ಬೆಂಗಳೂರು ಪೊಲೀಸರ ಕಾರ್ಯ ಶ್ಲಾಘಿಸಿದ ಮೋದಿ
ಬೆಂಗಳೂರು, ಆಗಸ್ಟ್. 27: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬೆಂಗಳೂರು ಕಬ್ಬನ್ ಪಾರ್ಕ ಪೊಲೀಸರು ನೇರವಾಗಿ ಮಾತನಾಡಿದರು. ಬುಧವಾರ ಪ್ರಧಾನಿಯೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರು ಪೊಲೀಸರು ಸಂವಾದ ನಡೆಸಿದರು.
ಕಬ್ಬನ್ ಪಾರ್ಕ್ ಠಾಣಾಧಿಕಾರಿ ಸಿ.ಬಾಲಕೃಷ್ಣ, ಪೊಲೀಸ್ ಇಲಾಖೆಯಲ್ಲಿ ಮಾಹಿತಿ ತಂತ್ರಜ್ಞಾನ ಬಳಕೆ ಹಾಗೂ ಸಾರ್ವಜನಿಕ ಸೇವೆಗಳ ಬಗ್ಗೆ ಪ್ರಧಾನಿಯವರಿಗೆ ತಿಳಿಸಿದರು. ಸಿಸಿಟಿಎನ್ಎಸ್ ಯೋಜನೆ ಅನ್ವಯ ಡಿಜಿಟಲೀಕರಣಗೊಂಡ ಪೊಲೀಸ್ ಠಾಣೆಗಳ ಜೊತೆ ಪ್ರಧಾನಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ ಎಂದು ಮೊದಲೇ ತಿಳಿವಳಿಕೆ ನೀಡಲಾಗಿತ್ತು.[ಮೋದಿಗೆ ತಂತ್ರಜ್ಞಾನ ವಿವರಿಸಲು ಕಬ್ಬನ್ ಪಾರ್ಕ್ ಠಾಣೆ ಸಿದ್ಧ]
ಆ ಕಡೆಯಿಂದ ಪ್ರಧಾನಿ ಯಾವ ಪ್ರತಿಕ್ರಿಯೆಯನ್ನು ನೀಡಲಿಲ್ಲ. ಪ್ರಧಾನಿ 30 ಸೆಕೆಂಡ್ ಕಾಲ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರೊಂದಿಗೂ ಪ್ರಧಾನಿ ಮಾತನಾಡಿದರು. ಈ ವೇಳೆ ರಾಜ್ಯದ ಪೊಲೀಸರ ಕಾರ್ಯಕ್ಕೆ ಮೋದಿ ಶ್ಲಾಘನೆ ವ್ಯಕ್ತಪಡಿಸಿದರು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಠಾಣಾಧಿಕಾರಿ ಬಾಲಕೃಷ್ಣ ಅವರು ಎರಡು ನಿಮಿಷದೊಳಗೆ ಪ್ರಧಾನಿಯವರಿಗೆ ಪ್ರಾತ್ಯಕ್ಷಿಕೆ ಮೂಲಕ ಪೊಲೀಸ್ ಇಲಾಖೆಯಲ್ಲಿ ಮಾಹಿತಿ ತಂತ್ರಜ್ಞಾನ ಬಳಕೆ, ಉಪಯೋಗ ಹಾಗೂ ಸಕಾಲ ಯೋಜನೆಯಡಿ ಸಾರ್ವಜನಿಕ ಸೇವೆಗಳ ಬಗ್ಗೆ ವಿವರಣೆ ನೀಡಿದರು. ನಂತರ ರಾಜ್ಯ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಜತೆ ಪ್ರಧಾನಿ ಮೋದಿ ಸಮಾಲೋಚನೆ ನಡೆಸಿದರು.
ಸಂವಾದಕ್ಕೆ ವಿಧಾನಸೌಧ ಹಾಗೂ ಕಬ್ಬನ್ಪಾರ್ಕ್ ಠಾಣೆಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ವಿಧಾನಸೌಧದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಉಪಸ್ಥಿತರಿದ್ದರು. ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ, ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ಇದ್ದರು.
ಪ್ರಧಾನಿ ಮೋದಿ ಅವರ ಸಂವಾದಕ್ಕಾಗಿ ಪೊಲೀಸರು ಎರಡು ವಾರಗಳ ತಯಾರಿ ನಡೆಸಿದ್ದರು. ಪ್ರಧಾನ ಮಂತ್ರಿಗಳ ಸೂಚನೆಯಂತೆ ಸಂವಾದಲ್ಲಿ ಪಾಲ್ಗೊಳ್ಳಲಿರುವವರಿಗೆ ಹಿಂದಿ ಭಾಷಾ ತರಬೇತಿ ನೀಡಲಾಗಿತ್ತು. ಕರ್ನಾಟಕ, ಜಾರ್ಖಂಡ್, ಉತ್ತರಪ್ರದೇಶ, ಅಸ್ಸಾಂ ರಾಜ್ಯದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಪ್ರಧಾನಿ ಮೋದಿ ಬುಧವಾರ ವಿಡಿಯೋ ಸಂವಾದ ನಡೆಸಿದರು.