ಬೆಳ್ಳಂದೂರು ಪರಿಸರದ ಕಾರ್ಖಾನೆಗಳ ನೀರು, ವಿದ್ಯುತ್ ಕಡಿತಕ್ಕೆ ಆದೇಶ
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಬೆಳ್ಳಂದೂರು ಕೆರೆ ಪರಿಸರವನ್ನು ಹಾಳು ಮಾಡುತ್ತಿರುವ 76 ಕಾರ್ಖಾನೆಗಳಿಗೆ ನೀರು ಹಾಗೂ ವಿದ್ಯುತ್ ಸಂಪರ್ಕ ನಿಲ್ಲಿಸುವಂತೆ ಹಸಿರು ನ್ಯಾಯಾಧೀಕರಣ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ.
ನವದೆಹಲಿ, ಮೇ 25: ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಬೆಳ್ಳಂದೂರು ಕೆರೆ ಪರಿಸರವನ್ನು ಹಾಳು ಮಾಡುತ್ತಿರುವ 76 ಕಾರ್ಖಾನೆಗಳನ್ನು ಮುಚ್ಚುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಖಡಕ್ ಆದೇಶ ನೀಡಿದೆ.
ಈ ಕಾರ್ಖಾನೆಗಳಿಗೆ ನೀರು ಹಾಗೂ ವಿದ್ಯುತ್ ಸಂಪರ್ಕ ನಿಲ್ಲಿಸುವಂತೆ ಹಸಿರು ನ್ಯಾಯಾಧೀಕರಣ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ.
ಇನ್ನು ಕೆರೆ ಸುತ್ತ ಮುತ್ತಲಿನ ಮನೆಗಳು ಮತ್ತು ಅಪಾರ್ಟ್ ಮೆಂಟ್ ಗಳಲ್ಲಿ ಕೊಳಚೆ ನೀರು ಶುದ್ದೀಕರಣ ವ್ಯವಸ್ಥೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು ಇಲ್ಲದಿದ್ದಲ್ಲಿ ಅವರಿಗೂ ವಿದ್ಯುತ್ ಮತ್ತು ನೀರಾವರಿ ಸಂಪರ್ಕ ಕಡಿತಗೊಳಿಸುವಂತೆ ಆದೇಶ ನೀಡಿದೆ. ಜತೆಗೆ ಅಧಿಕಾರಿಗಳ ತಂಡ ಈ ನೀರು ಶುದ್ದೀಕರಣ ವ್ಯವಸ್ಥೆಗಳು ಸರಿಯಾಗಿ ಕೆಲಸ ಮಾಡುತ್ತಿವೆ ಎಂಬುದನ್ನು ಪರಿಶೀಲನೆ ಮಾಡಬೇಕು ಎಂದೂ ಹೇಳಿದೆ.
ಇನ್ನು ಅಗತ್ಯಬಿದ್ದರೆ ಈ ಕಂಪೆನಿಗಳನ್ನು ಜಪ್ತಿ ಮಾಡಿ ಎಂದೂ ರಾಜ್ಯ ಮಾಲಿನ್ಯ ನಿಯಂತ್ರಣ ಇಲಾಖೆಗೆ ಕೋರ್ಟ್ ಆದೇಶ ನೀಡಿದೆ. ನ್ಯಾಯಧೀಶ ಸ್ವತಂತ್ರ ಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಇನ್ನು ಮಧ್ಯಮ ಗಾತ್ರದ ಯಾವುದೇ ಕೈಗಾರಿಕೆಗಳೂ ಮಾಲಿನ್ಯದಲ್ಲಿ ತೊಡಗಿದ್ದರೆ ಅವರಿಗೂ ನೊಟೀಸ್ ನೀಡುವಂತೆ ನ್ಯಾಯಾಧೀಕರಣ ಹೇಳಿದೆ. ಕೆರೆಯ ನೈರ್ಮಲ್ಯಕ್ಕೆ ಸರಕಾರದ ಇಲಾಖೆಗಳು ಮತ್ತು ಕರ್ನಾಟಕ ಸರಕಾರವೇ ಜವಾಬ್ದಾರಿ. ಯಾರಾದರೂ ತಂದು ಕರೆಯಲ್ಲಿ ಕಸ ಸುರಿದರೆ 5 ಲಕ್ಷ ದಂಡ ವಿಧಿಸುವಂತೆ ನ್ಯಾಯಾಧೀಕರಣ ಹೇಳಿದೆ.
ಫೆಬ್ರವರಿ 20ರಂದು ಮಾಧ್ಯಮ ವರದಿಗಳ ಆಧಾರದಲ್ಲಿ ಬೆಳ್ಳಂದೂರು ಕೆರೆಯ ಸಮಸ್ಯೆಯನ್ನು ನ್ಯಾಯಾಧೀಕರಣ ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡು ವಿಚಾರಣೆಗೆ ಒಳಪಡಿಸಿತ್ತು.