ಮುನ್ನೋಟದಲ್ಲಿ ಈ ಭಾನುವಾರ ವಿಜ್ಞಾನದ ಮಾತುಕತೆ
"ಅರಿಮೆ@ಮುನ್ನೋಟ" ಹೆಸರಿನ ಈ ಸರಣಿಯ ಮೊದಲ ಕಾರ್ಯಕ್ರಮ ಬೆಳಕಿನ ಕುರಿತಾಗಿದ್ದು, ಬೆಳಕೆಂದರೇನು? ಅದರ ಶಕ್ತಿಯೇನು? ಅದರ ಹಿಂದಿರುವ ಗುಟ್ಟೇನು? ಅದರ ವ್ಯಾಪ್ತಿಯೇನು? ವಿಜ್ಞಾನದ ಕಣ್ಣಿನಿಂದ ಅದರಲ್ಲಿ ತಿಳಿಯುವಂತದ್ದೇನು?
ಮುಂದುವರೆದ ನಾಡುಗಳು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ತಮ್ಮ ನುಡಿಯಲ್ಲಿ ತಂದಿದ್ದು, ಅವುಗಳು ಏಳಿಗೆ ಹೊಂದಲು ಮುಖ್ಯ ಕಾರಣವಾಗಿರುವುದನ್ನು ಕಾಣಬಹುದು. ಫಿನ್ಲ್ಯಾಂಡ್, ಜಪಾನ್, ಕೊರಿಯಾ, ಜರ್ಮನಿ ಮುಂತಾದ ನಾಡುಗಳು ಇದಕ್ಕೆ ಕೆಲವು ಉದಾಹರಣೆಗಳು.
ಕನ್ನಡ ನಾಡು ಕೂಡ ನಿಜ ಅರ್ಥದಲ್ಲಿ ಮುಂದುವರೆಯುವಂತಾಗಲು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಕನ್ನಡದಲ್ಲಿ ಕಟ್ಟಿಕೊಳ್ಳುವುದು ತುಂಬಾ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕೆಲಸಗಳು ಅಲ್ಲಲ್ಲಿ ನಡೆದುಕೊಂಡು ಬಂದಿದ್ದು, ಇನ್ನೂ ವೇಗವಾಗಿ, ಅಚ್ಚುಕಟ್ಟಾಗಿ ನಡೆಯುವ ಅಗತ್ಯವಿದೆ.
ಅರಿಮೆ (arime.org) ಪೋರ್ಟಲ್ ಈ ನಿಟ್ಟಿನಲ್ಲಿ ಪುಟ್ಟ ಹೆಜ್ಜೆಯಾಗಿದ್ದು, ಕಳೆದ ಸುಮಾರು ಒಂದು ವರುಷದಿಂದ ವಿಜ್ಞಾನದ ಬರಹಗಳು, ಟೆಕ್ನಿಕಲ್ ಪದಗಳಿಗೆ ತಿಳಿಗನ್ನಡದಲ್ಲಿ ಪದಗಳನ್ನು ಕಟ್ಟುವುದು, ವಿಜ್ಞಾನ ಪಠ್ಯಪುಸ್ತಕಗಳ ಅಧ್ಯಯನದಂತಹ ಕೆಲಸಗಳನ್ನು ಮಾಡುತ್ತಾ ಬಂದಿದೆ.
ಅರಿಮೆ ಪೋರ್ಟಲ್ ತನ್ನ ಕೆಲಸವನ್ನು ಮುಂದುವರೆಸುತ್ತಾ, ವಿಜ್ಞಾನದ ವಿಷಯಗಳ ಕುರಿತು ಸರಣಿ ಮಾತುಕತೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮ ಪ್ರತಿ ತಿಂಗಳೂ ನಡೆಯಲ್ಲಿದ್ದು, ಶಾಲಾ ಮಕ್ಕಳು, ಪೋಷಕರು, ಶಿಕ್ಷಕರು ಮತ್ತು ವಿಜ್ಞಾನದಲ್ಲಿ ಆಸಕ್ತಿ ಹೊಂದಿರುವವರನ್ನು ಗಮನದಲ್ಲಿಟ್ಟುಕೊಂಡು ಅಣಿಗೊಳಿಸಲಾಗಿದೆ.
