ಬೆಂಗಳೂರು ರಸ್ತೆಯ ಗುಂಡಿಗೆ ಮುಕ್ತಿ ನೀಡಲು ಬಂದ 'ಪಾಟ್ ಹೋಲ್ ರಾಜ'
ಬೆಂಗಳೂರು ರಸ್ತೆಗಳ ಹೊಂಡಗಳನ್ನು ಮುಚ್ಚಲು 'ಪಾಟ್ ಹೋಲ್ ರಾಜ' ಸಂಸ್ಥೆ ಮುಂದಾಗಿದೆ. ಭಾರತದ ವಾಯುಸೇನಯಲ್ಲಿ ಪೈಲಟ್ ಆಗಿದ್ದ ಪ್ರತಾಪ್ ಭೀಮಸೇನ ರಾವ್ ಈ ಸಂಸ್ಥೆ ಸ್ಥಾಪಿಸಿದ್ದಾರೆ.
ಬೆಂಗಳೂರು, ಮೇ 5: ಬೆಂಗಳೂರಿನ ರಸ್ತೆಗಳಲ್ಲಿ ಹೊಂಡಗಳು ಸಾಮಾನ್ಯ. ಅದರಲ್ಲೂ ಕೆಲವು ರಸ್ತೆಗಳಂತೂ ಗುಂಡಿಗಳಿಂದಲೇ ತುಂಬಿಕೊಂಡಿವೆ. ಇದನ್ನು ಸರಕಾರ ರಿಪೇರಿ ಮಾಡುವ ಮನಸ್ಸು ಮಾಡುವುದೇ ಅಪರೂಪ.
ಈ ಕಾರಣಕ್ಕೆ ಈ ಹೊಂಡಗಳನ್ನು ಮುಚ್ಚಲು 'ಪಾಟ್ ಹೋಲ್ ರಾಜ' ಸಂಸ್ಥೆ ಮುಂದಾಗಿದೆ. ಭಾರತದ ವಾಯುಸೇನಯಲ್ಲಿ ಪೈಲಟ್ ಆಗಿದ್ದ ಪ್ರತಾಪ್ ಭೀಮಸೇನ ರಾವ್ ಈ ಸಂಸ್ಥೆ ಸ್ಥಾಪಿಸಿದ್ದಾರೆ. ಈ ಸಂಸ್ಥೆ ಮೂಲಕ ಸಾರ್ವಜನಿಕರಿಂದಲೇ ಹಣ ಸಂಗ್ರಹಿಸಿ ರಸ್ತೆಯ ಹೊಂಡಗಳನ್ನು ಮುಚ್ಚುವ ಕಾರ್ಯದಲ್ಲಿ ನಿರತವಾಗಿದ್ದಾರೆ.
ಇಂಥಹದ್ದೊಂದು ಕೆಲಸಕ್ಕೆ ಮುಂದಾಗಲು ಕಾರಣ ಒಂದು ನೋವಿನ ಕಥೆ. ಭೀಮಸೇನ ರಾವ್ ಗೆಳೆಯರ ಮಗಳೊಬ್ಬರು ಹೊಂಡದಿಂದಾಗಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅದಾದ ನಂತರ ಎಂದೂ ಮುಗಿಯದ ರಸ್ತೆ ಹೊಂಡದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅವರು ಹುಡುಕಿದ ದಾರಿಯೆ 'ಪಾಟ್ ಹೋಲ್ ರಾಜ'.
ಜನರು ಎಲ್ಲಾದರೂ ರಸ್ತೆಗಳಲ್ಲಿ ಹೊಂಡಗಳನ್ನು ಕಂಡರೆ 8147684653 ವಾಟ್ಸಾಪ್ ನಂಬರಿಗೆ ಚಿತ್ರವನ್ನು ರವಾನಿಸಬಹುದು. ನಂತರ ಈ ಸಂಸ್ಥೆಯ ಮೂಲಕ ಜನರನ್ನು ಒಟ್ಟು ಸೇರಿಸಿ ರಿಪೇರಿ ಕೆಲಸಕ್ಕೆ ಮುಂದಾಗುತ್ತಾರೆ. ಕಳೆದ ಒಂದೂವರೆ ವರ್ಷದಲ್ಲಿ ಇದೇ ರೀತಿ 300 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ.
