ಇವು 'ನಮ್ಮ ಮೆಟ್ರೋ'ದ ಸುಂದರ, ವಿರೂಪ, ಕುರೂಪ ಚಿತ್ರಗಳು!
ಬೆಂಗಳೂರು, ಆಗಸ್ಟ್ 18: ಬೆಂಗಳೂರಿಗರ ಅತ್ಯಂತ ನೆಚ್ಚಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಎನ್ನಿಸಿಕೊಂಡಿರುವ 'ನಮ್ಮ ಮೆಟ್ರೋ', ಇಂದು ಉದ್ಯಾನ ನಗರಿಯ ಗತ್ತನ್ನು ಹೆಚ್ಚಿಸಿದೆ. ರಾಜಧಾನಿಯ ಪ್ರಮುಖ ಬೀದಿಗಳ ಮೇಲೆ ಬೃಹದಾಕಾರದಲ್ಲಿ ಚಾಚಿಕೊಂಡಿರುವ ಮೆಟ್ರೋ ಲೈನ್ ಗಳು ಸಿಲಿಕಾನ್ ಸಿಟಿಯ ಘನತೆಗೆ ಕನ್ನಡಿ ಎನ್ನಿಸಿವೆ. ಇಂಥ ಬೆಂಗಳೂರಿನ ವಿವಿಧ ಮುಖಗಳನ್ನು ತೆರೆದಿಡುವ 'ನಮ್ಮ ಮೆಟ್ರೋ'ದ ತರಹೇವಾರಿ ಚಿತ್ರಗಳ ಪ್ರದರ್ಶನವನ್ನು ಆಗಸ್ಟ್ 21 ರಿಂದ 25 ರವರೆಗೆ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 10 ರಿಂದ ಸಂಜೆ 7 ಗಂಟೆವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಛಾಯಾಚಿತ್ರ-ಪತ್ರಕರ್ತರಾದ ಕೆ. ವೆಂಕಟೇಶ್ ಸೆರೆ ಹಿಡಿದ ನಮ್ಮ ಮೆಟ್ರೊದ ಸುಂದರ, ವಿರೂಪ ಹಾಗೂ ಕುರೂಪ ಮುಖಗಳ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿದೆ. ಆ ಮೂಲಕ ಮೆಟ್ರೋದ ಈಗಿನ, ಹಿಂದಿನ ಎಲ್ಲ ಮುಖಗಳು ಅನಾವರಣಗೊಳ್ಳಲಿವೆ.
ನಮ್ಮ ಮೆಟ್ರೊ, ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೊಸ ಗಾಂಭೀರ್ಯವನ್ನು ತಂದಿದ್ದು, ಪ್ರತಿದಿನ ಹೈ-ಟೆಕ್ ಮಹಾನಗರದ ಸುಮಾರು ಮೂರು ಲಕ್ಷಕ್ಕೂ ಹೆಚ್ಚಿನ ನಿತ್ಯ ಪ್ರಯಾಣಿಕರನ್ನು ಅವರ ಗಮ್ಯ ಸ್ಥಾನಗಳಿಗೆ ತಲುಪಿಸುತ್ತಿದೆ. ನಮ್ಮ ಮೆಟ್ರೋದ ಯಶಸ್ಸು ಹಾಗೂ ಅಸಾಧಾರಣ ಬೆಳವಣಿಗೆಗಳಿಗೆ ಬಲಿಯಾಗಿರುವ ಕಾಸ್ಮೊ ಪಾಲಿಟಿನ್ ನಗರದ ಸುಂದರ, ವಿರೂಪ ಹಾಗೂ ಕುರೂಪ ಮುಖಗಳನ್ನು ಛಾಯಾಚಿತ್ರದ ಮೂಲಕ ತೆರೆದಿಡಲಾಗುತ್ತಿದೆ.
