ಪ್ರಸಾರ ಭಾರತಿ ವರ್ಚಸ್ಸು ಬದಲಿಸುವುದೇ ದೊಡ್ಡ ಸವಾಲು: ಶಶಿಶೇಖರ್ ವೆಂಪಾಟಿ
ಬೆಂಗಳೂರು, ಜೂನ್ 3: ಪ್ರಸಾರ ಭಾರತಿಗೆ ಹೊಸ ಸಿಇಒ ಆಗಿ ನೇಮಕ ಆಗಿರುವ ಶಶಿ ಶೇಖರ್ ವೆಂಪಾಟಿ ಅವರು ಒನ್ ಇಂಡಿಯಾ ಕನ್ನಡಕ್ಕೆ ಎಕ್ಸ್ ಕ್ಲೂಸಿವ್ ಸಂದರ್ಶನ ನೀಡಿದ್ದಾರೆ.
ಪ್ರಸಾರ ಭಾರತಿ ಎಂಬ ಗತ ಕಾಲದ ಚೆಲುವೆ ಎಂದು ನೆನಪಿಸಿಕೊಳ್ಳುವವರಿಗೆ ಹೊಸದಾಗಿ ಹೇಗೆ ಬದಲಾಗುತ್ತದೆ ಎಂಬುದನ್ನು ಕಾದು ನೋಡಿ ಎಂಬ ಭರವಸೆ ಮಾತು ಅವರದು.
ಮನೆ ಮಂದಿ ಎಲ್ಲ ಕೂತು ನೋಡುವಂತಹದ್ದೇ ಕಾರ್ಯಕ್ರಮ ಮಾಡುವ ಪ್ರಸಾರ ಭಾರತಿ ಆರಂಭವಾಗಿದ್ದು 23.11.1997ರಲ್ಲಿ. ಇದರ ಅಡಿಯಲ್ಲಿ ಅಕಾಶವಾಣಿ ಹಾಗೂ ದೂರದರ್ಶನ ಕಾರ್ಯ ನಿರ್ವಹಿಸುತ್ತಿದೆ. ದೇಶದ ಹೆಮ್ಮೆ ಎನಿಸಿದ ಈ ಸ್ವಾಯತ್ತ ಸಂಸ್ಥೆಯಲ್ಲಿ ಬದಲಾವಣೆ ತರಬೇಕು ಎಂಬುದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರ ಆಶಯ.[ಪ್ರಸಾರ ಭಾರತಿ ಹೊಸ ಸಿಇಒ ಶಶಿ ಶೇಖರ್ ವೆಂಪಾಟಿ]
ಅದ್ಭುತ ಕನಸುಗಾರ ಶಶಿಶೇಖರ್ ವೆಂಪಾಟಿ ಅವರಿಗೆ ಹೊಸ ಜವಾಬ್ದಾರಿ ಕಣ್ಣೆದುರು ಸಿಕ್ಕಿದೆ. ಮುಂದಿನ ದಿನಗಳಲ್ಲಿ ಪ್ರಸಾರ ಭಾರತಿಯಲ್ಲಿ ಖಂಡಿತವಾಗಿಯೂ ದೊಡ್ಡ ಮಟ್ಟದ ಸಕಾರಾತ್ಮಕ ಬದಲಾವಣೆಯನ್ನು ನಿರೀಕ್ಷೆ ಮಾಡಬಹುದು. ಒನ್ ಇಂಡಿಯಾ ಕನ್ನಡದಿಂದ ಶುಭ ಹಾರೈಕೆಗಳು.
ಪ್ರಶ್ನೋತ್ತರ ಇಲ್ಲಿದೆ
ಪ್ರಸಾರ ಭಾರತಿ ಬಗ್ಗೆ ಈಗಿರುವ ವರ್ಚಸ್ಸು ಹೇಗೆ ಬದಲಾಯಿಸುತ್ತೀರಿ?