ವಿಶೇಷ ಎಂದರೆ ಈ ರೀತಿ ಹೊಂಡಗಳನ್ನು ಮುಚ್ಚಲು ಭೀಮಸೇನ ರಾವ್ ಕೋಲ್ಡ್ ಡಾಂಬರ್ ಬಳಸುತ್ತಾರೆ. ಸಾಮಾನ್ಯವಾಗಿ ಹೊಂಡಗಳನ್ನು ಮುಚ್ಚಲು ಹಾಟ್ ಡಾಮರ್ ಬಳಸುತ್ತಾರೆ. ಆದರೆ ಇದನ್ನು ಕೇವಲ 3-4 ಗಂಟೆ ಸಂಗ್ರಹಿಸಿಡಬಹುದು. ಆದರೆ ಕೋಲ್ಡಾ ಡಾಂಬರನ್ನು 10 ತಿಂಗಳ ಕಾಲ ಪೇರಿಸಿಡಬಹುದಾಗಿದೆ. ಮತ್ತು ಇದನ್ನು ಬಳಸುವುದೂ ಸುಲಭವಾಗಿದೆ.
ಒಂದು ಚದರ ಅಡಿಯ 55 ಮಿಮೀ ಹೊಂಡ ತುಂಬಲು ಕನಿಷ್ಠ 2500 ರೂಪಾಯಿ ಖರ್ಚಾಗುತ್ತದೆ. ಸದ್ಯ ಸಿಎಸ್ಆರ್ ಫಂಡ್ ಹಾಗೂ ಉದ್ಯೋಗಿಗಳ ಹಣದಲ್ಲಿ ಹೊಂಡಗಳನ್ನು ಗುರುತಿಸಿ ಮುಚ್ಚುವ ಕೆಲಸ ನಡೆಸಲಾಗುತ್ತಿದೆ.
ಒಮ್ಮೆ ಜನರು ಪಾಥ್ ಹೋಲ್ ಚಿತ್ರಗಳನ್ನ ವಾಟ್ಸಾಪಿಗೆ ಕಳುಹಿಸುತ್ತಿದ್ದಂತೆ ಈ ಚಿತ್ರ ಪಾಟ್ ಹೋಲ್ ವೆಬ್ಸೈಟಿನಲ್ಲಿ ಕಾಣಿಸಿಕೊಳ್ಳುತ್ತದೆ. ಮಾತ್ರವಲ್ಲ ಈ ಸಮಸ್ಯೆ ಬಗೆಹರಿಯಿತಾ? ಹೊಂಡಕ್ಕೆ ಮುಕ್ತಿ ಸಿಕ್ಕಿತಾ ಎಂಬ ವಿವರಗಳು ಇಲ್ಲಿ ಸಿಗುತ್ತವೆ.
ಇಡೀ ಬೆಂಗಳೂರು ರಸ್ತೆಗಳನ್ನು ಹೊಂಡ ಮುಕ್ತ ಮಾಡಬೇಕು, ಕೇವಲ 3 ದಿನದಲ್ಲಿ ಎಲ್ಲಾ ಹೊಂಡಗಳನ್ನು ಮುಚ್ಚುವಂತಾಗಬೇಕು ಎಂಬ ಗುರಿಯನ್ನು ಪ್ರತಾಪ್ ಭೀಮಸೇನ ರಾವ್ ಹಾಕಿಕೊಂಡಿದ್ದಾರೆ. [ಮೂಲ ಮಾಹಿತಿ]