ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ತಡೆ ಇಲ್ಲ: ಸಾ.ರಾ. ಗೋವಿಂದು
ಬೆಂಗಳೂರು, ಏಪ್ರಿಲ್ 22: ತಮಿಳುನಾಡಿನಲ್ಲಿ ಯಾವುದೇ ಕನ್ನಡ ಚಿತ್ರ ಪ್ರದರ್ಶನವನ್ನು ರದ್ದುಗೊಳಿಸಿಲ್ಲ. ಆ ಬಗ್ಗೆ ಗಾಳಿ ಸುದ್ದಿಗಳು ಹರಿದಾಡುತ್ತಿವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಸ್ಪಷ್ಟನೆ ನೀಡಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಕರ್ನಾಟಕದಲ್ಲಿ ಬಾಹುಬಲಿ ಚಿತ್ರದ ನಿಷೇಧವಿಲ್ಲ. ತಮಿಳು ನಟ ಸತ್ಯರಾಜ್ ಕ್ಷಮೆ ಕೂರುವ ಮೂಲಕ ಈ ವಿವಾದ ಅಂತ್ಯಗೊಂಡಿದೆ. ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳಿಗೆ ತೊಂದರೆಯಾಗಿಲ್ಲ. ಇಂಥಾ ಗಾಳಿ ಸುದ್ದಿಗಳಿಗೆ ಕಿವಿಗೊಡುವುದು ಬೇಡ'' ಎಂದು ಕನ್ನಡಪರ ಸಂಘಟನೆಗಳಿಗೆ ಕಿವಿಮಾತು ಹೇಳಿದರು.[ತಮಿಳುನಾಡಿಗೆ ಎಚ್ಚರಿಕೆ ನೀಡಿದ 'ಬಿಗ್ ಬಾಸ್' ಪ್ರಥಮ್!]
ಒಂಭತ್ತು ವರ್ಷಗಳ ಹಿಂದೆ ಕನ್ನಡಿಗರ ಬಗ್ಗೆ ಕೀಳಾಗಿ ಮಾತನಾಡಿದ್ದಕ್ಕೆ ತಮಿಳು ನಟ ಸತ್ಯರಾಜ್ ಶುಕ್ರವಾರ (ಏಪ್ರಿಲ್ 21) ಕ್ಷಮೆ ಕೋರಿದ್ದರು. ಆದರೆ, ಅದರ ಬೆನ್ನಲ್ಲೇ ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ತಡೆಯೊಡ್ಡಲಾಗಿದೆ ಎಂಬ ಸುದ್ದಿ ಹರಡಿತ್ತು.
ಈ ಹಿನ್ನೆಲೆಯಲ್ಲಿ, ರೊಚ್ಚಿಗೆದ್ದ ಕೆಲ ಕನ್ನಡಪರ ಸಂಘಟನೆಗಳ ಸದಸ್ಯರು, ಏಪ್ರಿಲ್ 22ರ ಬೆಳಗ್ಗೆ ಬೆಂಗಳೂರಿನ ಸಂಜಯಗಾಂಧಿ ನಗರದಲ್ಲಿರುವ ಪುಷ್ಪಾಂಜಲಿ ಥಿಯೇಟರ್ ಗೆ ನುಗ್ಗಿ ಅಲ್ಲಿ ಪ್ರದರ್ಶನಗೊಳ್ಳುತ್ತಿದ್ದ ತಮಿಳು ಚಿತ್ರಕ್ಕೆ ತಡೆಯೊಡ್ಡಿದ್ದರು. ಅಲ್ಲದೆ, ಚಿತ್ರ ಮಂದಿರದಲ್ಲಿದ್ದ ತಮಿಳು ಚಿತ್ರದ ಪೋಸ್ಟರ್ ಗಳನ್ನು ಹರಿದು ಹಾಕಿ ಪ್ರತಿಭಟಿಸಿದ್ದರು.