ಮಳೆ ಬಾರದಿದ್ದರೆ ತಮಿಳುನಾಡಿಗೆ ಕಾವೇರಿ ನೀರಿಲ್ಲ: ಸಿದ್ದರಾಮಯ್ಯ
ಕರ್ನಾಟಕದ ನಿಯೋಗದ ಅಭಿಪ್ರಾಯವನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಪುನರುಚ್ಚರಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಮಳೆ ಬಾರದಿದ್ದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಬೆಂಗಳೂರು, ಏಪ್ರಿಲ್ 3: ರಾಜ್ಯದಲ್ಲೇ ನೀರಿನ ಸಮಸ್ಯೆ ಇರುವುದರಿಂದ, ಇನ್ನು ಕೆಲವೇ ದಿನಗಳಲ್ಲಿ ಮಳೆ ಬಾರದಿದ್ದಲ್ಲಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಾನವೀಯತೆಯ ನೆಲೆಯ ಮೇಲೆ ತಮಿಳುನಾಡಿಗೆ ಕರ್ನಾಟಕ ನೀರು ಬಿಡಬೇಕು ಎಂದು ಏಪ್ರಿಲ್ 1, ಶನಿವಾರದಂದು ವಿಧಾನ ಸೌಧದಲ್ಲಿ ನಡೆಸಿದ ಸಭೆಯ ಸಂದರ್ಭದಲ್ಲಿ ತಮಿಳು ನಾಡಿನ ನಿಯೋಗ, ಕರ್ನಾಟಕದ ನಿಯೋಗಕ್ಕೆ ಮನವಿ ಮಾಡಿಕೊಂಡಿತ್ತು.[ನೀರು ಬಿಡಲು ಸಾಧ್ಯವಿಲ್ಲ: ತ. ನಾಡು ನಿಯೋಗಕ್ಕೆ ರಾಜ್ಯ ಸರ್ಕಾರ ಸ್ಪಷ್ಟನೆ]
ಆದರೆ ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳು ಬರದಿಂದ ತತ್ತರಿಸುತ್ತಿದ್ದು, ಕೃಷಿ, ದಿನನಿತ್ಯದ ಬಳಕೆ, ಕುಡಿಯುವ ನೀರು ಇತ್ಯಾದಿ ಉದ್ದೇಶಗಳಿಗೆ ಕಾವೇರಿ ನೀರಿನ ಅಗತ್ಯವಿದೆ. ಮಳೆ ಬಾರದಿದ್ದಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕದ ನಿಯೋಗ ಸ್ಪಷ್ಟಪಡಿಸಿತ್ತು.[ಜಲವಿವಾದಗಳ ವಕೀಲ ಅನಿಲ್ ದಿವಾನ್ ಸಾವಿಗೆ ಸಿಎಂ ಸಂತಾಪ]
ಇದೀಗ ನಿಯೋಗದ ಅಭಿಪ್ರಾಯವನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಪುನರುಚ್ಚರಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಮಳೆ ಬಾರದಿದ್ದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಉದ್ಯಾನ ನಗರಿಯಲ್ಲಿ ಈಗಾಗಲೇ ನೀರಿನ ಅಭಾವ ತಲೆದೋರಿದ್ದು, ಇನ್ನು ಕೆಲವೇ ದಿನಗಳಲ್ಲಿ ಜಲಕ್ಷಾಮದ ಬಿಸಿ ಬೆಂಗಳೂರನ್ನೂ ತಟ್ಟಲಿದೆ. ಮಳೆ ಬಾರದೇ ಇದ್ದಲ್ಲಿ ಸಿಲಿಕಾನ್ ಸಿಟಿಯ ಜನಜೀವನಕ್ಕೆ ಅಗತ್ಯ ನೀರಿನ ಪೂರೈಕೆ ನಿಜಕ್ಕೂ ಕಷ್ಟ ಎನ್ನುತ್ತಿದೆ ಬೆಂಗಳೂರು ಜಲ ಪೂರೈಕೆ ಮತ್ತು ಒಳಚರಂಡಿ ಮಂಡಳಿ(BWSSB).
ರಾಜ್ಯದ ರಾಜಧಾನಿ ಸೇರಿದಂತೆ, ಕರ್ನಾಟಕದಲ್ಲಿ ಕಾವೇರಿ ನೀರಿನ ಮೇಲೆ ಅವಲಂಬಿತವಾಗಿರುವ ಹಲವು ಪ್ರದೇಶಗಳಲ್ಲೇ ನೀರಿನ ಕೊರತೆ ಇರುವಾಗ ನ್ಯಾಯಾಲಯದ ಆದೇಶದ ಮೇರೆಗೆ ತಮಿಳು ನಾಡಿಗೆ ಈಗಾಗಲೇ ಪೂರೈಸುತ್ತಿರುವ 2000 ಕ್ಯೂಸೆಕ್ಸ್ ಕಾವೇರಿ ನೀರನ್ನು ಬಿಡುವುದಕ್ಕೆ ಸಾಧ್ಯವಾಗುವುದಿಲ್ಲ ಎಂಬುದು ಸರ್ಕಾರದ ಅಂಬೋಣ.[ಕಾವೇರಿ ನ್ಯಾಯಾಧಿಕರಣ ಅಧ್ಯಕ್ಷರಾಗಿ ನ್ಯಾ. ಮನೋಹರ್ ಸಪ್ರೆ ನೇಮಕ]
ಬೇಸಿಗೆಯ ಝಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈಗಾಗಲೆ ಬೆಂಗಳೂರಿನ ತಾಪಮಾನ 38 ಡಿಗ್ರಿ ಸೆಲ್ಷಿಯಸ್ ತಲುಪಿ ದಾಖಲೆ ಬರೆದಿದೆ. ರಾಜ್ಯ ನಾಲ್ಕೈದು ಬಾರಿ ಉತ್ತಮ ಮಳೆಯಾಗಿಬಿಟ್ಟರೆ, ಮುಂಗಾರು ಆರಂಭವಾಗುವವರೆಗೂ ರಾಜಧಾನಿಯ ಜನರು ಚಿಂತಿಸುವ ಅಗತ್ಯವಿರುವುದಿಲ್ಲ. ಆದರೆ ಸಾಮಾನ್ಯವಾಗಿ ತಾಪಮಾನ 35 ಡಿಗ್ರಿ ಸೆಲ್ಷಿಯಸ್ ಗಡಿ ದಾಟುತ್ತಿದ್ದಂತೆಯೇ ಬೀಳುತ್ತಿದ್ದ ಮಳೆ ಈ ಬಾರಿ ಕೈಕೊಟ್ಟಿರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.