ಬೆಂಗಳೂರು : ಯಮನಾಗಿ ಬಂದ ಮರಳು ಲಾರಿ, ಒಬ್ಬರು ಸಾವು
ಬೆಂಗಳೂರು, ಆಗಸ್ಟ್ 15 : ಬೆಂಗಳೂರಿನ ಕಾಮಾಕ್ಷಿಪಾಳ್ಯ ಬಳಿ ಸರಣಿ ಅಪಘಾತ ನಡೆದಿದೆ. ಬ್ರೇಕ್ ಫೇಲ್ ಆದ ಲಾರಿ ಬಸ್ ನಿಲ್ದಾಣದಕ್ಕೆ ನುಗ್ಗಿದೆ. ಒಬ್ಬರು ಈ ಅಪಘಾತದಲ್ಲಿ ಸಾವನ್ನಪ್ಪಿದ್ದು, 6 ಜನರು ಗಾಯಗೊಂಡಿದ್ದಾರೆ.
ಸೋಮವಾರ ಬೆಳಗ್ಗೆ 9.40ರ ಸುಮಾರಿಗೆ ಕೊಟ್ಟಿಗೆಪಾಳ್ಯ ಸಿಗ್ನಲ್ ಬಳಿ ಈ ಸರಣಿ ಅಪಘಾತ ನಡೆದಿದೆ. ಬ್ರೇಕ್ ಫೇಲ್ ಆದ ಮರಳು ತುಂಬಿದ ಲಾರಿ. 2 ಕಾರು, 2 ಬೈಕ್, 1 ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡೆದು ಬಸ್ ನಿಲ್ದಾಣಕ್ಕೆ ನುಗ್ಗಿದೆ.
ಅಪಘಾತದಲ್ಲಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಒಬ್ಬರು ಮೃತಪಟ್ಟಿದ್ದು, 6 ಜನರು ಗಾಯಗೊಂಡಿದ್ದಾರೆ. ಇವರಲ್ಲಿ ಒಬ್ಬರ ಎರಡೂ ಕಾಲುಗಳು ತುಂಡಾಗಿವೆ ಎಂದು ತಿಳಿದುಬಂದಿದೆ. ಗಾಯಗೊಂಡವರನ್ನು ಲಕ್ಷ್ಮೀ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಶ್ರೀ ಕಾಲಭೈರವ ಹೆಸರಿನ ಲಾರಿ ಮರಳು ತುಂಬಿಕೊಂಡು ಸುಂಕದಕಟ್ಟೆ ಕಡೆಯಿಂದ ಆಗಮಿಸುವಾಗ ಬ್ರೇಕ್ ಫೇಲ್ ಆಗಿದೆ. ದೂರ ಓಡಿ ಎಂದು ಚಾಲಕ ಕೂಗಲು ಆರಂಭಿಸಿದ್ದಾನೆ. ನಿಯಂತ್ರಣ ಕಳೆದುಕೊಂಡ ಲಾರಿ ಎಡಭಾಗದಲ್ಲಿದ್ದ ಕಾರು, ಬೈಕ್ಗಳಿಗೆ ಡಿಕ್ಕಿ ಹೊಡೆದಿದೆ, ಬಳಿಕ ಬಸ್ ನಿಲ್ದಾಣಕ್ಕೆ ನುಗ್ಗಿದೆ.