ಪಿಎ ಕಿಡ್ನಾಪ್ ಕೇಸ್ ಎಲ್ಲವೂ ಕಾಂಗ್ರೆಸ್ ಕುತಂತ್ರ: ಈಶ್ವರಪ್ಪ
ಬೆಂಗಳೂರು, ಜುಲೈ 28: ನಾನು ಮತ್ತು ಯಡಿಯೂರಪ್ಪ ಅಣ್ಣ ತಮ್ಮಂದಿರಂತೆ ಇದ್ದೇವೆ. ನಮ್ಮ ನಡುವೆ ಮತ್ತೆ ವೈಮನಸ್ಯ ಉಂಟು ಮಾಡಲು ಕಾಂಗ್ರೆಸ್ ಷಡ್ಯಂತ್ರ ಮಾಡುತ್ತಿದೆ. ವಿನಯ್ ಹಾಗೂ ಸಂತೋಷ್ ನಮ್ಮಿಬ್ಬರ ಅಧಿಕೃತ ಆಪ್ತ ಸಹಾಯಕರಲ್ಲ. ಅವರನ್ನು ಬಳಸಿಕೊಂಡು ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಆರೋಪಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿನಯ್ ಹಾಗೂ ಸಂತೋಷ್ ಸ್ನೇಹಿತರು. ಅವರಿಬ್ಬರ ಮಧ್ಯೆ ಈಗ ಸ್ವಲ್ಪ ಗೊಂದಲವೆದ್ದಿದೆ. ಅದನ್ನು ಕೋರ್ಟಿನಲ್ಲಿ ಬಗೆಹರಿಸಿಕೊಳ್ಳಲಿದ್ದಾರೆ. ವಿನಯ್ ನನ್ನ ಅಧಿಕೃತ ಆಪ್ತ ಸಹಾಯಕ ಅಲ್ಲ. ಸಂತೋಷ್ ಕೂಡ ಯಡಿಯೂರಪ್ಪನವರ ಅಧಿಕೃತ ಪಿಎ ಅಲ್ಲ ಎಂದು ಪುನರುಚ್ಚರಿಸಿದರು.
ನನ್ನ ಹಾಗೂ ಯಡಿಯೂರಪ್ಪ ಅವರ ನಡುವೆ ಮನಸ್ತಾಪ ಇದ್ದಿದ್ದು ನಿಜ. ಆದರೆ, ಆರೆಸ್ಸೆಸ್ ನಾಯಕರ ಮಧ್ಯ ಪ್ರವೇಶದಿಂದ ಎಲ್ಲವೂ ಉಪಶಮನವಾಯಿತು ಎಂದರು.
ಸಿದ್ದರಾಮಯ್ಯ ಅವರು ಧರ್ಮ ರಾಜಕೀಯ ಮಾಡುತ್ತಿದ್ದು, 'ನಾನು ಕುರುಬ ಧರ್ಮ ಮಾಡಿ ಅಂತ ಹೇಳುತ್ತೇನೆ. ಮತ್ತೊಬ್ಬರು ಇನ್ನೊಂದು ಧರ್ಮಕ್ಕೆ ಬೇಡಿಕೆ ಇಡ್ತಾರೆ ಅವರೆಲ್ಲರ ಬೇಡಿಕೆಯಂತೆ ಹೊಸ ಧರ್ಮದ ಮಾನ್ಯತೆ ಕೊಡಲಾಗುತ್ತದೆಯೇ? ಇದರ ಬಗ್ಗೆ ಚರ್ಚೆ ಅನಗತ್ಯ' ಎಂದರು.