ನಂಬರ್ ಪ್ಲೇಟಿನಲ್ಲಿ ಸಂಘಟನೆ ಹೆಸ್ರು, ಚರ್ಚೆಗೀಡಾದ ಸುರೇಶ್ ಕುಮಾರ್ ಪೋಸ್ಟ್
ಬೆಂಗಳೂರು, ಜೂನ್ 14: ಬಿಜೆಪಿ ಶಾಸಕ ಸುರೇಶ್ ಕುಮಾರ್ ಫೇಸ್ಬುಕ್ಕಿನಲ್ಲಿ ಟ್ರಾಫಿಕ್ ಪೊಲೀಸರು ಮತ್ತು ಸಾರಿಗೆ ಇಲಾಖೆಯವರನ್ನು ತರಾಟೆಗೆ ತೆಗೆದುಕೊಂಡ ಪೋಸ್ಟೊಂದು ಭಾರೀ ಚರ್ಚೆಗೀಡಾಗಿದೆ.
ಮಂಗಳವಾರ ತಮ್ಮ ಫೇಸ್ಬುಕ್ ಗೋಡೆ ಮೇಲೆ ಪೋಸ್ಟ್ ಒಂದನ್ನು ಹಾಕಿದ ಸುರೇಶ್ ಕುಮಾರ್ ಅದರಲ್ಲಿ ನಂಬರ್ ಪ್ಲೇಟ್ ಮೇಲೆ ತಮ್ಮ ಸಂಘಟನೆಯ ಹೆಸರನ್ನು ಕೆತ್ತಿದ್ದವರ ಮೇಲೆ ಆಕ್ರೋಶ ಹೊರ ಹಾಕಿದ್ದರು. "ಪಾಪದ ಜನರನ್ನು ದಿನದ ಕೆಲಸಕ್ಕೆ ಹೋಗುತ್ತಿರುವಾಗ/ ಕೆಲಸ ಮುಗಿಸಿಕೊಂಡು ಬರುತ್ತಿರುವಾಗ ದಾರಿ ದಾರಿಯಲ್ಲಿ ಹಿಡಿದು ದಂಡ ವಿಧಿಸುವ ಟ್ರಾಫಿಕ್ ಪೋಲಿಸರಿಗೆ ಅಥವಾ ಸಾರಿಗೆ ಇಲಾಖೆಯವರಿಗೆ ಇಂತಹದು ಕಾಣಿಸುವುದಿಲ್ಲವೇ?,"ಎಂದು ಪ್ರಶ್ನೆಯನ್ನೂ ಮಾಡಿದ್ದರು.
ಸುರೇಶ್ ಕುಮಾರ್ ಪೋಸ್ಟ್ ಇಲ್ಲಿದೆ,
ಇದಕ್ಕೆ ಸಾರ್ವಜನಿಕರಿಂದ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಹಲವರು ಸಾರಿಗೆ ಇಲಾಖೆ ಅಧಿಕಾರಿಗಳನ್ನು ಮತ್ತು ನಗರ ಸಂಚಾರ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
'ರಾಜ್ಯದಲ್ಲಿ ಹಲವಾರು ಮಂದಿ ಈ ರೀತಿಯ ಫಲಕಗಳನ್ನು ಹಾಕಿಕೊಂಡು ಮಂಕು ಬೂದಿ ಎರಚುತ್ತಿದ್ದಾರೆ. ಸಾರಿಗೆ ಹಾಗೂ ಪೋಲೀಸ್ ಇಲಾಖೆ ಇಂತಹವರ ವಿರುದ್ಧ ಕ್ರಮ ಜರುಗಿಸಬೇಕು,' ಎಂಬ ಸರ್ವಸಮ್ಮತ ಅಭಿಪ್ರಾಯ ಕೆಮೆಂಟುಗಳಲ್ಲಿ ವ್ಯಕ್ತವಾಗಿದೆ.
ಜತೆಗೆ ಈ ಕಾರಿನ ಮಾಲಿಕರಾದ ಬೆಂಗಳೂರಿನ ಮೋಹನ್ ರಾಜ್ ಒಡೆಯರ್ ಇದಕ್ಕೆ ಕಮೆಂಟ್ ಮಾಡಿದ್ದು, "ಸಾರ್ ನಾವು ಮಾತ್ರ ಈ ರೀತಿಯ ನಂಬರ್ ಪ್ಲೇಟ್ ಹಾಕಿಕೊಂಡಿಲ್ಲ. ನಿಮ್ಮ ಪಕ್ಷದವರು ಮತ್ತು ವಿರೋಧ ಪಕ್ಷದ ಶಾಸಕರು ಹಾಗೂ ಕಾರ್ಪೊರೇಟರ್ ಗಳೂ ಇದೇ ತರಹ ನಂಬರ್ ಪ್ಲೇಟ್ ಹಾಕಿಕೊಳ್ಳುತ್ತಾರೆ. ಇದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸುರೇಶ್ ಕುಮಾರ್, "ಮೋಹನ್ ರಾಜ್, ನಾನು ನಿಮ್ಮನ್ನು ಪ್ರಶ್ನೆ ಮಾಡುತ್ತಿಲ್ಲ. ನನ್ನ ಸಿಟ್ಟು ಇರುವುದು ನಗರ ಸಂಚಾರ ಪೊಲೀಸರು ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳ ಮೇಲೆ. ನಾನು ಅವರಿಂದ ಉತ್ತರ ನಿರೀಕ್ಷಿಸುತ್ತಿದ್ದೇನೆ. ನನಗೆ ನೀವು ಯಾರು ಎಂಬುದೇ ಗೊತ್ತಿಲ್ಲ. ನನ್ನ ಸಹೊದ್ಯೋಗಿ ಶಾಸಕರು ಮತ್ತು ಕಾರ್ಪೊರೇಟರ್ ಗಳು ಈ ರೀತಿ ಮಾಡಿದರೂ ತಪ್ಪೆ. ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಯಾರದ್ದೋ ತಪ್ಪು ನನಗೂ ಅದೇ ತಪ್ಪು ಮಾಡಲು ನೀಡುವ ಪರವಾನಿಗೆಯಲ್ಲ," ಎಂದು ಸರಿಯಾಗಿ ಚಾಟಿ ಬೀಸಿದ್ದಾರೆ.