ಇದರಲ್ಲಿ ಮುಖ್ಯವಾಗಿ ವಿಜ್ಞಾನದ ಪಠ್ಯಪುಸ್ತಕಗಳಿಗೆ ಪೂರಕವಾಗುವಂತಹ ವಿಷಯಗಳನ್ನು ಆದಷ್ಟೂ ತಿಳಿಗನ್ನಡದಲ್ಲಿ ಚರ್ಚಿಸುವ ಪ್ರಯತ್ನ ಮಾಡಲಾಗುತ್ತದೆ. ಪಠ್ಯಪುಸ್ತಕಗಳ ಜತೆಗೆ ವಿಜ್ಞಾನದ ಆಗುಹೋಗುಗಳ ಬಗ್ಗೆಯೂ ಮಾತುಕತೆಯನ್ನು ಹಮ್ಮಿಕೊಳ್ಳಲಾಗುವುದು.
ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳ ತಿಳಿವಳಿಕೆಯನ್ನು ಹಂಚಿಕೊಳ್ಳಲು ಈ ಕಾರ್ಯಕ್ರಮ ಒಂದು ವೇದಿಕೆಯಾಗಲಿದ್ದು, ವಿಜ್ಞಾನದ ವಿಷಯವೊಂದರಲ್ಲಿ ನುರಿತವರು, ಆಸಕ್ತರು ತಮ್ಮ ಅರಿವನ್ನು ಜನಸಾಮಾನ್ಯರೊಡನೆ ಹಂಚಿಕೊಳ್ಳಬಹುದು.
ಈ ಸರಣಿಯ ಮೊದಲ ಹೆಜ್ಜೆಯಾಗಿ ಬರುವ ಭಾನುವಾರ, 26.03.2017ರಂದು ಬೆಳಿಗ್ಗೆ 11.30ಕ್ಕೆ ಬಸವನಗುಡಿಯಲ್ಲಿರುವ, ಕನ್ನಡ-ಕನ್ನಡಿಗ-ಕರ್ನಾಟಕವನ್ನು ಕೇಂದ್ರವಾಗಿಟ್ಟುಕೊಂಡು ನಡೆಸಲಾಗುತ್ತಿರುವ ಮುನ್ನೋಟ ಪುಸ್ತಕ ಮಳಿಗೆಯಲ್ಲಿ ನಡೆಯಲಿದೆ.
ಈ ಸಲದ ಕಾರ್ಯಕ್ರಮ 'ಬೆಳಕು' ಎಂಬ ವಿಷಯದ ಕುರಿತಾಗಿದ್ದು, ಅರಿಮೆ ಮಿಂದಾಣದ ಸಂಪಾದಕರಾದ ಪ್ರಶಾಂತ ಸೊರಟೂರ ಅವರು ನಡೆಸಿಕೊಡಲಿದ್ದಾರೆ. ಈ ಬಾರಿಯ ಕಾರ್ಯಕ್ರಮ ಪಠ್ಯಪುಸ್ತಕಗಳಿಗೆ ಪೂರಕವಾದ ಮತ್ತು ಆಸಕ್ತರಿಗೆ ಮಾಹಿತಿಯನ್ನು ಒದಗಿಸಿಕೊಡುವ ಕಾರ್ಯಕ್ರಮವಾಗಿರಲಿದೆ. ಶಾಲಾ ಮಕ್ಕಳು, ಪೋಷಕರು, ಶಿಕ್ಷಕರು ಮತ್ತು ವಿಜ್ಞಾನದ ಆಸಕ್ತರು ಇದರಲ್ಲಿ ಪಾಲ್ಗೊಳ್ಳಬಹುದು.