ಪ್ರವಾಸಿ ಭಾರತೀಯ ದಿವಸ್: ಬೆಂಗಳೂರಿಗೆ ರಾತ್ರಿ ಮೋದಿ ಆಗಮನ
ಬೆಂಗಳೂರು, ಜನವರಿ 7: ನಗರದಲ್ಲಿ ಪ್ರಾರಂಭವಾಗಿರುವ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಪ್ರಸ್ತುತ ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿರುವ ಅವರು ಸಭೆ ಮುಗಿದ ಬಳಿಕ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ರಾತ್ರಿ 11.ಗಂಟೆಗೆ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲ ವಜುಬಾಯಿವಾಲ ಸೇರಿದಂತೆ ಪ್ರಮುಖರು ಅವರನ್ನು ಬರಮಾಡಿಕೊಳ್ಳಲಿದ್ದಾರೆ.[ಅನಿವಾಸಿ ಕನ್ನಡಿಗರಿಗಾಗಿ ಕರ್ನಾಟಕದ ಎನ್ಆರ್ ಐ ನೀತಿ]
ಮಿತ್ರರಾದ ರಾಜ್ಯಪಾಲರ ರಾಜಭವನದಲ್ಲಿ ಮೋದಿ ವಾಸ್ತವ್ಯ ಹೂಡಲಿದ್ದು, ಭಾನುವಾರ ಬೆಳಗ್ಗೆ ಪ್ರಧಾನಿಯವರು ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನದಲ್ಲಿ ನಡೆಯುತ್ತಿರುವ ಪ್ರವಾಸಿ ಭಾರತೀಯ ದಿವಸ್ ಉದ್ಘಾಟಿಸಲಿದ್ದಾರೆ. ನಂತರ ಅನಿವಾಸಿ ಭಾರತೀಯರು ಸೇರಿದಂತೆ ದೇಶ-ವಿದೇಶದಿಂದ ಆಗಮಿಸಿರುವ ಗಣ್ಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಭಾನುವಾರದ ಕಾರ್ಯಕ್ರಮದಲ್ಲಿ ಪೋರ್ಚುಗಲ್ ಪ್ರಧಾನಿ ಆಗಮಿಸಲಿದ್ದು ರಾಜಾಸ್ತಾನ, ಆಂಧ್ರ, ತೆಲಂಗಾಣ, ಮಧ್ಯಪ್ರದೇಶ, ಸೇರಿದಂತೆ ಅನೇಕ ಮುಖ್ಯಮಂತ್ರಿಗಳು , ಕೈಗಾರಿಕೋದ್ಯಮಿಗಳು, ಗಣ್ಯರು ಭಾಗವಹಿಸಲಿದ್ದಾರೆ.
ಪ್ರಧಾನಿ ಸಮ್ಮುಖದಲ್ಲಿ ಅನೇಕ ಉದ್ಯಮಿಗಳು ಬಂಡವಾಳ ಹೂಡುವ ಸಾಧ್ಯತೆಯಿದೆ. ಅಲ್ಲದೆ ಪ್ರಧಾನಿ ನಗರಕ್ಕೆ ಬರುವ ಹಿನ್ನೆಲೆ ಎಚ್.ಎ.ಎಲ್ ವಿಮಾನನಿಲ್ದಾಣ ದಿಂದ ತುಮಕೂರು ರಸ್ತೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕಾರ್ಯಕ್ರಮದ ಉಸ್ತುವಾರಿಯನ್ನು ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ವಹಿಸಿಕೊಂಡಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಿ ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸುವ ಸಾಧ್ಯತೆಯಿದೆ.