ತ್ವರಿತ ಪ್ರಯಾಣ
ಸಮಸ್ಯೆಗಳಿಂದ ಮುಕ್ತವಾದ ಮೆಟ್ರೊ, ಉದ್ಯಾನ ನಗರಿಯ ನಾಗರಿಕರಿಗೆ ಅವರ ಸಮಯ ಹಾಗೂ ಶಕ್ತಿಯನ್ನು ಉಳಿಸುವಂಥ ಸರಿಯಾದ ಸಮಯಕ್ಕೆ ತ್ವರಿತ ಗತಿಯ ಪ್ರಯಾಣವನ್ನು ಕಲ್ಪಿಸುತ್ತಿದೆ.
ಖಾಸಗಿ ವಾಹನಗಳಿಗೆ ಗುಡ್ ಬೈ!
ಜನ ದಟ್ಟಣೆಯ ಬಸ್ಸುಗಳು, ದುಬಾರಿ ಕ್ಯಾಬ್ ಗಳು, ಕರೆದ ಕಡೆ ಬರದ ಆಟೋಗಳು ಹಾಗೂ ಖಾಸಗಿ ವಾಹನಗಳಿಂದ ಮುಕ್ತಿ ನೀಡಿದೆ.
ಹವಾನಿಯಂತ್ರಿತ ಕೋಚ್
ಸಂಕೇತಗಳೊಂದಿಗೆ ಕಾರ್ಯ ನಿರ್ವಹಿಸುವ ಹವಾ-ನಿಯಂತ್ರಿತ ಕೋಚ್ ಗಳಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಹಾಗೂ ಉತ್ತರದಿಂದ ದಕ್ಷಿಣಕ್ಕೆ ಹಿತಕರವಾದ ಪ್ರಯಾಣವನ್ನು ನಮ್ಮದಾಗಿಸಿದೆ. ಇನ್ನೂ ಹೆಚ್ಚೆಂದರೆ, ಇದು ಮಾಲಿನ್ಯ ಮುಕ್ತ ಸೇವೆಯಾಗಿದೆ.
ಕಣ್ಣಿಗೆ ರಾಚುವ ಚಿತ್ರ
ಮೆಟ್ರೊದ ಮೂಲಭೂತ ಸೌಲಭ್ಯಗಳು ಸಣ್ಣ - ಪುಟ್ಟ ರಸ್ತೆಗಳ ಮಧ್ಯದಲ್ಲಿ ಎಡರು-ತೊಡರು ನಿಲ್ದಾಣಗಳ, ಭೂಮಿಯ ಮೇಲ್ಭಾಗದ ಹಾಗೂ ಭೂಮಿಯ ಕೆಳಭಾಗದ ಜಿಗ್-ಜಾಗ್ ರೈಲ್ವೆ ಹಳಿಗಳ ಹಾಗೂ ನೂರಾರು ಪಿಲ್ಲರ್ ಗಳು ಕಣ್ಣಿಗೆ ರಾಚುವಂತೆ ಸೆರೆಹಿಡಿಯಲಾಗಿದೆ.
ಉಪಯೋಗವಷ್ಟೇ ಅಲ್ಲ, ಹಾನಿಯೂ ಆಗಿದೆ
ಮೆಟ್ರೋದಿಂದ ಎಷ್ಟು ಉಪಯೋಗವಾಗಿದೆಯೋ ಅಷ್ಟೇ ಹಾನಿಗೂ ಸಾಕ್ಷಿಯಾಗಿದೆ. ಮೆಟ್ರೊ ಮಾರ್ಗದಲ್ಲಿ ಮೂಲಭೂತ ಅವಶ್ಯಕತೆಗಳಾದ ಮನೆ, ಅಂಗಡಿ, ಕಚೇರಿ, ಕಟ್ಟಡಗಳು ಹಾಗೂ ಕೋಟ್ಯಂತರ ರೂಪಾಯಿಗಳ ಮೌಲದ ಅಮೂಲ್ಯ ಆಸ್ತಿಗಳನ್ನು ಕಳೆದುಕೊಂಡವರು ಇವತ್ತಿಗೂ ಮಮ್ಮಲ ಮರಗುತ್ತಿದ್ದಾರೆ.
