯಸ್ಥರು, ವಿಧೇಯಕದ ಸಾಧಕ-ಬಾಧಕಗಳನ್ನು ಚರ್ಚಿಸಿದ್ದಾರೆ. ಆರೋಗ್ಯ ಸಚಿವ ರಮೇಶ್ ಕುಮಾರ್ ಅವರೊಂದಿಗೆ ಮಾತನಾಡಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.