ವೆಂಪಾಟಿ: ಈಗ ನನ್ನ ಮುಂದೆ ಇರುವ ಅತಿ ದೊಡ್ದ ಸವಾಲು ಅದೇ. ಜಗತ್ತು ಬದಲಾಗಿದೆ. ಆಧುನಿಕ ತಂತ್ರಜ್ಞಾನಗಳ ಬಂದಿವೆ. ಅದಕ್ಕೆ ತಕ್ಕ ಹಾಗೆ ನಾವೂ ಬದಲಾಗಬೇಕಿದೆ.
ಅದಕ್ಕಾಗಿ ಏನಾದರೂ ಹೊಸ ಆಲೋಚನೆ, ಯೋಜನೆ ಹಾಕಿಕೊಂಡಿದ್ದೀರಾ?
ವೆಂಪಾಟಿ: ದೂರದರ್ಶನ ಹಾಗೂ ಆಲ್ ಇಂಡಿಯಾ ರೇಡಿಯೋ ಎರಡರ ಕಮರ್ಷಿಯಲ್ ಸ್ಲಾಟ್ ನೀಡುವ ಬಗ್ಗೆ ಯೋಚನೆ ಮಾಡಿದ್ದೀವಿ. ಹೊಸ ನಿರ್ಮಾಪಕರನ್ನು ಕರೆತರುವ ಆಲೋಚನೆ ಇದೆ.
ಈ ಎಲ್ಲ ಬದಲಾವಣೆ ತರುವುದಕ್ಕೆ ಅಗತ್ಯವಾದಂಥ ಹಣವನ್ನು ಸರಕಾರ ಒದಗಿಸುತ್ತದಾ?
ವೆಂಪಾಟಿ: ಸಾವಿರಾರು ಕೋಟಿ ರುಪಾಯಿಯನ್ನು ಸರಕಾರ ನೀಡುತ್ತಿದೆ. ಈ ಹಿಂದಿನ ಪ್ರಸಾರ ಭಾರತಿ ಸಂಪೂರ್ಣ ಬದಲಾಗಲಿದೆ.
ಅಗತ್ಯ ಸಂಖ್ಯೆಯಲ್ಲಿ ಸಿಬ್ಬಂದಿ ಇದ್ದಾರಾ?
ವೆಂಪಾಟಿ: ಪ್ರಸಾರ ಭಾರತಿ ತುಂಬ ದೊಡ್ಡ ಸಂಸ್ಥೆ. ನಲವತ್ತೈದು ಸಾವಿರ ಮಂದಿ ಕೆಲಸ ಮಾಡುತ್ತಿದ್ದಾರೆ.
ಆದರೂ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವುದು ನಿಂತಿಲ್ಲವಲ್ಲಾ?
ವೆಂಪಾಟಿ: ನಮ್ಮಲ್ಲಿ ಅಗತ್ಯ ಸಂಖ್ಯೆಯಲ್ಲಿ ಜನರಿದ್ದರೂ ಕೆಲವು ನಿರ್ದಿಷ್ಟ ಕೆಲಸ ಗೊತ್ತಿರುವ, ಆ ಬಗೆಗಿನ ಜ್ಞಾನ ಇರುವವರು ಇಲ್ಲ ಅಂತನ್ನಿಸಿದಾಗ ಹೊರಗಿನಿಂದ ಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ತೀವಿ ಅಷ್ಟೇ.
ಹಳೆ ಕಾರ್ಯಕ್ರಮಗಳ ಮರುಪ್ರಸಾರ ಮಾಡುವ ಆಲೋಚನೆ ಬಗ್ಗೆ ಕೇಳಿಪಟ್ಟಿದ್ದೀವಿ, ಆ ಬಗ್ಗೆ ತಿಳಿಸಿ
ವೆಂಪಾಟಿ: ಹೌದು, ಮಾಲ್ಗುಡಿ ಡೇಸ್, ಶಾರುಖ್ ಖಾನ್ ನಟಿಸಿದ್ದ ಸರ್ಕಸ್ ನಂಥದ್ದನ್ನು ಮರುಪ್ರಸಾರ ಮಾಡುವ ಆಲೋಚನೆ ಇದೆ.