ಬೆಂಗಳೂರಲ್ಲಿ ದಂಗಲ್ ಸಹೋದರಿಯರ ಕುಸ್ತಿ ಕಮಾಲ್
ದಂಗಲ್ ಚಿತ್ರಕ್ಕೆ ಪ್ರೇರಣೆಯಾಗಿದ್ದ ಗೀತಾ ಫೋಗಟ್ ಮತ್ತು ಬಬಿತಾ ಫೋಗಟ್ ಬೆಂಗಳೂರಿನಲ್ಲಿ ನಡೆದ ಸ್ವರಕ್ಷಣಾ ಕಾರ್ಯಗಾರದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು.
ಬೆಂಗಳೂರು, ಫೆಬ್ರವರಿ 25: ದಂಗಲ್ ಚಿತ್ರಕ್ಕೆ ಪ್ರೇರಣೆಯಾಗಿದ್ದ ಗೀತಾ ಫೋಗಟ್ ಮತ್ತು ಬಬಿತಾ ಫೋಗಟ್ ಬೆಂಗಳೂರಿನಲ್ಲಿ ನಡೆದ ಸ್ವರಕ್ಷಣಾ ಕಾರ್ಯಗಾರದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು.
ಚಿಕ್ಕಬಳ್ಳಾಪುರ ಶಾಸಕ ಡಾ ಸುಧಾಕರ್ ಮತ್ತು ಗ್ರಾಂಡ್ ಮಾಸ್ಟರ್ ಅಕ್ಷರ್ ಅವರ ಮಾತೃ ಟ್ರಸ್ಟ್ ನಗರದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಮಹಿಳಾ ಸ್ವರಕ್ಷಣಾ ತರಬೇತಿ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಪೋಗಟ್ ಸಹೋದರಿಯರು ಆಗಮಿಸಿದ್ದರು.
ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಎರಡು ದಿನಗಳ ಕಾಲ ಈ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. ಸಾವಿರಾರು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾರ್ಷಲ್ ಆರ್ಟ್ಸ್, ಸ್ವ ರಕ್ಷಣೆ ಮತ್ತು ಯೋಗವನ್ನು ಇಲ್ಲಿ ಕಲಿತುಕೊಂಡರು. ಇದೇ ಸಂಸ್ಥೆ ನಂದಿ ಬೆಟ್ಟದಲ್ಲಿ ಕುಸ್ತಿ ಅಕಾಡೆಮಿಯನ್ನೂ ಸ್ಥಾಪಿಸಿದೆ.
ದಂಗಲ್ ಹುಡುಗಿ ಏನಂದ್ರು?
ನಾನು ಈ ಹಿಂದೆಯೂ ಬೆಂಗಳೂರಿಗೆ ಬಂದಿದ್ದೇನೆ. ಆದರೆ ಕುಸ್ತಿ ಅಕಾಡೆಮಿ ಸ್ಥಾಪನೆ ಮಾಡುತ್ತಿರುವುದು ಖುಷಿಯ ವಿಚಾರ. ನಾವು ಹರಿಯಾಣದಿಂದ ಹೊರಗೂ ಕುಸ್ತಿಯನ್ನು ಕೊಂಡೊಯ್ಯುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದರು.
ಬಬಿತಾ ಮಾತು
ನನಗೆ ಮತ್ತು ನನ್ನ ಸಹೋದರಿಗೆ ಸಣ್ಣಗಿರುವಾಗಿಂದಲೇ ಗುದ್ದಾಡುವುದು ಅಭ್ಯಾಸ. ಆದರೆ ಇವತ್ತು ಬೆಂಗಳೂರಿನ ಇಷ್ಟೊಂದು ಮಹಿಳೆಯರು ಸ್ವರಕ್ಷಣಾ ತರಬೇತಿ ಪಡೆದುಕೊಂಡಿರುವುದು ಖುಷಿ ತಂದಿದೆ ಎಂದು ಹೇಳಿದರು.
ದಂಗಲ್ ಯುವತಿಯರ ಸ್ಪೂರ್ಥಿಯ ಪಯಣ
ದಂಗಲ್ ಚಿತ್ರಕ್ಕೆ ಪ್ರೇರಣೆಯಾದ ಇಬ್ಬರೂ ಕುಸ್ತಿಪಟುಗಳು ದೇಶದಾದ್ಯಂತ ಸಂಚರಿಸುತ್ತಿದ್ದು ಮಹಿಳೆಯರಿಗೆ ಪ್ರೇರಣೆ ನೀಡುವಲ್ಲಿ ನಿರತರಾಗಿದ್ದಾರೆ. ಈ ವೇಳೆ ಮಹಿಳೆಯರ ಜತೆ ಸಂವಾದವನ್ನೂ ನಡೆಸುತ್ತಿದ್ದಾರೆ. ಇದನ್ನು ಮಾತೃ ಟ್ರಸ್ಟ್ ಪ್ರಾಯೋಜಿಸುತ್ತಿದೆ.
ಅಕ್ಷರ್ ಹೇಳಿದ್ದೇನು?
ಗ್ರಾಂಡ್ ಮಾಸ್ಟರ್ ಅಕ್ಷಯ್ ಮಾತನಾಡಿ, ಎರಡು ದಿನದಲ್ಲಿ ಸಾವಿರಾರು ಮಹಿಳೆಯರ ಕಲ್ಯಾಣಕ್ಕೆ ಉಪಯೋಗವಾಗುವಂತ ಕೊಡುಗೆ ನೀಡುತ್ತಿರುವುದೇ ನನಗೆ ಸಂಭ್ರಮದ ವಿಚಾರ. ಎರಡು ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಿದ ಮಹಿಳೆಯರಿಗೆ ಯೋಗ ಮತ್ತು ಸ್ವರಕ್ಷಣಾ ತರಬೇತಿಗಳು ಉಪಯೋಗವಾಗಲಿವೆ ಎಂದರು.
ಕುಸ್ತಿ ಕಲಿಯಬೇಕು
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ ಸುಧಾಕರ್ ಬೆಂಗಳೂರಿನ ಯುವತಿಯರು 'ನಂದಿ ಬೆಟ್ಟ' (ಕುಸ್ತಿ ಅಕಾಡೆಮಿ) ದಲ್ಲಿ ಕುಸ್ತಿ ಕಲಿಯುವಂತಾಗಬೇಕು. ಈಗಾಗಲೇ ಸಾವಿರಾರು ಜನರು ಫೋಗಟ್ ಸಹೋದರಿಯರಿಂದ ಸ್ಪೂರ್ಥಿ ಪಡೆದುಕೊಂಡಿದ್ದಾರೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಮಾತೃ ಸಂಸ್ಥೆ ಮಹಿಳೆಯರಿಗೆ ಉದ್ಯೋಗ ತರಬೇತಿ, ಶಿಕ್ಷಣ, ಸ್ವರಕ್ಷಣೆ ಸೇರಿದಂತೆ ಮಹಿಳೆಯರ ಕಲ್ಯಾಣಕ್ಕೆ ಬೇಕಾದ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲಿದೆ ಎಂದು ಹೇಳಿದರು.