ಸುಸಜ್ಜಿತ ಸುರಂಗ ಮಾರ್ಗ
ಒಂದೆಡೆ ನಮ್ಮ ಮೆಟ್ರೊ, ನಗರ ಕೇಂದ್ರದಲ್ಲಿರುವ ಮೆಜೆಸ್ಟಿಕ್ ನಲ್ಲಿ ಕೊನೆ ಮೊದಲಿಲ್ಲದಂತೆ, ಅಡ್ಡಡ್ಡಲಾಗಿ, 42 ಕಿ.ಮಿ. ಹಳಿಯನ್ನು ಹೆಣೆದುಕೊಂಡಿದ್ದರೂ, ನೆಲದ ಮೇಲೆ ಅಥವಾ ಸುಸಜ್ಜಿತ ಬೆಳಕಿನ ವ್ಯವಸ್ಥೆಯಿರುವ ಸುರಂಗಗಳೊಳಗೆ ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣಕ್ಕೆ ಹೆಚ್ಚಿನ ವೇಗದಲ್ಲಿ ಸಾಗುತ್ತಿದೆ.
ರಸ್ತೆ ಬಳಕೆದಾರರ ತಾಳ್ಮೆ ಪರೀಕ್ಷೆ
ಆದರೆ ಮತ್ತೊಂದು ಕಡೆ ನೂರಾರು ಜನ ರಸ್ತೆ ಬಳಕೆದಾರರು ತಮ್ಮ ತಾಳ್ಮೆಯನ್ನು ಪರೀಕ್ಷಿಸಿಕೊಳ್ಳುತ್ತಾ, ಅತಿ ಹೆಚ್ಚಿನ ಹಾಗೂ ಅಸ್ತವ್ಯಸ್ತ ಸಂಚಾರಿ ಸಿಗ್ನಲ್ ಗಳಲ್ಲಿ ಹೆಣಗುತ್ತಾ, ಪ್ರಯಾಣಿಸುತ್ತಿದ್ದಾರೆ.
ದುರಂತವೆಂದರೆ ಇದು!
ದುರಂತವೆಂದರೆ, ನಮ್ಮ ಮೆಟ್ರೋಗಾಗಿ ತಮ್ಮ ಭವಿಷ್ಯವನ್ನು, ಹಾಗೆಯೇ ತಮ್ಮ ಅಮೂಲ್ಯವಾದ ಸ್ವತ್ತನ್ನು, ಮಾಲೀಕತ್ವವನ್ನು ಬಿಟ್ಟುಕೊಟ್ಟಿರುವ ಹಳೇ ಬೆಂಗಳೂರಿಗರ ಬಗ್ಗೆ ಸಾಕಷ್ಟು ಮೆಟ್ರೊ ಪ್ರಯಾಣಿಕರಿಗೆ ಏನೂ ತಿಳಿದಿಲ್ಲ!
ಧರೆಗುರುಳಿದ ಮರಗಳು
ಮೆಟ್ರೋ ಕಾಮಗಾರಿಗಾಗಿ ಹಲವು ಮನೆಗಳನ್ನು ಮತ್ತು ಮರಗಳನ್ನು ಕೆಡವಿರುವ ಈ ದೃಶ್ಯ ನಮ್ಮ ಮೆಟ್ರೋದ ಕುರೂಪವನ್ನೂ ಪ್ರತಿನಿಧಿಸುವುದು ಸುಳ್ಳಲ್ಲ!
