ನೀರು ಮಾರಾಟ ದಂಧೆಗೆ ಕಡಿವಾಣ : ಸಚಿವ ಯು ಟಿ ಖಾದರ್
ಸದ್ಯದಲ್ಲೇ ಸ್ಟಾರ್ ಹೋಟೆಲ್ಗಳ ಮೇಲೂ ದಾಳಿ ನಡೆಸುವ ಎಚ್ಚರಿಕೆ ನೀಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್.
ಬೆಂಗಳೂರು, ಮೇ 4: ದೊಡ್ಡ ಹೋಟೆಲ್ ಗಳು, ಸೂಪರ್ ಮಾರ್ಕೆರ್ಟ್, ಮಲ್ಟಿಪ್ಲೆಕ್ಸ್ ಗಳಲ್ಲಿ ಕುಡಿಯುವ ನೀರಿನ ಬಾಟಲಿಗಳ ಮೇಲೆ ನಿಗದಿತ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡುವ ಅಕ್ರಮಗಳಿಗೆ ಬ್ರೇಕ್ ಹಾಕಲಾಗುವುದು ಎಂದು ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಮಲ್ಟಿಪ್ಲೆಕ್ಸ್ ಗಳಲ್ಲಿ ನೀರಿನ ಬಾಟಲಿಗಳ ಮೇಲಿರುವ ದರಕ್ಕಿಂತ ಹೆಚ್ಚಿನ ಹಣವನ್ನು ನಿಗದಿಗೊಳಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮೇ 3ರಂದು ರಾಜ್ಯ ಕಾನೂನು ಮಾಪನ ಅಧಿಕಾರಿಗಳ ತಂಡ, ನಗರದ ಮಂತ್ರಿ ಮಾಲ್, ಓರಿಯಾನ್ ಮಾಲ್ ಹಾಗೂ ಮಂತ್ರಿ ಮಾಲ್ ಗಳ ಮೇಲೆ ದಾಳಿ ನಡೆಸಿತ್ತು.[ಮಂತ್ರಿ ಮಾಲ್, ಓರೆಯಾನ್ ಮಾಲ್, ಸಿಗ್ಮಾ ಮಾಲ್ ಮೇಲೆ ದಾಳಿ]
ಇದಲ್ಲದೆ, ಬೆಳಗಾವಿ, ಹುಬ್ಬಳ್ಳಿ ರಾವೇರಿ, ಕಲಬುರಗಿ, ಮೈಸೂರು, ಉಡುಪಿ, ಮಂಗಳೂರು, ಚಿಕ್ಕಮಗಳೂರು, ಹಾಸನ ಹಾಗೂ ಮಡಿಕೇರಿಗಳಲ್ಲಿ ಒಟ್ಟಾರೆಯಾಗಿ 188 ಕಡೆ ದಾಳಿ ನಡೆಸಿ 73 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ವಿಕಾಸ ಸೌಧದಲ್ಲಿ ಈ ಕುರಿತು ಮಾತನಾಡಿದ ಆಹಾರ ಸಚಿವ ಯು ಟಿ ಖಾದರ್, ಜನರಿಗೆ ಅವಶ್ಯಕವಾದ ಕುಡಿಯುವ ನೀರನ್ನು ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ.[ಮೆಟ್ರೋ ಕಾಮಗಾರಿ ಮುಕ್ತಾಯಕ್ಕೆ ಮುನ್ನವೇ ರಾಷ್ಟ್ರಪತಿಗಳಿಗೆ ಆಹ್ವಾನ!]
ಆದರೆ ಇದರಲ್ಲಿಸಾಕಷ್ಟು ಅವ್ಯವಹಾರ ನಡೆಯುತ್ತಿದೆ. ನೀರು ನೆಪದಲ್ಲಿ ಹಣ ಸುಲಿಗೆಮಾಡಬಾರದು. ಎಲ್ಲೂ ಸಹ ಗ್ರಾಹಕರು ಕುಡಿಯುವ ನೀರನ್ನು ತೆಗೆದುಕೊಂಡು ಹೋಗುವುದನ್ನು ತಡೆಯಬಾರದು. ತಡೆದವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದರು.
ಕುಡಿಯುವ ನೀರನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡಿ ಮೊದಲ ಬಾರಿ ಸಿಕ್ಕಿಬಿದ್ದರೆ ರೂ. 2000 ದಂಡ, ಎರಡನೇ ಬಾರಿ ಸಿಕ್ಕಿಬಿದ್ದರೆ ಆರುತಿಂಗಳ ಜೈಲುವಾಸ ಎಂದು ಸಚಿವರು ಎಚ್ಚರಿಕೆ ನೀಡಿದರು. ಸದ್ಯದಲ್ಲೇ ಸ್ಟಾರ್ ಹೋಟೆಲ್ಗಳ ಮೇಲೂ ದಾಳಿ ನಡೆಸಲಾಗುವುದು ಎಂದರು.
ಬೆಂಗಳೂರಿನಲ್ಲಿ ಒಟ್ಟು 15 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಹೋಟೆಲ್ ಮತ್ತು ರೆಸ್ಟೋರೆಂಟ್ಗಳಲ್ಲಿ ಸೇವಾ ಶುಲ್ಕ ವಿಧಿಸಿ ಗ್ರಾಹಕರನ್ನು ಸುಲಿಗೆ ಮಾಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿತ್ತು. ಹೀಗಾಗಿ ಹೋಟೆಲ್ ಮತ್ತು ರೆಸ್ಟೋರೆಂಟ್ಗಳ ಮಾಲೀಕರನ್ನು ಕರೆದು ಸಭೆ ನಡೆಸಿ ಈ ಬಗ್ಗೆ ತಿಳುವಳಿಕೆ ನೀಡಿದ್ದೇವೆ.[ಟ್ರಾಫಿಕ್ ನಿಯಮ ಉಲ್ಲಂಘಿಸುವವರ ಮನೆ ಬಾಗಿಲಿಗೆ ಬಂದು ದಂಡ ವಸೂಲಿ]
ಕೇಂದ್ರ ಗ್ರಾಹಕರನೀತಿ ಪ್ರಕಾರ ಸೇವಾಶುಲ್ಕ ಗ್ರಾಹಕರಿಂದ ಪಡೆಯುವಂತಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಸಚಿವರು ತಿಳಿಸಿದರು.