ರಾಷ್ಟ್ರಪತಿ ಚುನಾವಣೆ: ಯಡಿಯೂರಪ್ಪಗೆ ಮಹತ್ವದ ಜವಾಬ್ದಾರಿ
ಬೆಂಗಳೂರು, ಜೂನ್ 20: ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರನ್ನು ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಅವರಿಗೆ ಸೂಚಕರನ್ನಾಗಿ ನೇಮಿಸುವ ಮೂಲಕ ಬಿಜೆಪಿ ನಾಯಕರು ಬಿಎಸ್ ವೈ ಅವರಿಗೆ ಮಹತ್ವದ ಜವಾಬ್ದಾರಿ ನೀಡಿದ್ದಾರೆ.
ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಬಿ.ಆರ್.ಅಂಬೇಡ್ಕರ್ ಮೊಮ್ಮಗ?
ದಲಿತ ಮುಖಂಡ, ಸದ್ಯ ಬಿಹಾರದ ರಾಜ್ಯಪಾಲರಾಗಿರುವ ರಾಮ್ ನಾಥ್ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆರಿಸಿದ ಎನ್ ಡಿಎ ಕ್ರಮವನ್ನು ಸ್ವಾಗತಿಸಿರುವ ಬಿ.ಎಸ್.ಯಡಿಯೂರಪ್ಪ, ಈ ಹುದ್ದೆಗೆ ಕೋವಿಂದ್ ಸೂಕ್ತ ಅಭ್ಯರ್ಥಿ ಎಂದಿದ್ದಾರೆ.
ಒಬ್ಬ ಬಡ ರೈತರ ಮಗನಾಗಿರುವ ರಾಮನಾಥ್ ಕೋವಿಂದ್ ಅವರು ಸಾರ್ವಜನಿಕ ಸೇವೆಯಲ್ಲಿ, ದೀನ-ದಲಿತ, ಹಿಂದುಳಿದವರ ಏಳ್ಗೆಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ್ದು, ನಿರ್ಲಕ್ಷ್ಯಿತ ವರ್ಗದ ಧ್ವನಿಯಾಗಿ ಗುರುತಿಸಲ್ಪಟ್ಟವರು ಎಂದು ಯಡಿಯೂರಪ್ಪ, ಕೋವಿಂದ್ ಅವರ ಕುರಿತು ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ.
ತಮ್ಮ ಸುದೀರ್ಘ ರಾಜಕೀಯ ಅನುಭವ ಮತ್ತು ನ್ಯಾಯಾಂಗದ ಪರಿಣಿತಿಗಳಿಂದ ಕೋವಿಂದ್ ಅವರು ಭಾರತದ ರಾಷ್ಟ್ರಪತಿ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂದಿರುವ ಯಡಿಯೂರಪ್ಪ, ಕೋವಿಂದ್ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.