ಹಾವು ಹರಿದಂಥ ರಸ್ತೆಯಲ್ಲಿ ಮೆಟ್ರೋ ಸಂಚಾರ
ಬೆಂಗಳೂರಿನ ಅಭಿವೃದ್ಧಿಯ ಸಂಕೇತ ಎನ್ನಿಸಿದ ಗಗನಚುಂಬಿ ಕಟ್ಟಡಗಳೊಂದಿಗೆ, ಹಾವು ಹರಿದಂಥ ರಸ್ತೆಯಲ್ಲಿ ಸಂಚರಿಸುತ್ತಿರುವ ನಮ್ಮ ಮೆಟ್ರೋ ಬೆಂಗಳೂರಿನ ಹಿರಿಮೆಗೆ ಮತ್ತೊಂದು ಗರಿ ಎನ್ನಿಸಿದೆ.
ಹಸಿರ ನಡುವಲ್ಲಿ ದೈತ್ಯ ಮೆಟ್ರೋ ರಸ್ತೆ!
ಇಕ್ಕೆಲಗಳಲ್ಲಿ ಹಸಿರು ಮರಗಳು, ನಡುವಲ್ಲಿ ಏಕಾಂಗಿಯಾಗಿ ಎದ್ದು ನಿಂತ ದೈತ್ಯ ಮೆಟ್ರೋ ರಸ್ತೆ ರಾಜಧಾನಿಯ ಮೆರಗನ್ನು ಹೆಚ್ಚಿಸಿದೆ.
ಬೆಂಗಳೂರಿನ ಕೊರತೆ ನೀಗಿಸಿದ ಮೆಟ್ರೋ
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ ಸೇರಿದಂತೆ ಹೈಟೆಕ್ ಸಾರಿಗೆ ವ್ಯವಸ್ಥೆ ಹೊಂದಿದ್ದ ಬೆಂಗಳೂರಿನ ಒಂದೇ ಒಂದು ಕೊರತೆ ಎಂದರೆ ಮೆಟ್ರೋ ಇಲ್ಲ ಎಂಬುದಾಗಿತ್ತು. ಆದರೆ ಆ ಕೊರತೆಯೂ ನೀಗಿ, ಇದೀಗ ಬೆಂಗಳೂರಿನ ಅಂದವೂ, ಘನತೆಯೂ ಹೆಚ್ಚಿದೆ.
ನಿಬ್ಬೆರಗಾಗುವ ಚಿತ್ರಗಳು
ಮೆಟ್ರೋ ಯೋಜನೆಯ ಸಾಹಸಗಾಥೆಯನ್ನು ನಿಬ್ಬೆರಗಾಗಿಸುವಂತೆ ವಿವರಿಸುವ ಅತ್ಯಂತ ಪ್ರಮುಖ ಚಿತ್ರಗಳನ್ನು, ಕಾಲಾನುಕ್ರಮದಲ್ಲಿ ಈ ನಗರ ರೂಪಾಂತರಗೊಂಡಿರುವ ಬಗೆಯನ್ನು ಪ್ರಖ್ಯಾತ ಛಾಯಾಚಿತ್ರ-ಪತ್ರಕರ್ತರಾದ ಕೆ. ವೆಂಕಟೇಶ್ ಅವರು ತೆರೆದಿಟ್ಟಿದ್ದಾರೆ.
ಮೆಟ್ರೋ ಸುತ್ತ ಗಿರಕಿ ಹೊಡೆವ ಚಿತ್ರ
ಇಲ್ಲಿನ ನಿವಾಸಿಗಳ ಅಗತ್ಯ ಬೆಳವಣಿಗೆಯ ಫಲಶೃತಿಯ ಬಗೆಗೆ ಅತ್ಯುತ್ತಮ ಚಿತ್ರಗಳನ್ನು ಸೆರೆಹಿಡಿದು, ಪ್ರದರ್ಶನದಲ್ಲಿಡಲಾಗಿದೆ. ಅದು ಮೆಟ್ರೋದ ಸುತ್ತ ಗಿರಕಿ ಹೊಡೆಯುತ್ತ, ಕಾಲಘಟ್ಟದ ದೃಶ್ಯಗಳನ್ನು ನಮ್ಮ ಮುಂದೆ ತೆರೆದಿಡಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.