ಡಿಕೆ ಶಿವಕುಮಾರ್ ಕುಟುಂಬ ಒಡೆತನದ ಶಾಲೆ ವಿರುದ್ಧ ಪ್ರತಿಭಟನೆ
ಇಂಧನ ಸಚಿವ ಡಿಕೆ ಶಿವಕುಮಾರ್ ಕುಟುಂಬದ ಒಡೆತನದಲ್ಲಿರುವ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಯಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಆಯ್ಕೆಯಾದ ಮಕ್ಕಳಿಗೆ ಪ್ರವೇಶ ನೀಡುತ್ತಿಲ್ಲ ಎಂದು ಆರೋಪಿಸಿ ಪೋಷಕರು ಪ್ರತಿಭಟನೆ ನಡೆಸಿದ್ದಾರೆ
ಬೆಂಗಳೂರು, ಮೇ 10: ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆ ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿರುವ ಪ್ರತಿಷ್ಠಿತವಾದ ಶಾಲೆ. ಬುಧವಾರ ಆ ಶಾಲೆಯ ವಿರುದ್ಧ ಪೋಷಕರು ಚಾಮರಾಜಪೇಟೆಯಲ್ಲಿರುವ ಬಿಇಒ ಕಚೇರಿ ಎದುರು ಪೋಷಕರು ಪ್ರತಿಭಟನೆ ನಡೆಸಿದರು. ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್ ಟಿಇ) ಮಕ್ಕಳಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬುದು ಪ್ರತಿಭಟನೆ ನಡೆಸಲು ಕಾರಣ.
ಆಸಕ್ತಿಕರ ಸಂಗತಿ ಅಂದರೆ ಈ ಶಾಲೆಯ ಅಧ್ಯಕ್ಷರು ಡಿ.ಕೆ.ಶಿವಕುಮಾರ್. ಹೌದು, ಇಂಧನ ಸಚಿವರಾದ ಡಿಕೆ ಶಿವಕುಮಾರ್ ಅವರೇ ಈ ಶಾಲೆ ಅಧ್ಯಕ್ಷರು. ಅವರ ಕುಟುಂಬದವರಿಗೆ ಸೇರಿದ ಈ ಶಾಲೆಯಲ್ಲಿ ಸರಕಾರದ ನಿಯಮವನ್ನು ಉಲ್ಲಂಘಿಸಲಾಗುತ್ತಿದೆ ಎಂದು ಪೋಷಕರು ಆಕ್ರೋಶವನ್ನು ವ್ಯಕ್ತಪಡಿಸಿದರು.[ಕೆಪಿಸಿಸಿ ಅಧ್ಯಕ್ಷರಾಗಲು ಡಿಕೆ ಶಿವಕುಮಾರ್ ಸೂಕ್ತ: ನಮ್ಮ ಓದುಗರು]
ಆರ್ ಟಿಇ ಅಡಿಯಲ್ಲಿ ಆಯ್ಕೆಯಾದ ಮಕ್ಕಳಿಗೆ ಪ್ರವೇಶ ನೀಡುವುದಕ್ಕೆ ಮೇ 10ನೇ ತಾರೀಕು ಕೊನೆ ದಿನ, ಈ ಸಂಬಂಧ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿದ ಪೋಷಕರು ಡಿಕೆ ಶಿವಕುಮಾರ್, ಅಧಿಕಾರಿಗಳು ಹಾಗೂ ಶಾಲೆಯ ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿದರು.