ನೀರು ಬಿಡಲು ಸಾಧ್ಯವಿಲ್ಲ: ತ. ನಾಡು ನಿಯೋಗಕ್ಕೆ ರಾಜ್ಯ ಸರ್ಕಾರ ಸ್ಪಷ್ಟನೆ
ವಿಧಾನಸೌಧದಲ್ಲಿ ಏಪ್ರಿಲ್ 1ರಂದು ನಡೆದ ತಮಿಳುನಾಡು ಅಧಿಕಾರಿಗಳ ಜತೆಗಿನ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ವಿವರಣೆ.
ಚೆನ್ನೈ, ಏಪ್ರಿಲ್ 1: ಕರ್ನಾಟಕದಲ್ಲಿ ಭೀಕರ ಬರಗಾಲವಿದ್ದು, ಸದ್ಯದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡಲು ಆಗುವುದಿಲ್ಲ ಎಂದು ಕರ್ನಾಟಕ ಸರ್ಕಾರ, ತಮಿಳುನಾಡು ಸರ್ಕಾರಕ್ಕೆ ಸ್ಪಷ್ಟಪಡಿಸಿದೆ.
ತಮಿಳುನಾಡು ಸರ್ಕಾರದ ನಿಯೋಗದೊಂದಿಗೆ ವಿಧಾನಸೌಧದಲ್ಲಿ ನಡೆದ ಮಾತುಕತೆ ನಡೆಯ ನಂತರ ರಾಜ್ಯ ಸರ್ಕಾರದ ಕಾರ್ಯದರ್ಶಿಯಾದ ಸುಭಾಷ್ ಚಂದ್ರ ಕುಂಟಿಯಾ ಅವರು, ಸುದ್ದಿಗೋಷ್ಠಿ ನಡೆಸಿ ಈ ವಿಚಾರ ತಿಳಿಸಿದರು.
ಕಾವೇರಿ ನೀರಿಗಾಗಿ, ತಮಿಳುನಾಡು ಮುಖ್ಯ ಕಾರ್ಯದರ್ಶಿ ಸೇರಿದಂತೆ ನಾಲ್ವರು ಅಧಿಕಾರಿಗಳ ನಿಯೋಗವೊಂದು ಬೆಂಗಳೂರಿಗೆ ಶುಕ್ರವಾರ (ಏ. 1) ಆಗಮಿಸಿತ್ತು.
ಸುದ್ದಿಗೋಷ್ಠಿಯಲ್ಲಿ ಸಭೆಯ ವಿವರಗಳನ್ನು ನೀಡಿದ ಕುಂಟಿಯಾ, ''ಮಾತುಕತೆಯ ಮೂಲಕ ಕಾವೇರಿ ನದಿ ನೀರು ಸಮಸ್ಯೆ ಬಗೆಹರಿಸಿಕೊಳ್ಳಲು ತಮಿಳುನಾಡು ಅಧಿಕಾರಿಗಳು ರಾಜ್ಯಕ್ಕೆ ಆಗಮಿಸಿದ್ದು ಸ್ವಾಗತಾರ್ಹ ಬೆಳವಣಿಗೆ. ಆದರೆ, ನಮ್ಮ ರಾಜ್ಯದಲ್ಲಿ ಬರಗಾಲ ಇರುವುದರಿಂದ ಅಣೆಕಟ್ಟುಗಳಲ್ಲಿ ನೀರಿಲ್ಲ ಎಂಬುದನ್ನು ತಮಿಳುನಾಡು ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ'' ಎಂದು ಹೇಳಿದರು.
''ಈಗಾಗಲೇ ಬಿರು ಬೇಸಿಗೆ ಆರಂಭವಾಗಿರುವುದರಿಂದ ತಮಿಳುನಾಡಿಗೆ ನೀರು ಬಿಡಲು ಆಗುವುದಿಲ್ಲ. ಈಗಾಗಲೇ ಕಾವೇರಿ ನದಿಗೆ ಕಟ್ಟಲಾಗಿರುವ ಅಣೆಕಟ್ಟುಗಳು ತಳಮಟ್ಟ ಮುಟ್ಟಿದ್ದು, ಭೀಕರ ತಲೆದೋರಿದೆ. ತಮಿಳುನಾಡಿನಲ್ಲೂ ನೀರಿನ ಬರವಿದೆ ಎಂಬುದು ನಮಗೆ ತಿಳಿದಿದೆ. ಒಂದೊಮ್ಮೆ ಚೆನ್ನಾಗಿ ಮಳೆ ಬಂದು ಅಣೆಕಟ್ಟಿನಲ್ಲಿ ನೀರು ಸಂಗ್ರಹವಾದರೆ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗುತ್ತದೆ'' ಎಂದು ಹೇಳಿರುವುದಾಗಿ ಕುಂಟಿಯಾ ವಿವರಿಸಿದರು.